ಪ್ರಬಂಧ ಸ್ಪರ್ಧೆ; ಸತೀಶ್ ಜಾರಕಿಹೊಳಿ ಹೆಲಿಕಾಪ್ಟರ್ನಲ್ಲಿ ವಿಜೇತರ ಸುತ್ತಾಟ
ಬೆಳಗಾವಿ, ಜನವರಿ 11: ಸದಾ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮಾನವ ಬಂಧುತ್ವ ವೇದಿಕೆ ಈ ಬಾರಿ ಯುವಜನತೆಯನ್ನು ಸೆಳೆಯುವ ಮೂಲಕ ಹೆಲಿಕಾಪ್ಟರ್ ರೈಡಿಂಗ್ಗೆ ಅವಕಾಶ ನೀಡಿ ರಾಜ್ಯದ ಗಮನ ಸೆಳೆಯಿತು.
ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಎಂಬಿವಿ ಆಶ್ರಯದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿನ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ ಹೆಲಿ ಕಾಪ್ಟರ್ನಲ್ಲಿ ಗೋಕಾಕ್ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಸುತ್ತ ರೌಂಡ್ ಹೊಡೆಸುವ ಮೂಲಕ ವಿಜೇತರಿಗೆ ಹೊಸ ಅನುಭವ ನೀಡಿದರು.
ಸತೀಶ್ ಜಾರಕಿಹೊಳಿ ಅವರ ಹೆಲಿಕಾಪ್ಟರ್ ನೋಡಲು ಜನ ಜಂಗುಳಿ ಸೇರಿತ್ತು. ವಾಲ್ಮೀಕಿ ಕ್ರೀಡಾಂಗಣ ತುಂಬಿ ತುಳುಕುತ್ತಿತ್ತು. ವಿಶೇಷವಾಗಿ ಯುವ ಜನತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸಿಳ್ಳೆ ಹೊಡದು, ಚಪ್ಪಾಳೆ ತಟ್ಟುವ ಮೂಲಕ ಮೊದಲ ಬಾರಿ ಹೆಲಿಕಾಪ್ಟರ್ ಕಂಡ ಮಕ್ಕಳು ಕುಣಿದು ಕುಪ್ಪಳಿಸಿದರು.

ಇದಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, "ನಮಗಾಗಿ ಹೋರಾಡಿದ ಮಹನಿಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಮುಂದೆಯೂ ಸಹ ಮಹಾನ್ ನಾಯಕರ ಜಯಂತಿಯಂದು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ನಮಗಾಗಿ ಹೋರಾಡಿದ ಮಹನಿಯರನ್ನು, ನಮಗೆ ಶಿಕ್ಷಣ ಕೊಟ್ಟವರನ್ನು ಪೂಜಿಸುವುದು ಬಿಟ್ಟು , ಬೇರೆ ಯಾರನ್ನೋ ಪೂಜಿಸುತ್ತೇವೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಸಾವಿತ್ರಿ ಬಾಯಿ ಫುಲೆ, ಶಾಹು ಮಹಾರಾಜ್, ಶಿವಾಜಿ ಮಹಾರಾಜ್, ಡಾ. ಬಾಬಾಸಾಹೇಬ ಅಂಬೇಡ್ಕರ್, ಮಹಾತ್ಮಾ ಗಾಂಧಿಜೀ, ಟಿಪ್ಪು ಸುಲ್ತಾನ್ ಸೇರಿ ಅನೇಕ ಮಹನಿಯರು ನಮಗಾಗಿ ಹೋರಾಡಿದ್ದಾರೆ. ಅವರೇನು ಬಡವರಲ್ಲ ಮಹಾರಾಜರು. ಆದರೆ, ನಮಗಾಗಿ ಆಸ್ತಿ, ಅಂತಸ್ತು ಎಲ್ಲವನ್ನು ತ್ಯಾಗ ಮಾಡಿ ಮಾದರಿಯಾಗಿದ್ದಾರೆ" ಎಂದರು.

"ಮಹಾನ್ ನಾಯಕ ಜಯಂತಿಯಂದು ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಆಯೋಜಿಸುವ ಮೂಲಕ ಮಹಾನ್ ನಾಯಕರ ಬಗ್ಗೆ ಅಪಪ್ರಚಾರ ಮಾಡುವವರಿಗೆ ಈ ವೇದಿಕೆ ಮೂಲಕ ತಕ್ಕ ಉತ್ತರ ನೀಡಿದ್ದೇವೆ" ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿನ ವಿಜೇತ ಮಕ್ಕಳು ಸತೀಶ್ ಜಾರಕಿಹೊಳಿ ಅವರ ಜೊತೆ ಹೆಲಿಕಾಪ್ಟರ್ನಲ್ಲಿ ಸುತ್ತಾಟ ನಡೆಸಿದರು. ಬಳಿಕ ಅವರ ಜೊತೆ ಫೋಟೋ ತೆಗೆಸಿಕೊಂಡರು.












Click it and Unblock the Notifications