ಬೆಳಗಾವಿ: ಆಶ್ರಮದಿಂದ ನಾಪತ್ತೆಯಾಗಿದ್ದ ಜೈನ ಮುನಿಯ ಬರ್ಬರ ಹತ್ಯೆ
ಬೆಳಗಾವಿ, ಜುಲೈ 08: ನಾಪತ್ತೆಯಾಗಿದ್ದ ಬೆಳಗಾವಿ ಜಿಲ್ಲೆಯ ಹಿರೇಕೋಟಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜ ಅವರ ಕೊಲೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದಲ್ಲಿ ನೀರವಮೌನ ಆವರಿಸಿದೆ.
ತಮ್ಮ ಆಶ್ರಮದಲ್ಲೇ ವಾಸ್ತವ್ಯವಾಗಿದ್ದ ಜೈನಮುನಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜ ಅವರು, ಜುಲೈ 6ರ ರಾತ್ರಿಯವರೆಗೂ ಆಶ್ರಮದಲ್ಲೇ ಇದ್ದರು. ಆದರೆ, ಜುಲೈ 7ರ ಬೆಳಗ್ಗೆಯಿಂದಲೇ ಅವರು ಆಶ್ರಮದಲ್ಲಿ ಕಾಣಿಸಿರಲಿಲ್ಲ. ಅವರ ಸಹಾಯಕಿ, ಸ್ವಾಮೀಜಿಯವರ ಕೊಠಡಿಗೆ ಸ್ವಾಮೀಜಿಯವರನ್ನು ಮಾತನಾಡಿಸಲು ಹೋಗಿದ್ದಾಗ ಅವರು ಅಲ್ಲಿರಲಿಲ್ಲ. ಇಡೀ ಆಶ್ರಮ ಹುಡುಕಿದರೂ ಸ್ವಾಮೀಜಿ ಸಿಕ್ಕಿರಲಿಲ್ಲ. ಮಧ್ಯಾಹ್ನವಾದರೂ ಸ್ವಾಮೀಜಿ ಪತ್ತೆಯಾಗದ ಹಿನ್ನೆಲೆಯಲ್ಲಿ ಆಶ್ರಮದವರು ದೂರು ದಾಖಲಿಸಿದ್ದರು.

ಹಂತಕರು ಸ್ವಾಮೀಜಿಯಿಂದ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆದಿದ್ದು, ವರ್ಷಗಳಾದರೂ ಸಾಲವನ್ನು ತೀರಿಸದೇ ವಂಚಿಸಲು ಯತ್ನಿಸಿದ್ದಾರೆ. ಜೈನಮುನಿ ಹಣ ಪಡೆಯಲು ಪದೇ ಪದೇ ಕೇಳಲಾರಂಭಿಸಿದ್ದಕ್ಕೆ ಸ್ವಾಮೀಜಿಯವರನ್ನು ಹತ್ಯೆ ಮಾಡಿರುವುದಾಗಿ ಸಿಕ್ಕಿಬಿದ್ದಿರುವ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಖಟಕಬಾವಿ ಗ್ರಾಮದಲ್ಲಿ ಎಸ್ಪಿ ಡಾ.ಸಂಜೀವ್ ಪಾಟೀಲ್ ಮಾತನಾಡಿದ್ದು, ಬುಧವಾರ ರಾತ್ರಿಯಿಂದ ಸ್ವಾಮೀಜಿ ಕಾಣೆಯಾಗಿದ್ದಾರೆ ಎಂದು ನಿನ್ನೆ ಭಕ್ತರು ದೂರು ನೀಡಿದ್ದರು. ಭಕ್ತರು ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದೇವು. ಬುಧವಾರ ಹಾಗೂ ಹಿಂದಿನ ದಿನಗಳ ಘಟನಾವಳಿಗಳ ಬಗ್ಗೆ ತಾಳೆ ಹಾಕಿ ತನಿಖೆ ನಡೆಸಿದ್ದೇವೆ. ತನಿಖೆ ವೇಳೆ ಆಶ್ರಮಕ್ಕೆ ಯಾರು ಬಂದು ಹೋಗಿದ್ದರೆಂದು ವಿಚಾರಣೆ ನಡೆದಿದ್ದೇವೆ. ಸ್ವಾಮೀಜಿಗೆ ಪರಿಚಯವಿದ್ದ ವ್ಯಕ್ತಿಯ ವಿಚಾರಣೆಗೊಳಪಡಿಸಿದಾಗ. ಆಗ ಆತ ಆಶ್ರಮದಲ್ಲಿ ಕೊಲೆ ಮಾಡಿ ಬೇರೆಡೆ ಶವ ಬಿಸಾಕಿದ ಬಗ್ಗೆ ಮಾಹಿತಿ ನೀಡಿದ್ದ. ಈ ಕೃತ್ಯಕ್ಕೆ ಸಹಕಾರ ನೀಡಿದ್ದ ಓರ್ವನ ಸೇರಿ ಇಬ್ಬರನ್ನು ಬಂಧಿಸಿದ್ದೇವೆ ಎಂದು ತಿಳಿಸಿದರು.

ಮಾತು ಮುಂದುವರಿಸಿದ ಅವರು, ಗ್ರಾಮಸ್ಥರು ಹಾಗೂ ಮಾಧ್ಯಮಗಳಿಗೆ ಮನವಿ ಮಾಡುತ್ತೇನೆ. ಮೃತದೇಹ ಶೋಧಕಾರ್ಯ ಸ್ಥಳಕ್ಕೆ ಯಾರಿಗೂ ಪ್ರವೇಶವಿಲ್ಲ. ಸಾಕ್ಷ್ಯಾಧಾರ ಕಲೆ ಹಾಕಿ ನ್ಯಾಯಾಲಯಕ್ಕೆ ನೀಡಬೇಕಿರುವ ಹಿನ್ನೆಲೆ ಸದ್ಯಕ್ಕೆ ಕಾರ್ಯಾಚರಣೆ ಸ್ಥಳದಲ್ಲಿ ಯಾರಿಗೂ ಪ್ರವೇಶವಿಲ್ಲ. ಪ್ರಕರಣದ ತನಿಖೆ ಮುಂದುವರಿದಿದೆ. ಬೇರೆ ವ್ಯವಹಾರ ಏನಾದರೂ ಇತ್ತಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.












Click it and Unblock the Notifications