Karnataka Elections: ಬೆಳಗಾವಿಯ 12 ಕ್ಷೇತ್ರ ಗೆಲ್ಲಲು ಸತೀಶ್ ಜಾರಕಿಹೊಳಿ ತಂತ್ರ- ಇಲ್ಲಿದೆ ಇನ್ಸೈಡ್ ಸ್ಟೋರಿ
ಬೆಂಗಳೂರು, ಏಪ್ರಿಲ್ 07: ಕರ್ನಾಟಕ ವಿಧಾನಸಭೆಗೆ ಚುನಾವಣೆ ( Karnataka Elections 2023 ) ದಿನಾಂಕಗಳು ಪ್ರಕಟಗೊಂಡಿವೆ. ಮೇ 10ರಂದು ನಡೆಯಲಿರುವ ಮತದಾನದ ಫಲಿತಾಂಶ ಮೂರು ದಿನಗಳ ಬಳಿಕ ಹೊರಬರಲಿದೆ. ಈ ಸಂದರ್ಭ ರಾಜ್ಯ ರಾಜಕಾರಣದಲ್ಲಿ ಹಲವು ಮಹತ್ತರ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಬೆಳಗಾವಿ ( Belagavi ) ರಾಜಕಾರಣವು ರಾಜ್ಯದಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಬೆಳಗಾವಿ ಚುನಾವಣಾ ರಾಜಕೀಯದ ಕುರಿತು ಕಾಂಗ್ರೆಸ್ ಕಾರ್ಯದರ್ಶಿ, ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಒಟ್ಟು 18 ಕ್ಷೇತ್ರಗಳ ಪೈಕಿ 12 ವಿಧಾನಸಭೆ ಕ್ಷೇತ್ರಗಳಲ್ಲಿ ಜಯಗಳಿಸುವುದಾಗಿ ಸತೀಶ್ ಜಾರಕಿಹೊಳಿ ಭರವಸೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವಿದೆ. ಇನ್ನುಳಿದಂತೆ ಎಲ್ಲರ ಮನವೊಲಿಸಲಾಗಿದೆ. 2018ರ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ಹಾಗೂ ರಾಯಬಾಗದಲ್ಲಿ ಬಂಡಾಯದಿಂದ ಕ್ಷೇತ್ರಗಳನ್ನು ಕಳೆದುಕೊಂಡೆವು. ಈ ಸಾರಿ ಎಲ್ಲರನ್ನು ಹೊಂದಾಣಿಕೆ ಮಾಡಿ ಚುನಾವಣೆ ಗೆಲ್ಲುವಂತೆ ಹೈಕಮಾಂಡ್ ನನಗೆ ಜವಾಬ್ದಾರಿ ನೀಡಿದೆ ಎಂದು ಜಾರಕಿಹೊಳಿ ತಿಳಿಸಿದ್ದಾರೆ.
ಈಗಾಗಲೇ 166 ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಚಿಕ್ಕೋಡಿ-ಸದಲಗಾದಿಂದ ಗಣೇಶ ಹುಕ್ಕೇರಿ, ಕಾಗವಾಡದಿಂದ ಭರಮಗೌಡ ಆಲಗೌಡ ಕಾಗೆ, ಕುಡಚಿ ( ಎಸ್ಸಿ ) ಕ್ಷೇತ್ರದಿಂದ ಮಹೇಂದ್ರ ತಮ್ಮಣ್ಣನವರ್, ಹುಕ್ಕೇರಿ ಕ್ಷೇತ್ರದಿಂದ ಎಬಿ ಪಾಟೀಲ್, ಯಮಕನಮರಡಿ ( ಎಸ್ಟಿ ) ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ, ಬೆಳಗಾವಿ ಗ್ರಾಮಾಂತರದಿಂದ ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಖಾನಾಪುರ ಕ್ಷೇತ್ರದಿಂದ ಡಾ. ಅಂಜಲಿ ನಿಂಬಾಳ್ಕರ್, ಬೈಲಹೊಂಗಲದಿಂದ ಮಹಾಂತೇಶ ಶಿವಾನಂದ ಕೌಜಲಗಿ, ರಾಮದುರ್ಗ ಕ್ಷೇತ್ರದಿಂದ ಅಶೋಕ್ ಎಂ. ಪಟ್ಟಣ, ನಿಪ್ಪಾಣಿಯಿಂದ ಕಾಕಾ ಸಾಹೇಬ್ ಪಾಟೀಲ್, ಗೋಕಾಕದಿಂದ ಮಹಾಂತೇಶ್ ಕಡಾಡಿ, ಕಿತ್ತೂರಿನಿಂದ ಬಾಬಾ ಸಾಹೇಬ ಪಾಟೀಲ್ ಹಾಗೂ ಸವದತ್ತಿ ಎಲ್ಲಮ್ಮ ಕ್ಷೇತ್ರದಿಂದ ವಿಶ್ವಾಸ್ ವಸಂತ ವೈದ್ಯ ಅವರು ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ.

