ಬೈ ಎಲೆಕ್ಷನ್ ನಂತರ ಕಾಂಗ್ರೆಸ್ ಖಾಲಿ, ಸಿದ್ದರಾಮಯ್ಯ ನಿರುದ್ಯೋಗಿ: ಕಟೀಲ್
ಬೆಳಗಾವಿ, ನವೆಂಬರ್ 28: ರಾಜ್ಯದಲ್ಲಿ ಉಪ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಪಕ್ಷ ಸಂಪೂರ್ಣ ಖಾಲಿ ಹೊಡೆಯಲಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ನಿರುದ್ಯೋಗಿಗಳಾಗಲಿದ್ದಾರೆ.
ಇವರಿಬ್ಬರೇ ಕಾಂಗ್ರೆಸ್ ಕಚೇರಿಯಲ್ಲಿ ನೋಣ ಹೊಡೆಯಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು.
ಈಗ ನಡೆಯಲಿರುವ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋತರೆ ಈ ಇಬ್ಬರು ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಲಿದ್ದಾರೆಯೇ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಕಂಡರೆ ಸಿದ್ದುಗೆ ದ್ವೇಷ
ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು 17 ಜನ ಶಾಸಕರು ರಾಜೀನಾಮೆ ನೀಡಿ ಉರುಳಿಸಿದರು ಎಂದು ಅವರನ್ನು ದ್ವೇಷದಿಂದ ಅನರ್ಹಗೊಳಲಿಸಲಾಯಿತು, ಆದರೆ ಆ 17 ಜನ ಶಾಸಕರು ರಾಜೀನಾಮೆ ನೀಡಲು ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ೫ ತಿಂಗಳು ಕಳೆಯುವಷ್ಟರಲ್ಲಿ, ಸಿದ್ದರಾಮಯ್ಯ ಧರ್ಮಸ್ಥಳದಲ್ಲಿ ವಿಶ್ರಾಂತಿ ಪಡೆಯುವ ನೆಪದಲ್ಲಿ ಸರ್ಕಾರವನ್ನ ಬೀಳಿಸಲು ಪ್ರಯತ್ನಿಸಿದ್ದರು ಎಂದು ಹೇಳಿದರು.

ಸಿದ್ದರಾಮಯ್ಯ ಒಬ್ಬ ಕುತಂತ್ರಿ
ಲೋಕಸಭೆ ಚುನಾವಣನೆ ನಂತರ ಸಮ್ಮಿಶ್ರ ಸರ್ಕಾರ ತಾನಾಗೇ ಬೀಳುತ್ತದೆ ಎಂದು ತಮ್ಮ ಆಪ್ತರಲ್ಲಿ ಅವರೇ ಹೇಳಿಕೊಂಡಿದ್ದರು, ಅದು ವಿಡಿಯೋ ಸಮೇತ ರಾಜ್ಯದ ಜನತೆ ನೋಡಿದ್ದಾರೆ, ಇನ್ನೂ ಬೇಕು ಎಂದು ಕೇಳಿದರು.
ಸರ್ಕಾರ ಬೀಳಿಸಲು ಶ್ರೀಮಂತ ಪಾಟೀಲ್ ಮತ್ತು ಇನ್ನುಳಿದ 16 ಅನರ್ಹ ಶಾಸಕರು ಕಾರಣರಲ್ಲ, ನಿಜವಾಗಿಯೂ ಸಿದ್ದರಾಮಯ್ಯನವರೇ ನೇರವಾಗಿ ಕಾರಣವಾಗಿದ್ದಾರೆ ಎಂದು ಟೀಕಿಸಿದರು.

ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ
ಮಂಗಸೂಳಿ ಗ್ರಾಮದಿಂದ ಶೇಡಬಾಳ ಗ್ರಾಮದವರೆಗೆ 11 ಕೀ,ಮಿ ಬೈಕ್ ಮೂಲಕ ಮೆರವಣಿಗೆ ಸಾಗಿ ಬೃಹತ್ ಸಮಾವೇಶದಲ್ಲಿ ಸ್ವಯಂ ಪ್ರೇರಣೆಯಿಂದ ನೆರೆದಿರುವ ಯುವಜನತೆಯನ್ನು ನೋಡಿ ನಾನು ಸಂತೋಷಗೊಂಡಿದ್ದೇನೆ, ಕಾಗವಾಡದ ಜನತೆ ಬಿಜೆಪಿಯನ್ನು ಮೆಚ್ಚಿ ಈ ಬಾರಿ ಇಲ್ಲಿ ಕಮಲ ಅರಳಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಶ್ರೀಮಂತ ಪಾಟೀಲ್ ಅವರನ್ನು ಭಾರೀ ಬಹುಮತದಿಂದ ಗೆಲ್ಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ, ಅಲ್ಲದೇ ಎಲ್ಲಾ 15 ಕ್ಷೇತ್ರಗಳಲ್ಲಿಯೂ ಈ ಬಾರಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಸರ್ಕಾರ ಆತ್ಮಹತ್ಯೆ ಭಾಗ್ಯ ನೀಡಿದೆ
ಈ ಹಿಂದೆ ಸಿದ್ದರಾಮಯ್ಯನ ಸರ್ಕಾರದಲ್ಲಿ ಅನೇಕ ಹಿಂದೂಗಳ ಕೊಲೆಯಾಗಿದೆ. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರ, ಪ್ರಾಮಾಣೀಕ ಅಧಿಕಾರಿಗಳ ಸಂಶಯಾಸ್ಪದ ಸಾವಿನ ಕಳಂಕ ಅವರ ಮೇಲಿದೆ. ಅವರ ಸರ್ಕಾರದಲ್ಲಿ ಆತ್ಮಹತಯೆ ಭಾಗ್ಯ ಕೊಟ್ಟಿದ್ದರು ಎಂದು ತರಾಟೆಗೆ ತೆಗೆದುಕೊಂಡರು.
ಸಮುದಾಯಗಳ ಮಧ್ಯೆ ವೀಷ ಬೀಜ ಬಿತ್ತುವ ಕೆಲಸ ಮಾಡಿ, ಸಮುದಾಯಗಳನ್ನು ಒಡೆಯುವ ಪ್ರಯತ್ನ ಮಾಡಿದ್ದರು, ಹಾಗಾಗಿಯೇ ರಾಜ್ಯದ ಜನತೆ ಅವರನ್ನು ಚುನಾವಣನೆಯಲ್ಲಿ ಸೋಲಿಸಿ ಮನೆಯಲ್ಲಿ ಕೂರಿಸಿದರು ಎಂದರು.

ಬಿಜೆಪಿ ಸರ್ಕಾರದ ಸಾಧನೆಗಳೇ ಶ್ರೀರಕ್ಷೆ
ಬಿಜೆಪಿ ಬಗ್ಗೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ, ಅದಕ್ಕಾಗಿ ನಾನು ಉತ್ತರ ಕೊಡುತ್ತಿದ್ದೇನೆ ಎಂದು ಜರಿದರು. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಈಗ ಒಬ್ಬಂಟಿಯಾಗಿದ್ದಾರೆ. ಅವರ ದುರಹಂಕಾರ ಸ್ವಭಾವದಿಂದಲೇ ಎಲ್ಲರೂ ಅವರಿಂದ ದೂರಾಗುತ್ತಿದ್ದಾರೆ ಎಂದು ಮೂದಲಿಸಿದರು.
ನಾವು ಬರೀ ಸಿದ್ದರಾಮಯ್ಯರನ್ನು ಟೀಕೆ ಮಾಡಿ ಮತ ಪಡೆಯಲು ಬಂದಿಲ್ಲ, ಬದಲಾಗಿ ರಾಜ್ಯದಲ್ಲಿ ಮಾಡಿರುವ ಸರ್ಕಾರದ ಸಾಧನೆಗಳು ಹಾಗೂ ಕೆಲಸಗಳನ್ನು ಮುಂದಿಟ್ಟು ಓಟು ಕೇಳುತ್ತಿದ್ದೇವೆ ಎಂದರು.

ಲೋಕಸಭೆ ಕದನದಲ್ಲಿ ಯಾರಿಗೆ ಕಪಾಳಮೋಕ್ಷವಾಗಿದೆ
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಬಗ್ಗೆ ಇದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಕಪಾಳಮೋಕ್ಷ ಮಾಡಿದಂತೆ ಎಂದು ಮಾತನಾಡುವ ದಿನೇಶ್ ಗುಂಡೂರಾವ್, ಹಾಗಾದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತ ಸಿಕ್ಕಿತು, ಕಾಂಗ್ರೆಸ್ ಪಕ್ಷ ವಿಪಕ್ಷ ಸ್ಥಾನದಲ್ಲೂ ಕುಳಿತುಕೊಳ್ಳಲು ಯೋಗ್ಯತೆ ಇಲ್ಲದಂತಾಯಿತಲ್ಲ ಹಾಗಾದರೆ ಇದು ರಾಹುಲ್ ಗಾಂಧಿಗೆ ಮಾಡಿದ ಕಪಾಳಮೋಕ್ಷವೇ? ಅಥವಾ ಸೋನಿಯಾ ಗಾಂಧಿಗೆ ಮಾಡಿದ ಕಪಾಳಮೋಕ್ಷವೇ? ಎಂದು ಪ್ರಶ್ನಿಸಿದರು.












Click it and Unblock the Notifications