ನಮಗೆ ದೇಶವೇ ಮೊದಲು, ಕಾಂಗ್ರೆಸ್ಗೆ ಕುಟುಂಬ ಮೊದಲು: ಮೋದಿ
ಬೆಳಗಾವಿ, ಮೇ 09: ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಮಗಳೂರು ಸಮಾವೇಶ ಮುಗಿಸಿ ಬೆಳಗಾವಿಗೆ ಆಗಮಿಸಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮೋದಿ ಅವರು ಮಾತನಾಡುತ್ತಿದ್ದಾರೆ.
ಮಾಮೂಲಿನಂತೆ ಮೊದಲಿಗೆ ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಅವರು, ಬೆಳಗಾವಿಯನ್ನು ಕುಂದಾನಗರಿ ಎಂದು ಕರೆದರು. ರಾಣಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಛತ್ರಪತಿ ಶಿವಾಜಿಯನ್ನು ನೆನೆದರು.
ಜನರು ಮೋದಿ ಭಾಷಣದ ಕನ್ನಡ ಅನುವಾದ ಬೇಡವೆಂದರು. 'ಜನರೇ ನಮ್ಮ ಹೈಕಮಾಂಡ್ ನೀವು ಏನು ಹೇಳುತ್ತೀರೋ ಅದನ್ನೇ ನಾವು ಮಾಡುತ್ತೇವೆ' ಎಂದು ಮೋದಿ ಹೇಳಿದರು.

* ಕಾಂಗ್ರೆಸ್ ಪಕ್ಷ ಭಾರತದ ಎಲ್ಲ ಭಾಗಗಳಲ್ಲೂ ಮುಗಿದುಹೋಗಿದೆ. ಇದು ಕೇವಲ ರಾಜ್ಯಗಳಿಂದ ಮಾತ್ರವಷ್ಟೆ ಅಲ್ಲ ಜನರ ಹೃದಯದಿಂದಲೂ ಕಾಂಗ್ರೆಸ್ ನಿರ್ಗಮಿಸಿಬಿಟ್ಟಿದೆ.
* ಕಾಂಗ್ರೆಸ್ನವರು ತಾವು ಈ ಐದು ವರ್ಷದಲ್ಲಿ ಏನು ಮಾಡಿದ್ದಾರೆ ಎಂದು ಹೇಳುತ್ತಿಲ್ಲ ಬದಲಿಗೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲೂ ಮೋದಿ.. ಮೋದಿ ಎನ್ನುತ್ತಿದ್ದಾರೆ. ನಿನ್ನೆ ಯಾರೊ ನರೇಂದ್ರ ಎನ್ನುವ ಅಭ್ಯರ್ಥಿ ಪರ ಮತ ಕೇಳುತ್ತಿದ್ದ ಸಿದ್ದರಾಮಯ್ಯ ನರೇಂದ್ರ ಮೋದಿಗೆ ಮತ ಹಾಕಿ ಎಂದರಂತೆ ಎಂದು ನಕ್ಕರು ಮೋದಿ.
* ಚುನಾವಣೆಯಲ್ಲಿ ಸೋಲು ಖಂಡಿತ ಎಂಬುದು ಕಾಂಗ್ರೆಸ್ಗೆ ಗೊತ್ತಾಗಿಬಿಟ್ಟಿದೆ ಹಾಗಾಗಿ ಅವರು ಪ್ರಚಾರವನ್ನೇ ಕಡಿಮೆ ಮಾಡಿಬಿಟ್ಟಿದ್ದಾರೆ. ಹಾಗಾಗಿ ಅವರು ಗೆಲ್ಲಲು ಅಡ್ಡಹಾದಿ ಹಿಡಿದಿದ್ದಾರೆ.
* ನೀವೆಲ್ಲಾ ನೋಡುತ್ತಿದ್ದೀರಾ ಬೆಂಗಳೂರಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಸಿಕ್ಕಿದೆ. ಇದು ಬೆಂಗಳೂರಲ್ಲಿ ಮಾತ್ರವೇ ಅಲ್ಲ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಈ ರೀತಿಯ ಕುಕೃತ ಮಾಡುತ್ತಿದೆ.