ಈ ಮೂಲಕ ಒಟ್ಟು 13 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದೆ. ಇನ್ನುಳಿದ ಐದು ಕ್ಷೇತ್ರಗಳಿಗೆ ಮೂರನೇ ಪಟ್ಟಿಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಲಿದೆ.
ಈಗ ಬಿಡುಗಡೆ ಆಗಿರುವ 13 ಕ್ಷೇತ್ರಗಳಲ್ಲಿ ಸತೀಶ್ ಜಾರಕಿಹೊಳಿ ಹಿಡಿತ ಹೊಂದಿದ್ದಾರೆ. ಇಲ್ಲಿ ಅವರ ರಾಜಕೀಯ ತಂತ್ರಗಾರಿಯೂ ಕೆಲಸ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಉದಾಹರಣೆಗೆ ಗೋಕಾಕದಿಂದ ಮಹಾಂತೇಶ್ ಕಡಾಡಿ ಅವರಿಗೆ ಸತೀಶ್ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದಾರೆ.
ಮಹಾಂತೇಶ್ ಕಡಾಡಿ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಗೋಕಾಕದ ಹೆಸರಾಂತ ವೈದ್ಯರು ಹೌದು. ಈ ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಮತಗಳು ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಕಡಾಡಿ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸವದತ್ತಿ ಎಲ್ಲಮ್ಮ ಕ್ಷೇತ್ರದಲ್ಲಿ ವಿಶ್ವಾಸ್ ವೈದ್ಯ ಅವರನ್ನು ಕಣಕ್ಕಿಳಿಸಲಾಗಿದೆ. ಅವರು ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಆನಂದ ಮಾಮನಿ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ಸೋಲು ಕಂಡರೂ ಸಹ ಐದು ವರ್ಷ ಜನರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಸತೀಶ್ ಶಿಪಾರಸ್ಸು ಮಾಡಿದ್ದರೆಂದು ತಿಳಿದುಬಂದಿದೆ.
ಖಾನಾಪುರದಲ್ಲಿ ಡಾ. ಅಂಜಲಿ ನಿಂಬಾಳ್ಕರ್, ಬೈಲಹೊಂಗಲದಲ್ಲಿ ಮಹಾಂತೇಶ ಶಿವಾನಂದ ಕೌಜಲಗಿ, ಚಿಕ್ಕೋಡಿ-ಸದಲಗಾದಿಂದ ಗಣೇಶ ಹುಕ್ಕೇರಿ ಅವರಿಗೆ ಮಣೆ ಹಾಕಲಾಗಿದೆ. ಅವರು ಪ್ರಸ್ತುತ ಈ ಕ್ಷೇತ್ರಗಳಲ್ಲಿ ಶಾಸಕರಾಗಿದ್ದಾರೆ. ಈ ಬಾರಿಯ ಗೆಲುವು ಸಾಧಿಸಲಿದ್ದಾರೆ ಎಂಬ ಭರವಸೆಯನ್ನು ಸತೀಶ್ ಜಾರಕಿಹೊಳಿ ವ್ಯಕ್ತಪಡಿಸಿದ್ದಾರೆ.
ಮಹತ್ವದ ಅಥಣಿ ಕ್ಷೇತ್ರದಲ್ಲಿ ಕಾದು ನೋಡುವ ತಂತ್ರವನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಕಾರಣ, ಅಥಣಿ ಕ್ಷೇತ್ರದ ಟಿಕೆಟ್ಗಾಗಿ ಬಿಜೆಪಿಯಲ್ಲಿ ತೀವ್ರ ಬಂಡಾಯವೆದ್ದಿದೆ. ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಬೇಕೆಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಆದರೆ, ತಮಗೇ ಟಿಕೆಟ್ ನೀಡಬೇಕೆಂದು ಲಕ್ಷ್ಮಣ್ ಸವದಿ ಒತ್ತಾಯ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾದು ನೋಡುವ ತಂತ್ರವನ್ನು ಕಂಡುಕೊಂಡಿದೆ.












Click it and Unblock the Notifications