ಸಾಹುಕಾರ್ ಸಿಡಿ 'ಮ್ಯೂಟ್' ಆಗಲು ಕೊರೊನಾ ನೆಪಮಾತ್ರ: ಅಸಲಿ 4 ಕಾರಣಗಳು?
ಜನಸಾಮಾನ್ಯ ಒಂದು ವೇಳೆ ಪೊಲೀಸ್ ವಿಚಾರಣೆಯ ನೋಟೀಸಿಗೆ ಸತತವಾಗಿ ಗೈರಾಗಿದ್ದರೆ ಖಾಕಿಗಳು ಸುಮ್ಮನಿರುತ್ತಿದ್ದರೇ, ಅದೇ ನಮ್ಮ ಜನಪ್ರತಿನಿಧಿಗಳು ಗೈರಾದರೆ ಪೊಲೀಸರು ಎಳೆದು ಕರೆದುಕೊಂಡು ಬರುತ್ತಿದ್ದರೇ? ಹಾಗಾದರೆ, ನಮ್ಮ ನೆಲದ ಕಾನೂನಿನಲ್ಲಿ ಜನರಿಗೆ ಒಂದು ನ್ಯಾಯ, ರಾಜಕಾರಣಿಗಳಿಗೆ ಇನ್ನೊಂದು ನ್ಯಾಯ!
ಮುಖ್ಯಮಂತ್ರಿ ಯಡಿಯೂರಪ್ಪರವರನ್ನೇ ಅದೆಷ್ಟೋ ಬಾರಿ ಬೈಪಾಸ್ ಮಾಡಿ ಮಂತ್ರಿ ಮಂಡಲದಲ್ಲಿ ತಾನೇ ಬಲಾಢ್ಯ ಎಂದು ಬೀಗುತ್ತಿದ್ದ ಮಾಜಿ ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ಈಗ ಫುಲ್ ಸೈಲೆಂಟ್ ಆಗಿ ಕೆಲವು ದಿನಗಳೇ ಕಳೆದು ಹೋದವು.
ಜಾರಕಿಹೊಳಿ ಸಿಡಿ ಪ್ರಕರಣಕ್ಕೂ ಕೊರೋನಾ ಹೊಡೆತ !
ವಿಶೇಷ ತನಿಖಾ ದಳದ (ಎಸ್ ಐ ಟಿ) ಮುಂದೆ ಹಾಜರಾಗ ಬೇಕಿದ್ದ ಜಾರಕಿಹೊಳಿ, ಕೊರೊನಾ ಪಾಸಿಟೀವ್, ಹೋಂ ಐಶೋಲೇಷನ್, ಲಾಕ್ ಡೌನ್ ನೆಪಗಳನ್ನು ಹೇಳಿ ವಿಚಾರಣೆಗೆ ಹಾಜರಾಗುತ್ತಿಲ್ಲ.
ಬುಧವಾರ (ಏ 28) ವಿಚಾರಣೆಗೆ ಹಾಜರಾಗಬೇಕಿತ್ತು ಅದಕ್ಕೂ ಜಾರಕಿಹೊಳಿ ಗೈರಾಗಿದ್ದಾರೆ. ಕೊರೊನಾ ಎರಡನೇ ಅಲೆಯ ನಡುವೆ ಜಾರಕಿಹೊಳಿ ಸಿಡಿ ಪ್ರಕರಣ ಸದ್ದು ಮಾಡುತ್ತಿಲ್ಲ. ಜೊತೆಗೆ, ಈ ವಿಚಾರವನ್ನು ಇಟ್ಟುಕೊಂಡು ಸದ್ದು ಮಾಡಿದವರಿಗೂ ಅದು ಬೇಕಾದಂತಿಲ್ಲ. ಅದಕ್ಕೆ ನಾಲ್ಕು ಕಾರಣಗಳು ಇರಬಹುದು:
ಕೊರೊನಾ ನಿರ್ವಹಣೆ, ಉಪ ಚುನಾವಣೆ ರಿಸಲ್ಟ್ ಮತ್ತು ಬಿಎಸ್ವೈ, ವಿಜಯೇಂದ್ರ ಭವಿಷ್ಯ
ಜಾರಕಿಹೊಳಿಯ ಮರ್ಯಾದೆ ತೆಗೆಯಬೇಕು ಎನ್ನುವ ದೊಡ್ಡ ನಾಯಕರ ಉದ್ದೇಶ
ಬಿಜೆಪಿಯವರು ಹಲವು ಬಾರಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷರ ಹೆಸರನ್ನು ಉಲ್ಲೇಖಿಸದೇ ದೊಡ್ಡ ನಾಯಕರ ಕೈವಾಡವಿದೆ ಎಂದು ಹೇಳುತ್ತಿದ್ದರು. ತಮ್ಮ ವಿರುದ್ದ ಸೆಟೆದು ನಿಂತಿದ್ದ ಜಾರಕಿಹೊಳಿಯ ಮರ್ಯಾದೆಯನ್ನು ತೆಗೆಯಬೇಕು ಎನ್ನುವುದೇನಾದರೂ ದೊಡ್ಡ ನಾಯಕರ ಉದ್ದೇಶವಾಗಿದ್ದರೆ, ಅದು ಒಂದು ಮಟ್ಟಿಗೆ ಈಡೇರಿದೆ ಎಂದೇ ಹೇಳಬಹುದು. ಯಾಕೆಂದರೆ, ಸಾರ್ವಜನಿಕ ವಲಯದಲ್ಲಿ ಈ ಸಿಡಿ ಭಾರೀ ಸದ್ದು ಮಾಡಿತ್ತು.