* ಬಾದಾಮಿ ಬಳಿ ರೆಸಾರ್ಟ್ ಮೇಲೆ ಐಟಿ ದಾಳಿ ನಡೆದ ಬಗ್ಗೆ ಉಲ್ಲೇಖಿಸಿದ ಮೋದಿ ಅವರು, ಸಿದ್ದರಾಮಯ್ಯ ತಂಗಿದ್ದ ರೆಸಾರ್ಟ್ನಲ್ಲಿ ಐಟಿ ದಾಳಿ ನಡೆದು ಹಣ ಸಿಕ್ಕಿದೆ ಇದಕ್ಕಿಂತಲೂ ಅವಮಾನ ಏನಿದೆ ಎಂದು ಪ್ರಶ್ನಿಸಿದರು.
* ಚುನಾವಣೆ ಹತ್ತಿರ ಬಂದಂತೆ ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸುತ್ತದೆ. ಅವರು ಈ ಪಕ್ಷ ಸೇರಿದರು, ಅವರು ಆ ಪಕ್ಷ ಸೇರಿದರು ಎಂದು ಸುದ್ದಿ ಹರಡಿಸುತ್ತಾರೆ ಅದನ್ನು ನೀವು ನಂಬಬೇಡಿ.
* ಬೆಳಗಾವಿಯಲ್ಲಿ ಕುಕ್ಕರ್ ದೊರಕಿದೆಯಂತೆ, ಅಲ್ಲಾ ಈ ಕಾಂಗ್ರೆಸ್ಗೆ ಚುನಾವಣೆ ಸಮಯದಲ್ಲಿ ಏನು ಬೇಯಿಸಬೇಕಿತ್ತು. ಕೇವಲ ಕುಕ್ಕರ್ ಮಾತ್ರವೇ ಅಲ್ಲ ರಾಜ್ಯದಲ್ಲಿ ಹಣ, ಚಿನ್ನ ಏನೇನೋ ಸಿಕ್ಕಿದೆ. ಇದು ಪವಿತ್ರವಾದ ಚುನಾವಣೆಯಾ?
* ಇಲ್ಲಿನ ಕಾಂಗ್ರೆಸ್ ಶಾಸಕರ ಮನೆ ಮೇಲೆ ಐಟಿ ರೇಡ್ ನಡೆದಾಗ ಗೋಡೆಯೊಳಗೆ ದುಡ್ಡು ದೊರಕಿತು. ಇಲ್ಲಿನ ಮಹಿಳಾ ಕಾಂಗ್ರೆಸ್ ನಾಯಕಿ (ಲಕ್ಷ್ಮಿ ನಿಂಭಾಳ್ಕರ್) ಅವರೂ ಸಹ ಇದೇ ಸಾಲಿಗೆ ಸೇರಿದವರು.
* 2022 ರಷ್ಟರಲ್ಲಿ ದೇಶದ ಬಡ, ಮಧ್ಯಮ, ಕೆಳ ಮಧ್ಯಮ ಎಲ್ಲರಿಗೂ ಮನೆ ಇರುವಂತೆ ಮಾಡುವುದು ನಮ್ಮ ಸರ್ಕಾರದ ಶಪತ. ಆ ಮನೆಯಲ್ಲಿ ನೀರು, ವಿದ್ಯುತ್ ಎಲ್ಲಾ ವ್ಯವಸ್ಥೆಯನ್ನೂ ನಾವು ಮಾಡುತ್ತೇವೆ.
* ಕೇವಲ 90 ಪೈಸೆಗೆ ಪ್ರಧಾನ ಮಂತ್ರಿ ಜೀವನ್ ರಕ್ಷಾ ಯೋಜನೆ ಮಾಡಿದ್ದೇವೆ. ಈಗಾಗಲೇ 2000 ಕೋಟಿಗೂ ಹೆಚ್ಚು ಹಣವನ್ನು ಈ ಯೋಜನೆಯ ಮೂಲಕ ಈಗಾಗಲೇ ಹಂಚಲಾಗಿದೆ.
* ನಾನು ಪ್ರತಿ ತಿಂಗಳು ತಂತ್ರಜ್ಞಾನದ ಮೂಲಕ ಎಲ್ಲಾ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಕೇಂದ್ರದ ಸಚಿವರೊಂದಿಗೆ ಸಭೆ ಮಾಡುತ್ತೇನೆ. ಅವರನ್ನೆಲ್ಲಾ ಒಟ್ಟಿಗೆ ಕೂರಿಸಿಕೊಂಡು ಪ್ರಶ್ನೆ ಮಾಡುತ್ತೇನೆ. ಇರದಿಂದಾಗಿ ನೆನಗುದಿಗೆ ಬಿದ್ದಿದ್ದ 10 ಲಕ್ಷ ಕೋಟಿ ರೂಪಾಯಿಯ ಯೋಜನೆಗಳನ್ನು ಪುನರ್ ಪ್ರಾರಂಭ ಮಾಡುವಂತೆ ಮಾಡಿದೆ.
