ಸಹೋದರರ ನೆರಳೂ ಸಹ ನನ್ನ ಮೇಲೆ ಬೀಳೋದು ಬೇಡ: ಜಾರಕಿಹೊಳಿ
ಬೆಳಗಾವಿ, ಡಿಸೆಂಬರ್ 05: ಸತೀಶ್ ಜಾರಕಿಹೊಳಿ ನನ್ನನ್ನು ತುಳಿಯಲು ಯತ್ನಿಸಿದರು, ಲಖನ್ ಬಗ್ಗೆ ನನಗೆ ಗೊತ್ತಿರಲಿಲ್ಲ, ಈಗ ಆತ ಸಹೋದರರ ನಡುವೆ ಜಗಳ ತಂದಿಡುವ ಯತ್ನ ಮಾಡುತ್ತಿದ್ದಾನೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೇಳಿದರು.
ಗೋಖಾಕ್ ಉಪಚುನಾವಣೆಗೆ ಮತಚಲಾವಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸತೀಶ್ ನನ್ನನ್ನು ತುಳಿಯಲು ಯತ್ನಿಸಿದರು, ಆದರೆ ಆತ ತುಳಿದಷ್ಟೂ ನಾನು ಎತ್ತರಕ್ಕೆ ಬೆಳೆದೆ' ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಲಖನ್ ಜಾರಕಿಹೊಳಿ ಬಗ್ಗೆ ನನಗೆ ಗೊತ್ತಿರಲಿಲ್ಲ. ಆತ ಚುನಾವಣೆಗೆ ನಿಂತು ಸಹೋದರರ ನಡುವೆ ಜಗಳ ತಂದಿಟ್ಟಿದ್ದಾನೆ. ಹರಾಮಿ ಹಣವನ್ನು ಖಾಲಿ ಮಾಡಲು ಲಖನ್ ಜಾರಕಿಹೊಳಿ ಚುನಾವಣೆಗೆ ನಿಂತಿದ್ದಾನೆ ಎಂದು ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಗೋಖಾಕ್ ಉಪಚುನಾವಣೆಯಲ್ಲಿ ಸಹೋದರರ ಸವಾಲ್ ಏರ್ಪಟ್ಟಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಸಹೋದರ ಲಖನ್ ಜಾರಕಿಹೊಳಿ ಕಾಂಗ್ರೆಸ್ ನಿಂದ ಕಣಕ್ಕೆ ಇಳಿದಿದ್ದಾರೆ. ಅವರಿಗೆ ಸತೀಶ್ ಜಾರಕಿಹೊಳಿ ಬೆಂಬಲ ನೀಡಿದ್ದಾರೆ. ಇತ್ತ ಬಿಜೆಪಿಯಿಂದ ಸ್ಪರ್ಧಿಸಿರುವ ರಮೇಶ್ ಜಾರಕಿಹೊಳಿ ಪರವಾಗಿ ಸಹೋದರ ಬಾಲಚಂದ್ರ ಬಾರಕಿಹೊಳಿ ಪ್ರಚಾರ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಕುರಿತು ಮಾತನಾಡಿದ ಅವರು, 'ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಗೆ ಕರೆತರುತ್ತೇವೆ' ಎಂದು ಗೋಖಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೇಳಿದರು.
'ಉಪಚುನಾವಣೆಯಲ್ಲಿ ಬಿಜೆಪಿಯು 14 ಕ್ಷೇತ್ರಗಳಲ್ಲಿ ಗೆಲ್ಲುವುದು ಪಕ್ಕಾ, ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಕಷ್ಟವಾಗಲಿದೆ' ಎಂದು ಜಾರಕಿಹೊಳಿ ಹೇಳಿದರು.