ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರನ ಮೆಚ್ಚಿದವರೇ 'ಶ್ರೀಮಂತ್'
ಬೆಂಗಳೂರು, ಡಿಸೆಂಬರ್.09: ರಾಜ್ಯ ವಿಧಾನಸಭಾ ಉಪ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಕ್ಷೇತ್ರಗಳು ಮಹತ್ವದ್ದು ಎನಿಸಿವೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಶಾಸಕರ ಸಿಟ್ಟು ಮೈತ್ರಿ ಸರ್ಕಾರಕ್ಕೆ ಮುಳುವಾಗಿದ್ದು ಎಲ್ಲರಿಗೂ ಗೊತ್ತಿದೆ. ಸಾಹುಕಾರ್ ನಿಗೆ ಬೆಂಬಲ ನೀಡಿದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ರಿಗೆ ಮತದಾರಪ್ರಭು ಜೈ ಜೈ ಎಂದಿದ್ದಾರೆ.
ಕಾಗವಾಡ ವಿಧಾನಸಭಾ ಉಪ ಚುನಾವಣೆ ಅದಲು-ಬದಲು ರಾಜಕಾರಣಕ್ಕೆ ಉತ್ತಮ ಉದಾಹರಣೆ. ಮೈತ್ರಿ ಸರ್ಕಾರಕ್ಕೆ ಶಾಕ್ ಕೊಟ್ಟ ಶಾಸಕ ಶ್ರೀಮಂತ್ ಪಾಟೀಲ್ ಯಾವುದೇ ಪಕ್ಷದಲ್ಲಿದ್ದರೂ ನಮಗೆ ಓಕೆ ಎಂದು ಮತದಾರ ಪ್ರಭುಗಳೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಗೆ ಕೈಕೊಟ್ಟು ಬಿಜೆಪಿ ಸೇರಿದ ನಾಯಕನಿಗೆ ಮತದಾರ ಗೆಲುವಿನ ಮುದ್ರೆ ಒತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಶ್ರೀಮಂತ್ ಪಾಟೀಲ್ ಅಖಾಡಕ್ಕೆ ಧುಮುಕಿದ್ದರು. ಇನ್ನೊಂದೆಡೆ ಅನರ್ಹ ಶಾಸಕನಿಗೆ ಟಿಕೆಟ್ ನೀಡಿದ್ದಕ್ಕೆ ಬಂಡಾಯದ ಬಾವುಟ ಹಾರಿಸಿದ್ದ ಬಿಜೆಪಿಯ ಮಾಜಿ ಶಾಸಕ ರಾಜು ಕಾಗೆ ಕಾಂಗ್ರೆಸ್ ಪಕ್ಷದಿಂದ ಅಖಾಡಕ್ಕೆ ಇಳಿದಿದ್ದರು. ಇದರ ಮಧ್ಯೆ ಜೆಡಿಎಸ್ ಅಭ್ಯರ್ಥಿಯಾಗಿ ಶ್ರೀಶೈಲ ತುಗಶೆಟ್ಟಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು.

ಡಿಸೆಂಬರ್.05ರಂದು ನಡೆದ ವಿಧಾನಸಭಾ ಉಪ ಚುನಾವಣೆ ಮತದಾನದ ವೇಳೆ ಕಾಗವಾಡದಲ್ಲಿ ಶೇ.76.27ರಷ್ಟು ಮತದಾನ ನಡೆದಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಹಾಗೂ ಬಿಜೆಪಿ ತೊರೆದು ಕಾಂಗ್ರೆಸ್ ಗೆ ತೆರಳಿದ್ದ ಬಿಜೆಪಿಯ ಮಾಜಿ ಶಾಸಕ ರಾಜು ಕಾಗೆ ನಡುವೆ ತೀವ್ರ ಪೈಪೋಟಿಯಿದೆ ಎಂದು ಹೇಳಲಾಗುತ್ತಿತ್ತು. ಎಲ್ಲ ಊಹಾಪೋಹಗಳಿಗೂ ಮತದಾರ ಇಂದು ಸ್ಪಷ್ಟ ತೀರ್ಪು ನೀಡಿದ್ದಾನೆ. ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶ್ರೀಮಂತ್ ಪಾಟೀಲ್ 18, 020 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಳೆದ ಬಾರಿ 2018ರಲ್ಲಿ ನಡೆದ ಕಾಗವಾಡ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶ್ರೀಮಂತ್ ಪಾಟೀಲ್ 83,060 ಮತಗಳನ್ನು ಪಡೆದಿದ್ದು, 32,942 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಸಿದ್ದರು. ಅಂದು ಬಿಜೆಪಿ ಅಭ್ಯರ್ಥಿಯಾಗಿದ್ದ ರಾಜು ಕಾಗೆ, 50,118 ಮತಗಳನ್ನು ಪಡೆದಿದ್ದರು.
ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪಡೆದ ಮತ
ಬಿಜೆಪಿ - ಶ್ರೀಮಂತ್ ಪಾಟೀಲ್ - 76557 ಮತ
ಕಾಂಗ್ರೆಸ್ - ರಾಜು ಕಾಗೆ - 58547 ಮತ












Click it and Unblock the Notifications