* ಪ್ರತಿದಿನ ನನಗೆ ಬಂದಿರುವ ಪತ್ರಗಳಲ್ಲಿ ಕನಿಷ್ಟ 15 ಪತ್ರಗಳನ್ನಾದರೂ ಓದಿಯೇ ತೀರುತ್ತೇನೆ. ಒಮ್ಮೆ ತಮಿಳುನಾಡಿನ ಹೆಣ್ಣುಮಗಳು ಪತ್ರವನ್ನು ಓದಿದೆ. ಆಕೆ ಸ್ವ ಉದ್ಯೋಗ ಮಾಡಲು ಬಯಸಿದ್ದಳು. ಆಕೆ ಮುದ್ರಾ ಯೋಜನೆಯಿಂದ ಸಾಲ ಪಡೆದು ವ್ಯವಹಾರ ಪ್ರಾರಂಭಿಸಿದೆ.
* ಯಾರಾದರೂ ಸಣ್ಣ ಉದ್ಯಮಿಗಳಿದ್ದ ಕೇಂದ್ರ ಸರ್ಕಾರದ ಜೆಮ್ ನಲ್ಲಿ ನೊಂದಾವಣಿ ಮಾಡಿಕೊಳ್ಳಿ ಅದರಲ್ಲಿ ನಿಮ್ಮ ಉತ್ಪನ್ನದ ವಿವರಣೆ ಹಾಕಿ ಸರ್ಕಾರಕ್ಕೆ ಸೂಕ್ತ ಅನಿಸಿದರೆ ನಿಮ್ಮ ಉತ್ಪನ್ನವನ್ನು ನೇರವಾಗಿ ಸರ್ಕಾರ ಕೊಳ್ಳುತ್ತದೆ.
* ಆಶಾ ಕಾರ್ಯಕರ್ತರಿಗೆ ನಾವು ಟ್ಯಾಬ್ಲೆಟ್ ನೀಡಿದ್ದೇವೆ ಇದರಿಂದ ಅವರ ಕಾರ್ಯಕ್ಷಮತೆ ಹೆಚ್ಚಿದೆ. ನಾವು ತಂತ್ರಜ್ಞಾನ ಬಳಸಿ ಆಡಳಿತಕ್ಕೆ ವೇಗ ನೀಡಿದ್ದೇವೆ ಹಾಗೂ ಭ್ರಷ್ಟಾಚಾರ ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ.
* ನಾವು ಇದನ್ನೆಲ್ಲಾ ಮಾಡಿರುವ ಕಾರಣ ನಮಗೆ ಭಾರತವೇ ಮೊದಲು ಆದರೆ ಕಾಂಗ್ರೆಸ್ಗೆ ಕುಟುಂಬವೇ ಮೊದಲು.
* ಮೇ 15ರಂದು ನೋಡಿಕೊಳ್ಳಿ, ಕಾಂಗ್ರೆಸ್ ಸೋತ ನಂತರ ಇವಿಎಂ ಮೇಲೆ ಆರೋಪ ಹೊರಿಸುತ್ತಾರೆ. ತಂತ್ರಜ್ಞಾನದ ಮೇಲೆ ಆರೋಪ ಹೊರಿಸುತ್ತಾರೆ. ಕಾಂಗ್ರೆಸ್ ನವರು ಸದಾ ದೂರು ಹಾಕುತ್ತಾರೆ ಮೋದಿ ನಿಮ್ಮ ವೈಯಕ್ತಿಕ ದಾಖಲೆ ಕದಿಯುತ್ತಾನೆ ಎಂದು ಹೀಗೆಲ್ಲಾ ಮಾಡಿದರೆ ದೇಶ ಮುಂದುವರೆಯುತ್ತದೆಯೇ?
* ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನು ಹಾಡಿ ಹೊಗಳಿದ ಮೋದಿ, ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳನ್ನು ಹೇಳಿದರು.
* ಮೇ 12ರಂದು ಬಿಜೆಪಿಗೆ ಮತ ನೀಡಿ ಬಿಜೆಪಿಗೆ ಬಹುಮತ ನೀಡಿ ಅಧಿಕಾರಕ್ಕೆ ತನ್ನಿ ಎಂದು ಮೋದಿ ಮನವಿ ಮಾಡಿದರು. 'ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ' ಘೋಷಣೆಯೊಂದಿಗೆ ಮೋದಿ ಅವರು ಭಾಷಣ ಮುಗಿಸಿದರು.












Click it and Unblock the Notifications