ಸಿಟಿ ರವಿ- ಸಿದ್ದು ಮಧ್ಯೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ
ಬೆಳಗಾವಿ, ನವೆಂಬರ್ 16: "ಹೋಮ- ಯಾಗಗಳಲ್ಲಿ ಡಬ್ಬಿಗಟ್ಟಲೆ ತುಪ್ಪ ಸುರಿಯುತ್ತಾರೆ. ಬಡ ಮಕ್ಕಳು ತುಪ್ಪದ ರುಚಿಯನ್ನೇ ನೋಡಿರುವುದಿಲ್ಲ. ಇನ್ನು ಬೆಲೆ ಬಾಳುವ ರೇಷ್ಮೆ ಸೀರೆ ಯಾಗಕ್ಕೆ ಹಾಕ್ತಾರೆ. ಬಡ ಹೆಣ್ಣುಮಕ್ಕಳು ಅಂಥ ಸೀರೆಯನ್ನು ಉಟ್ಟಿರುವುದಿಲ್ಲ. ಇದಕ್ಕೆಲ್ಲ ಬ್ರೇಕ್ ಹಾಕಬೇಕು ಅಂತ ಇತ್ತು. ಆದರೆ ಸಾಂಪ್ರದಾಯಿಕ ಆಚರಣೆಗೆ ಅಡ್ಡಿ ಮಾಡುತ್ತಿಲ್ಲ" ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.
ಮೌಢ್ಯ ನಿಷೇಧ ಮಸೂದೆ ಬಗ್ಗೆ ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಆರಂಭಿಸಿದ ಅವರು, ಸರಕಾರ ಕ್ರಾಂತಿಕಾರಿ ಕಾಯ್ದೆಯೊಂದನ್ನು ಜಾರಿಗೆ ತರುತ್ತಿದೆ ಎಂದರು. ಈ ವೇಳೆ ಮಹಾಮಸ್ತಕಾಭಿಷೇಕದ ವಿಚಾರ ಪ್ರಸ್ತಾಪಿಸಿದ ಜೆಡಿಎಸ್ ನ ವೈಎಸ್ ವಿ ದತ್ತ, ಅಲ್ಲಿ ಹಾಲು- ತುಪ್ಪ ಎಲ್ಲಾ ಸುರಿಯುತ್ತಾರೆ. ಅದನ್ನು ಕಾಯ್ದೆಯಲ್ಲಿ ತಂದು ಬಿಡಿ ಅಂತ ಸಲಹೆ ನೀಡಿದರು.

ದತ್ತ ಅವರ ಸಲಹೆಗೆ ಸ್ವಪಕ್ಷ ಜೆಡಿಎಸ್ ನಲ್ಲೇ ವಿರೋಧ ವ್ಯಕ್ತವಾಯಿತು. ದತ್ತ ತಮ್ಮ ಹೇಳಿಕೆ ವಾಪಸ್ ಪಡೆದುಕೊಳ್ಳಬೇಕು ಎಂದು ಅವರದೇ ಪಕ್ಷದ ಶಾಸಕ ಶಿವಲಿಂಗೇಗೌಡ ಆಗ್ರಹ ಮಾಡಿದರು.
ಸಿಎಂ ಕಾಲೆಳೆದ ಸಿ.ಟಿ.ರವಿ
ಕಾಯ್ದೆ ತರುವವರೂ ಕೂಡ ಮೌಢ್ಯಕ್ಕೆ ಒಳಗಾಗಬಾರದು. ಕಾಗೆ ಕುಳಿತಿತ್ತು ಅಂತ ಸಿಎಂ ಕಾರು ಬದಲಿಸಿದರಂತೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಅವರು ಮುಖ್ಯಮಂತ್ರಿ ಕಾಲೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹಾಗಾಗಿಲ್ಲ, ಕಾಗೆ ಕೂರುವ ಮೊದಲೇ ಕಾರು ಬದಲಿಸಲು ನಿರ್ಧರಿಸಿದ್ದೆ. 20 ಕಾಗೆಗಳನ್ನು ತಂದು ಕೂರಿಸಿದರೂ ಕಾರು ಬದಲಿಸಲ್ಲ ಎಂದರು.
ನಾನು ಚಾಮರಾಜನಗರಕ್ಕೆ ಬಹಳಷ್ಟು ಬಾರಿ ಹೋಗಿದ್ದೇನೆ. ಜೆ.ಎಚ್.ಪಟೇಲರು ಹೊಸ ಜಿಲ್ಲೆ ಉದ್ಘಾಟನೆಗೂ ಹೋಗಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಆಗ ರವಿ, ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಹೋಗಿಲ್ಲ ಅಂತ ಮತ್ತೆ ವ್ಯಂಗ್ಯವಾಡಿದರು. ಆಗ ಮುಖ್ಯಮಂತ್ರಿ, ಹಿಂದೆ ಬಹಳಷ್ಟು ಬಾರಿ ಹೋಗಿದ್ದೆ. ಈ ಬಾರಿ ಸಮಯ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದರು.
"ನಮ್ಮ ಕಡೆ ಇಸ್ಪೀಟ್ ಆಡೋರು ಆಟದಲ್ಲಿ ಸೋಲಬಾರದು ಅಂತ ಯಂತ್ರ ಕಟ್ಟಿಸ್ತಾರೆ. ಹಾಗೇ ಸಿದ್ದರಾಮಯ್ಯ ಕೂಡ ಪರಮೇಶ್ವರ್ ಸೋಲಲಿ ಅಂತ ಯಂತ್ರ ಕಟ್ಟಿಸಿದ್ರಾ?" ಎಂದು ಸಿದ್ದರಾಮಯ್ಯ ಅವರನ್ನು ಸಿ.ಟಿ.ರವಿ ಕಿಚಾಯಿಸಿದರು. ಅದಕ್ಕೆ ಮುಖ್ಯಮಂತ್ರಿ ಮೌನಕ್ಕೆ ಶರಣಾಗಿ, ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆಗ ಕೆಲ ಕಾಂಗ್ರೆಸ್ ಶಾಸಕರು ಸಿ.ಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.











Click it and Unblock the Notifications