ಘಟಪ್ರಭಾ ನದಿ ಪ್ರವಾಹ ಭೀತಿ; ಮನೆಬಿಟ್ಟು ಬೀದಿಯಲ್ಲೇ ಕುಟುಂಬದ ವಾಸ
ಬೆಳಗಾವಿ, ಆಗಸ್ಟ್ 20: ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಹಡಗಿನಾಳ ಗ್ರಾಮದ ಹೊರವಲಯದಲ್ಲಿ ನೆರೆಯಿಂದ ತತ್ತರಿಸಿದ ಕುಟುಂಬವೊಂದು ಇದೀಗ ಟ್ರ್ಯಾಕ್ಟರ್ ಟ್ರ್ಯಾಲಿಯನ್ನೇ ಮನೆಯನ್ನಾಗಿಸಿಕೊಂಡು ಅದರಲ್ಲೇ ವಾಸವಾಗಿದೆ. ಕಳೆದ ವರ್ಷ ಪ್ರವಾಹದಿಂದಾಗಿ ಮನೆ ಕಳೆದುಕೊಂಡಿದ್ದ ಇವರು, ಈ ವರ್ಷ ಹೊಸ ಮನೆ ಕಟ್ಟಿಸುತ್ತಿದ್ದರು. ಆದರೆ ಮತ್ತೆ ಪ್ರವಾಹ ಎದುರಾಗಿದೆ.
ಇದೀಗ ಪುಟ್ಟ ಪುಟ್ಟ ಮಕ್ಕಳ ಜೊತೆ ರಸ್ತೆ ಬದಿ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲೇ ಈ ಕುಟುಂಬ ವಾಸವಾಗಿದೆ. ಘಟಪ್ರಭಾ ನದಿಯ ಪ್ರವಾಹದಿಂದ ಹಡಗಿನಾಳ ಗ್ರಾಮ ಸಂಪೂರ್ಣ ಜಲಾವೃತಗೊಂಡಿವೆ. ಜಿಲ್ಲೆಯಲ್ಲಿ ಮಳೆ ತಗ್ಗಿದರೂ ನೀರು ಹಿಂದೆ ಸರಿಯದ ಕಾರಣ ಸಂತ್ರಸ್ತರು ಮನೆ ಬಿಟ್ಟು ರಸ್ತೆ ಬದಿ ವಾಸಮಾಡಬೇಕಾದ ಪರಿಸ್ಥಿತಿ ಬಂದಿದೆ.

ಘಟಪ್ರಭೆ ನೀರು ನುಗ್ಗಿ ಗ್ರಾಮದ ಬಹುತೇಕ ಮನೆಗಳು ಜಲಾವೃತಗೊಂಡಿವೆ. ಮನೆ ಬಿಟ್ಟು ಬಂದಿರುವ ಕುಟುಂಬ ಟ್ರ್ಯಾಕ್ಟರ್ ಟ್ರ್ಯಾಲಿಗೆ ತಾಡಪತ್ರಿ ಕಟ್ಟಿ ಆಶ್ರಯ ಪಡೆದಿದೆ. ಈ ಕುಟುಂಬ ಕಳೆದ ವರ್ಷದ ಪ್ರವಾಹದಲ್ಲಿ ಮನೆ ಕಳೆದುಕೊಂಡಿತ್ತು. ಈಗ ನಿರ್ಮಾಣ ಹಂತದ ಮನೆಯೂ ಜಲಾವೃತಗೊಂಡಿದೆ. ಹೀಗಾಗಿ ಅನಿವಾರ್ಯವಾಗಿಯೇ ಈ ಕುಟುಂಬದವರು ಹೀಗೆ ಆಸರೆ ಪಡೆದಿದ್ದಾರೆ.

ಕಾಳಜಿ ಕೇಂದ್ರ ತೆರೆದಿರುವ ಬಗ್ಗೆ ಮಾಹಿತಿಯೇ ಇಲ್ಲ ಎಂದು ಇವರು ಅಳಲು ತೋಡಿಕೊಂಡಿದ್ದಾರೆ. ಪರಿಹಾರ ಕೇಂದ್ರ ತೆರೆದಿದ್ದರೂ ಜನರಿಗೆ ಸೂಕ್ತ ಮಾಹಿತಿ ನೀಡದ ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.












Click it and Unblock the Notifications