ಸಲ್ಲೇಖನ ವ್ರತ; ಜಂಗಲವಾಲೆ ಬಾಬಾ ದರ್ಶನಕ್ಕೆ ಭಕ್ತರ ದಂಡು
ಬೆಳಗಾವಿ, ಅಕ್ಟೋಬರ್ 17 : ಜಂಗಲವಾಲೆ ಬಾಬಾ ಎಂದು ಖ್ಯಾತಿ ಪಡೆದಿರುವ ಚಿನ್ಮಯಸಾಗರ ಮುನಿಗಳು ಯಮ ಸಲ್ಲೇಖನ ವ್ರತ ಸ್ವೀಕಾರ ಮಾಡಿದ್ದಾರೆ. ಮುನಿಗಳ ದರ್ಶನ ಪಡೆಯಲು ನೂರಾರು ಭಕ್ತರು ಆಗಮಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಜಂಗಲವಾಲೆ ಬಾಬಾ ಇದ್ದಾರೆ. 25 ದಿನಗಳಿಂದ ನಿಯಮ ಸಲ್ಲೇಖನ ವ್ರತ ಪಾಲಿಸುತ್ತಿದ್ದ ಅವರು, ಈಗ ಜೈನ ಧರ್ಮದ ಅನುಸಾರ ಶರೀರ ತ್ಯಾಗದ ತೀರ್ಮಾನಕ್ಕೆ ಬಂಧಿದ್ದಾರೆ.
ಯಮ ಸಲ್ಲೇಖನ ವ್ರತವನ್ನು ಜಂಗಲವಾಲೆ ಬಾಬಾ ಕೈಗೊಂಡಿದ್ದಾರೆ. ಹಂತ ಹಂತವಾಗಿ ಆಹಾರ, ನೀರು ಹಾಗೂ ದ್ರವ ವಸ್ತುಗಳನ್ನು ತ್ಯಜಿಸುತ್ತಾ ಕೊನೆಗೆ ಸಂಪೂರ್ಣವಾಗಿ ಎಲ್ಲವನ್ನೂ ತ್ಯಜಿಸಿ ಮನಸ್ಸನ್ನು ಗಟ್ಟಿಗೊಳಿಸಿಕೊಂಡು ಪರಮಾತ್ಮನನತ್ತ ಸಾಗುವುದು ವೃತವಾಗಿದೆ.

"ಮೋಕ್ಷಕ್ಕಾಗಿ ಶರೀರ ತ್ಯಾಗ ಮಾಡಲು ಈ ತೀರ್ಮಾನ ಕೈಗೊಂಡಿದ್ದೇನೆ. ದೇಹ ಸ್ಥಿತಿಯು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಇನ್ನು ಮುಂದೆ ನೀರನ್ನೂ ಸೇವಿಸದೇ ವ್ರತ ಆಚರಣೆ ಮಾಡುತ್ತೇನೆ" ಎಂದು ಬಾಬಾ ಭಕ್ತರಿಗೆ ತಿಳಿಸಿದ್ದಾರೆ.
ರಾಷ್ಟ್ರಸಂತ ಎಂದೇ ಖ್ಯಾತರಾಗಿರುವ ಚಿನ್ಮಯಸಾಗರ ಮುನಿಗಳು ಮೂರು ದಶಕಗಳಿಂದ ದೇಶಾದ್ಯಂತ ವಿಹರಿಸಿ ಸಾವಿರಾರು ಜನರನ್ನು ದುಶ್ಚಟಗಳಿಂದ ಮುಕ್ತಗೊಳಿಸಿದ್ದಾರೆ. ಉತ್ತರ ಭಾರತದ ಅನೇಕ ಗ್ರಾಮಗಳಲ್ಲಿ ಸುತ್ತಾಡಿ ಎಲ್ಲಾ ಧರ್ಮೀಯರಲ್ಲೂ ಧಾರ್ಮಿಕ ಮನೋಭಾವನೆ ಬೆಳೆಸಿದ್ದಾರೆ.
ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಜನಿಸಿದ ಚಿನ್ಮಯಸಾಗರ ಮುನಿಗಳು ಜೈನ ಧರ್ಮದ ಅಹಿಂಸಾ ತತ್ವಗಳಿಗೆ ಆಕರ್ಷಿತರಾಗಿ 1988ರ ಮಾರ್ಚ್ 31ರಂದು ಆಚಾರ್ಯ ವಿದ್ಯಾಸಾಗರ ಅವರಿಂದ ಮುನಿದೀಕ್ಷೆ ಪಡೆದಿದ್ದರು.
ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಚಿನ್ಮಯಸಾಗರ ಮುನಿಗಳಿಗೆ ಅಪಾರವಾದ ಭಕ್ತರಿದ್ದಾರೆ. ಮುನಿಗಳು ವ್ರತ ಸ್ವೀಕಾರ ಮಾಡಿದ ಬಳಿಕ ನೂರಾರು ಭಕ್ತರು ಅವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ.












Click it and Unblock the Notifications