ಎರಡು ದಿನಗಳ ಕಾಲ ಸಿಎಂ ಮಹಾರಾಷ್ಟ್ರ ಚುನಾವಣಾ ಪ್ರಚಾರ
ಬೆಳಗಾವಿ, ಅಕ್ಟೋಬರ್ 16: ಇಂದಿನಿಂದ ಎರಡು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಪರವಾಗಿ ಸಿಎಂ ಯಡಿಯೂರಪ್ಪ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಆದರೆ ಮಹಾರಾಷ್ಟ್ರ ಪ್ರಚಾರಕ್ಕೆ ತೆರಳುವ ಮುನ್ನ ಸಿಎಂ ಬಿಎಸ್ ವೈ ಬೆಳಗಾವಿಯಲ್ಲಿ ಹೆಲಿಕಾಪ್ಟರ್ ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ನಿನ್ನೆ ಬೆಳಗಾವಿಗೆ ಬಂದಿಳಿದಿದ್ದ ಯಡಿಯೂರಪ್ಪನವರು ಅಲ್ಲೇ ತಂಗಿದ್ದರು. ನೆರೆ ಪರಿಹಾರದ ಕುರಿತು ಸಭೆಯನ್ನೂ ನಡೆಸಿದ್ದರು. ಇಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತದಲ್ಲಿ ಚುನಾವಣಾ ಪ್ರಚಾರಕ್ಕೆ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಪ್ರಯಾಣ ಮಾಡಲು ಮುಂದಾಗಿದ್ದರು. ಆದರೆ ಹೆಲಿಕಾಪ್ಟರ್ ನಲ್ಲಿನ ತಾಂತ್ರಿಕ ದೋಷದಿಂದಾಗಿ ಸರಿಯಾದ ಸಮಯಕ್ಕೆ ಹೊರಡಲು ಸಾಧ್ಯವಾಗಿಲ್ಲ.
ಮೊದಲು ಹೆಲಿಕಾಪ್ಟರ್ ಹಾರಾಟಕ್ಕೆ ಸೂಕ್ತ ಹವಾಮಾನ ಇರಲಿಲ್ಲ ಎನ್ನಲಾಗಿತ್ತು. ನಂತರ ಪರ್ಯಾಯ ಹೆಲಿಕಾಪ್ಟರ್ ವ್ಯವಸ್ಥೆಗೆ ಹರ ಸಾಹಸ ಪಡಬೇಕಾಯಿತು. ಪರ್ಯಾಯ ವ್ಯವಸ್ಥೆ ಆಗದೇ ಇದ್ದರೆ ರಸ್ತೆ ಮೂಲಕವೇ ತೆರಳುವುದಾಗಿಯೂ ಹೇಳಿದ್ದರು.

ಆದರೆ ಅವಧಿ ಮೀರುತ್ತಿದ್ದರಿಂದ ಫೋನ್ ಮೂಲಕ ಪ್ರವಾಸ ರದ್ದು ಮಾಡಲು ಡಿಸಿಎಂ ಲಕ್ಷ್ಮಣ ಸವದಿಗೆ ಯಡಿಯೂರಪ್ಪ ಸೂಚನೆ ನೀಡಿದ್ದರು ಎನ್ನಲಾಗಿದೆ. ಬೆಂಗಳೂರಿಗೆ ವಾಪಸ್ ಹೋಗುವುದಾಗಿಯೂ ತಿಳಿಸಿದ್ದರು. ಹೀಗಾಗಿ ಮಹಾರಾಷ್ಟ್ರಕ್ಕೆ ಹೋಗುತ್ತಾರೋ ಇಲ್ಲವೊ ಎಂಬ ಗೊಂದಲ ಏರ್ಪಟ್ಟಿತ್ತು. ನಂತರ ಪುಣೆಯಿಂದಲೇ ಹೆಲಿಕಾಪ್ಟರ್ ಕಳುಹಿಸುವುದಾಗಿ ಮನವಿ ಮಾಡಿಕೊಂಡಿದ್ದರು. ಮುಖ್ಯಮಂತ್ರಿಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲು ಡಿಸಿಎಂ ಸವದಿ ಎಡವಿದ್ದರಿಂದ 4 ಗಂಟೆಗಳ ಕಾಲ ಬೆಳಗಾವಿ ಸರ್ಕ್ಯೂಟ್ ಹೌಸ್ ನಲ್ಲೇ ಕಾದುಕುಳಿತಿದ್ದರು.












Click it and Unblock the Notifications