ತನ್ನ ಪೋಷಕರಿಗೂ ವಿಪರೀತ ಒತ್ತಡವಿದೆ ಎಂದು ಸಾರಿಸಾರಿ ಹೇಳಿದ್ದರು
ಇನ್ನು, ಹಲವು ಆಯಾಮಗಳಲ್ಲಿ ತಿರುಗಿದ ಈ ಸಿಡಿ ಕೇಸಿನ ಮಹಿಳೆಗೂ ಈ ವಿಚಾರ ಸಾಕು ಸಾಕಾಗಿರಬಹುದು. ಎಸ್ ಐ ಟಿ ಮುಂದೆ ಹಲವು ಬಾರಿ ತನಿಖೆಗೆ ಹಾಜರಾಗಿದ್ದ ಈಕೆ, ತನ್ನ ಪೋಷಕರಿಗೂ ವಿಪರೀತ ಒತ್ತಡವಿದೆ ಎಂದು ಸಾರಿಸಾರಿ ಹೇಳಿದ್ದರು. ಹಾಗಾಗಿ, ಈಕೆಗೆ ಮತ್ತು ಈಕೆಯ ಕುಟುಂಬದವರಿಗೂ ಈ ವಿಚಾರ ಮತ್ತೆ ಮುನ್ನಲೆಗೆ ಬರುವುದು ಬೇಕಾಗಿಲ್ಲ.
ಬೆಳಗಾವಿ ಲೋಕಸಭಾ ಉಪ ಚುನಾವಣೆಯ ವೇಳೆ ಮೈಲೇಜ್ ತೆಗೆದುಕೊಳ್ಳುವುದು
ಉತ್ತರ ಕರ್ನಾಟಕ ಭಾಗದ ಪ್ರಭಾವೀ ನಾಯಕರಾಗಿರುವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾಗುತ್ತಿರುವ ಸಿಡಿಯ ವಿಚಾರವನ್ನು ಇಟ್ಟುಕೊಂಡು ಬೆಳಗಾವಿ ಲೋಕಸಭಾ ಉಪ ಚುನಾವಣೆಯ ವೇಳೆ ಮೈಲೇಜ್ ತೆಗೆದುಕೊಳ್ಳುವುದು ವಿರೋಧ ಪಕ್ಷದ ಕಾರ್ಯತಂತ್ರವಾಗಿರಬಹುದು. ಚುನಾವಣೆ ಹೇಗೂ ಮುಕ್ತಾಯಗೊಂಡಿದೆ. ಹಾಗಾಗಿ, ಸಿಡಿ ಸದ್ದಾಗದೇ ಇರುವುದಕ್ಕೆ ಇದೂ ಒಂದು ಕಾರಣವಾಗಿರಬಹುದು.
ಬಿಎಸ್ವೈ ಸಂಪುಟದ ಆರು ಸಚಿವರು ಕೋರ್ಟ್ ಸ್ಟೇ ತೆಗೆದುಕೊಂಡು ಬಂದರು
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗವಾಗುತ್ತಿದ್ದಂತೆಯೇ ಬಿಎಸ್ವೈ ಸಂಪುಟದ ಆರು ಸಚಿವರು ಕೋರ್ಟ್ ಸ್ಟೇ ತೆಗೆದುಕೊಂಡು ಬಂದರು. ಇದು ಕೂಡಾ ವಿರೋಧ ಪಕ್ಷದವರಿಗೆ ಆಹಾರವಾಯಿತು. ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಫುಲ್ ಸ್ವಿಂಗ್ ನಲ್ಲಿ ಸಾಗಿದರೆ, ಇನ್ನಷ್ಟು ಪುಢಾರಿಗಳ ಹೆಸರು ಬಹಿರಂಗವಾದರೂ ಆಗಬಹುದು. ಹಾಗಾಗಿ, ಬ್ಯಾಕ್ ಡೋರ್ ಮೂಲಕ ತನಿಖೆ ವೇಗವಾಗಿ ಸಾಗದಂತೆ ಒತ್ತಡ ತಂದಿರಬಹುದು.
Recommended Video