ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ
ಬೆಳಗಾವಿ, ಆಗಸ್ಟ್ 18: ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕಲ್ಲೋಲ ಗ್ರಾಮದ ದತ್ತ ಮಂದಿರ ಜಲಾವೃತವಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಲ ಗ್ರಾಮ ಜನರು ನದಿ ನೀರಿಗೆ ಇಳಿಯದಂತೆ ಪೊಲೀಸರು ರಸ್ತೆ ಮೇಲೆ ಬ್ಯಾರಿಕೇಡ್ ಹಾಕಿದ್ದು, ಕಲ್ಲೋಲ ಗ್ರಾಮದ ಒಳಗೆ ನೀರು ನುಗ್ಗುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ.
ಬೆಳಗಾವಿಯಲ್ಲಿ ವ್ಯಾಪಕ ಮಳೆ: ನದಿತೀರದ ಗ್ರಾಮಗಳಲ್ಲಿ ಕಟ್ಟೆಚ್ಚರ
ಮಹಾರಾಷ್ಟ್ರ ಘಟ್ಟಪ್ರದೇಶದಲ್ಲಿ ವರುಣನ ಅಬ್ಬರ ಮುಂದುವೆರೆದಿದ್ದು, ಅಲ್ಲಿನ ಎಲ್ಲ ಜಲಾಶಯಗಳು ಭರ್ತಿಗೊಂಡಿವೆ. ಹೀಗಾಗಿ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿವೆ. ನದಿ ತೀರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಬೆಳಗಾವಿ ಜಿಲ್ಲಾಡಳಿತ ಖಡಕ್ ಸೂಚನೆ ನೀಡಿದೆ.
ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮಕ್ಕೆ ನೀರು ನುಸುಳಿದ್ದರಿಂದ ತೋಟಪಟ್ಟಿ ನಡುಗಡ್ಡೆಯಲ್ಲಿ ಸಿಲುಕಿದ ಜನರು ದೋಣಿ ಮೂಲಕ ಸ್ಥಳಾಂತರಗೊಳ್ಳುತ್ತಿದ್ದು, ಸರಕು-ಸಾಮಗ್ರಿ ಹಾಗೂ ಜಾನುವಾರು ಸಮೇತ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಬೆಳಗಾವಿ ಜಿಲ್ಲೆ ಗೋಕಾಕ್ ನಗರಕ್ಕೆ ಮತ್ತೆ ಜಲಕಂಟಕ ಭೀತಿ ಶುರುವಾಗಿದ್ದು, ಮಸೀದಿ, ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡು ಜನರಲ್ಲಿ ಆತಂಕ ಸೃಷ್ಟಿಸಿದೆ. ಘಟಪ್ರಭಾ ನದಿಗೆ 79,967 ಕ್ಯೂಸೆಕ್ಸ್ ಹೊರ ಬಿಡಲಾಗಿದೆ.