ಜೈಲಿನಲ್ಲಿ ವಿನಯ್ ಕುಲಕರ್ಣಿ ಭೇಟಿ ಮಾಡಿದ ಕುಟುಂಬ ಸದಸ್ಯರು
ಬೆಳಗಾವಿ, ಡಿಸೆಂಬರ್ 10: ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ 31 ದಿನಗಳ ಬಳಕ ಕುಟುಂಬದವರನ್ನು ಭೇಟಿ ಮಾಡಿದರು. ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ವಿನಯ್ ಕುಲಕರ್ಣಿ ಅವರನ್ನು ನವೆಂಬರ್ 5ರಂದು ಬಂಧಿಸಿದೆ.
ಗುರುವಾರ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ವಿನಯ್ ಕುಲಕರ್ಣಿ ಅವರನ್ನು ಕುಟುಂಬಸ್ಥರು ಭೇಟಿಯಾದರು. ಪತ್ನಿ ಶಿವಲೀಲಾ ಕುಲಕರ್ಣಿ, ಪುತ್ರಿಯರಾದ ವೈಶಾಲಿ ಹಾಗೂ ದೀಪಾಲಿ ಮತ್ತು ಪುತ್ರ ಹೇಮಂತ್ ಒಂದು ಗಂಟೆಗಳ ಕಾಲ ವಿನಯ್ ಕುಲಕರ್ಣಿ ಜತೆಗೆ ಸಮಯ ಕಳೆದರು.
ತಂದೆಯನ್ನು ಜೈಲಿನಲ್ಲಿ ಕಂಡ ಮಕ್ಕಳು ಭಾವುಕರಾದರು. ಪತ್ನಿ ಶಿವಲೀಲಾ ಅವರು ಸಹ ಭಾವುಕರಾಗಿದ್ದರು ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ವಿನಯ್ ಕುಲಕರ್ಣಿ ಹಿಂಡಲಗಾ ಜೈಲಿನಲ್ಲಿದ್ದಾರೆ.

ಧಾರವಾಡದ ಜಿಲ್ಲಾ ನ್ಯಾಯಾಲಯ ವಿನಯ್ ಕುಲಕರ್ಣಿ ಅವರನ್ನು ಭೇಟಿಯಾಗಲು ಕುಟುಂಬಸ್ಥರಿಗೆ ಅವಕಾಶ ನೀಡಿತ್ತು. ಸಂಜೆ 4 ರಿಂದ 5ರವರೆಗೆ ವಿನಯ್ ಕುಲಕರ್ಣಿ ಭೇಟಿಗೆ ಸಮಯ ನಿಗದಿ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ನ್ಯಾಯಾಲಯದ ಆದೇಶದಂತೆ ಒಂದು ಗಂಟೆಗಳ ಕಾಲ ಭೇಟಿಗೆ ಜೈಲಿನ ಸಿಬ್ಬಂದಿ ಅವಕಾಶ ನೀಡಿದರು.
ಕೋವಿಡ್ ಹಿನ್ನಲೆಯಲ್ಲಿ ಕಳೆದ 8 ತಿಂಗಳಿಂದ ಕೈದಿಗಳು ಹಾಗೂ ಕುಟುಂಬಸ್ಥರ ಭೇಟಿಗೆ ಜೈಲಿನ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ. ಆದರೆ, ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಇಂದು ಭೇಟಿಗೆ ಅವಕಾಶ ನೀಡಲಾಗಿತ್ತು.
ಮನೆಯ ಊಟವನ್ನು ವಿನಯ್ ಕುಲಕರ್ಣಿ ಅವರಿಗೆ ನೀಡಲು ಅವಕಾಶ ನೀಡಲಾಗಿತ್ತು. ವಿನಯ್ ಕುಲಕರ್ಣಿ ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಲು ಕುಟುಂಬ ಸದಸ್ಯರು ನಿರಾಕರಿಸಿದರು.












Click it and Unblock the Notifications