ನಿಪ್ಪಾಣಿಯಲ್ಲಿ ಆಸ್ಪತ್ರೆ ಉದ್ಘಾಟನೆ; ಕನ್ನಡದ ಬಳಕೆಯೇ ಇಲ್ಲ!
ಬೆಳಗಾವಿ, ಜನವರಿ 18: " ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ" ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಈ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಮತ್ತೊಂದು ಕಡೆ ನಿಪ್ಪಾಣಿಯಲ್ಲಿ ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು. ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸ್ಥಳೀಯ ಶಾಸಕಿ ಮತ್ತು ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ಸರ್ಕಾರದ ವತಿಯಿಂದ ನಿಪ್ಫಾಣಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮಾಯವಾಗಿತ್ತು. ಸ್ವಾಗತ ಗೀತೆ, ಸ್ವಾಗತ ಭಾಷಣ ಸೇರಿ ಬಹುತೇಕ ಎಲ್ಲವೂ ಮರಾಠಿಯಲ್ಲಿಯೇ ನಡೆಯಿತು.

ರಾಜ್ಯ ಸರ್ಕಾರದ ಇಬ್ಬರು ಸಚಿವರು ಕಾರ್ಯಕ್ರಮದಲ್ಲಿದ್ದು, ಕನ್ನಡ ಬಳಕೆ ಇಲ್ಲದ ಬಗ್ಗೆ ಮೌನವಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಚಿವರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರಿ ಕಾರ್ಯಕ್ರದಲ್ಲೇ ಮರಾಠಿ ಬಳಕೆ ಬಗ್ಗೆ ಜನರು ಅಸಮಾಧಾನಗೊಂಡಿದ್ದಾರೆ.
ಫೇಸ್ ಬುಕ್ನಲ್ಲಿ ಆಕ್ರೋಶ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ಅವರು ಕಾರ್ಯಕ್ರಮವನ್ನು ತಮ್ಮ ಅಧಿಕೃತ ಫೇಸ್ ಬುಕ್ ಖಾತೆ https://www.facebook.com/JolleShashikala ನಲ್ಲಿ ಲೈವ್ ಮಾಡಿದ್ದರು. ಕಮೆಂಟ್ನಲ್ಲಿ ಜನರು ಕನ್ನಡ ಬಳಕೆ ಮಾಡದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
* ಮೇಡಂ ಇದು ಕರ್ನಾಟಕ, ಮಹಾರಾಷ್ಟ್ರ ಅಲ್ಲಾ ದಯವಿಟ್ಟು ಕನ್ನಡದಲ್ಲೇ ಭಾಷಣ ಮಾಡಬೇಕಿತ್ತು
* ಬೆಳಿಗ್ಗೆ ತಾನೇ ಕನ್ನಡ ಹಾಗೆ ಹೀಗೆ ಆಂದ್ರಲ್ಲ ತಾಯಿ.. ಇಷ್ಟು ಬೇಗ ಉಲ್ಟಾ ಹೊಡೆದ್ರೆ ಹೇಗೆ
* ಕನ್ನಡದಲ್ಲೇ. ಮಾತಾಡ್ರಿ. ಮoಡಮರ
* Medam ......modhi ji Gujrat ravradru kannda dali speech kodlu try madthare .... Amit Sha...kuda try madthare .... Adre nivela Karnataka davragi kannda mathadlu agthila
ಹೀಗೆ ಹಲವಾರು ಕಮೆಂಟ್ಗಳನ್ನು ಜನರು ಮಾಡಿದ್ದು, ಕಾರ್ಯಕ್ರಮದಲ್ಲಿ ಮರಾಠಿ ಬಳಕೆ ಬಗ್ಗೆ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications