ಬೆಳಗಾವಿ ಜಿಲ್ಲೆಯಲ್ಲಿ ಕಂಡು ಕೇಳರಿಯದ ರೀತಿ ಮಳೆಯಬ್ಬರ: ನೀರಿನಲ್ಲಿ ಕೊಚ್ಚಿಹೋದ ವೃದ್ಧ
ಬೆಳಗಾವಿ, ಅಕ್ಟೋಬರ್ 12: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಮಳೆರಾಯ ಅಬ್ಬರಿಸಿದ್ದು, ಮಳೆಯ ನೀರಿನ ರಭಸಕ್ಕೆ ರಸ್ತೆಯಲ್ಲಿ ನಿಂತಿದ್ದ ಕಾರು, ವೃದ್ಧನೋರ್ವ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಈ ಅವಾಂತರ ಸೃಷ್ಟಿಯಾಗಿದೆ. ನಿನ್ನೆ ಮಧ್ಯಾಹ್ನ ಸುರಿದ ಮಳೆಯ ಅಬ್ಬರಕ್ಕೆ ಹುಕ್ಕೇರಿ ಪಟ್ಟಣದಲ್ಲಿನ ಗೋಕಾಕ-ಸಂಕೇಶ್ವರ ರಾಜ್ಯ ಹೆದ್ದಾರಿ ಸೇರಿದಂತೆ ಪಟ್ಟಣದ ಎಲ್ಲ ರಸ್ತೆಗಳಲ್ಲಿ ನೀರಿನ ಸೆಳತ ಹೆಚ್ಚಾಗಿತ್ತು.
ಮನೆಯ ಮುಂದೆ ನಿಲ್ಲಿಸಲಾಗಿದ್ದ ಒಂದು ಮಾರುತಿ ಸ್ವಿಪ್ಟ್ ಕಾರು, ಓರ್ವ ವೃದ್ಧ ಸೇರಿದಂತೆ ಕೆಲವು ದ್ವಿಚಕ್ರ ವಾಹನಗಳು ಮಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಮಳೆಯ ಅರ್ಭಟದಿಂದ ಹುಕ್ಕೇರಿ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವಾರು ಮನೆ, ಅಂಗಡಿಗಳಿಗೆ ಮಳೆಯ ನೀರು ನುಗ್ಗಿ ಹಾನಿ ಸಂಭವಿಸಿರುವುದು ವರದಿಯಾಗಿದೆ.

ಇಷ್ಟೇ ಅಲ್ಲದೆ ರಸ್ತೆಗಳೆಲ್ಲ ನದಿಗಳಂತೆ ಪರಿವರ್ತನೆಯಾಗಿರುವುದು ಕಂಡು ಬಂದವು. ಕಳೆದ ಎರಡು ದಿನಗಳ ಕಾಲ ಭಾರಿ ಮಳೆ ಸುರಿದ ಪರಿಣಾಮ ಚರಂಡಿ, ರಸ್ತೆಗಳೆಲ್ಲ ನದಿಗಳಾಗಿ ಪರಿವರ್ತನೆ ಆಗಿವೆ. ಚರಂಡಿ ಸ್ವಚ್ಛಗೊಳಿಸದ ಪುರಸಭೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ ಹಲವು ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಬಹುತೇಕ ಕಡೆ ಮುಂದಿನ ನಾಲ್ಕು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಂಡಮಾನ್ ಭಾಗದಲ್ಲಿ ವಾಯುಭಾರ ಕುಸಿತ ಹೆಚ್ಚಾಗಿದೆ. ಇದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ.

ನರಗುಂದ, ಮಹಾಲಿಂಗಪುರ, ಹುನಗುಂದ, ಹಾಸನ, ಧರ್ಮಸ್ಥಳ, ಸುಳ್ಯ, ಅಂಕೋಲಾ, ನಿಪ್ಪಾಣಿಯಲ್ಲಿ ಭಾರಿ ಮಳೆಯಾಗಿದೆ. ಮೂಡಬಿದಿರೆ, ಕಾರ್ಕಳ, ಬಾಗಲಕೋಟೆ, ಕೊಪ್ಪಳ, ನೆಲಮಂಗಲ, ಬೆಂಗಳೂರು ಕೆಐಎಎಲ್, ಹೊಸದುರ್ಗ, ಗೋಕರ್ಣ, ಹೊನ್ನಾವರ, ಪಣಂಬೂರು, ಥೊಂಡೆಬಾವಿ, ಚಿಕ್ಕೋಡಿ, ಗೋಪಾಲನಗರ, ಮುಲ್ಕಿ, ಸಿದ್ದಾಪುರ, ಕುಡಚಿ, ಉಡುಪಿ, ಮುದ್ದೇಬಿಹಾಳ, ಗದಗ, ಎಚ್ಡಿ ಕೋಟೆ, ಟಿ.ನರಸೀಪುರದಲ್ಲಿ ಹೆಚ್ಚು ಮಳೆಯಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲಬುರಗಿ, ವಿಜಯಪುರ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ತುಮಕೂರಿನಲ್ಲಿ ಇಂದು ಕೂಡಾ ಮಳೆಯಾಗುವ ಸಾಧ್ಯತೆ ಇದೆ.












Click it and Unblock the Notifications