ಭೀಕರ ಪ್ರವಾಹ: ಬೆಳಗಾವಿಯಲ್ಲಿ ಕೇಂದ್ರ ತಂಡದ ಪರಿಶೀಲನೆ
ಬೆಳಗಾವಿ, ಆಗಸ್ಟ್ 25 : "ಪ್ರವಾಹ ಸಂತ್ರಸ್ತರಿಗೆ ಆದಷ್ಟು ಬೇಗನೇ ಪರಿಹಾರ ಬಿಡುಗಡೆ ಮಾಡುವುದು ನಮ್ಮ ಆದ್ಯತೆಯಾಗಿದೆ" ಎಂದು ಕೇಂದ್ರ ಸರ್ಕಾರದ ನೆರೆಹಾನಿ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಕೇಂದ್ರ ಗೃಹ ವ್ಯವಹಾರಗಳ ಇಲಾಖೆಯ ಆಡಳಿತ ವಿಭಾಗದ ಜಂಟಿ ನಿರ್ದೇಶಕರಾದ ಪ್ರಕಾಶ್ ಹೇಳಿದರು.
ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಭಾನುವಾರ ಸಂಚಾರ ನಡೆಸಿದ ತಂಡ ಆಗಿರುವ ಹಾನಿಯನ್ನು ಪರಿಶೀಲಿಸಿತು. ಬಳಿಕ ಕಾಗವಾಡ ಸಮೀಪದ ಶೇಡಬಾಳ ಪ್ರವಾಸಿಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.
Recommended Video
ಭೀಕರ ಪ್ರವಾಹ : 4 ದಿನ ರಾಜ್ಯದಲ್ಲಿ ಕೇಂದ್ರ ತಂಡದ ಪ್ರವಾಸ
"ಕೇಂದ್ರ ತಂಡದ 7 ಅಧಿಕಾರಿಗಳು ಮೊದಲ ದಿನವಾದ ಭಾನುವಾರ ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿ, ಹಾನಿಯನ್ನು ಪರಿಶೀಲಿಸಿದೆ. ಜಿಲ್ಲೆಯಲ್ಲಿ ಪ್ರವಾಹದಿಂದ ಅತ್ಯಂತ ಕೆಟ್ಟ ಪರಿಸ್ಥಿತಿ ಕಂಡುಬಂದಿದೆ. ಕಬ್ಬಿನ ಬೆಳೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಸುಧಾರಣೆಗೆ ಸಾಕಷ್ಟು ಸಮಯ ಬೇಕು" ಎಂದು ತಿಳಿಸಿದರು.
ಕರ್ನಾಟಕ ಪ್ರವಾಹ : ನಷ್ಟದ ಲೆಕ್ಕ ಕೊಟ್ಟ ಸರ್ಕಾರ
ಮತ್ತೊಮ್ಮೆ ಪರಿಶೀಲನೆ : ಪ್ರವಾಹ ಮತ್ತು ಮಳೆಯಿಂದ ಉಂಟಾಗಿರುವ ಹಾನಿಯ ಬಗ್ಗೆ ರಾಜ್ಯ ಸರ್ಕಾರದ ಪರಿಹಾರ ಪ್ರಸ್ತಾವ (ಮನವಿ) ಆಧರಿಸಿ ಮತ್ತೊಮ್ಮೆ ಕೇಂದ್ರ ತಂಡವು ಪರಿಶೀಲನೆ ಕೈಗೊಳ್ಳಲಿದೆ. ಆ ತಂಡದ ವರದಿ ಆಧರಿಸಿ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲಿದೆ.
ಬೆಳೆ ಹಾನಿಯ ಸಮೀಕ್ಷೆ ನಡೆದಿದ್ದು, ರಾಜ್ಯ ಸರ್ಕಾರದ ವರದಿಯನ್ನು ಆಧರಿಸಿ ಕೇಂದ್ರ ತಂಡದ ಮತ್ತೊಂದು ಭೇಟಿಯ ದಿನಾಂಕ ನಿಗದಿಯಾಗಲಿದೆ. ಸೋಮವಾರ ರಾಜ್ಯ ಸರ್ಕಾರ ಹಾನಿ ಕುರಿತ ಪ್ರಸ್ತಾವ ಸಲ್ಲಿಸಲಿದ್ದು, ನಂತರ ಎರಡನೇ ಭೇಟಿ ನಡೆಯಲಿದೆ.
ನೆರೆ ಪರಿಹಾರ ಕೇಳಿದರೆ ಬರ ಪರಿಹಾರ ಕೊಟ್ಟ ಕೇಂದ್ರ ಸರ್ಕಾರ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ರಕ್ಷಣೆ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಹಾಗೂ ಪುನರ್ವಸತಿ ನಿಟ್ಟಿನಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ. ಇದರಿಂದಾಗಿ ಜನ-ಜಾನುವಾರುಗಳ ಜೀವರಕ್ಷಣೆ ಸಾಧ್ಯವಾಗಿದೆ.
ತಂಡ ಚಿಕ್ಕೋಡಿ ತಾಲೂಕಿನ ಮಾಂಜರಿ ಸೇತುವೆ ಬಳಿ ಬೆಳೆಹಾನಿಯನ್ನು ಪರಿಶೀಲಿಸಿತು. ಬಳಿಕ ಮಾಂಜರಿಯ ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿದ ತಂಡವು ಅಲ್ಲಿ ಮನೆಗಳ ಹಾನಿಯನ್ನು ಪರಿಶೀಲಿಸಿತು. ನಂತರ ಶಿರಗುಪ್ಪಿಯ ದೂಧ್ ಗಂಗಾ ನದಿ ಬಳಿಯ ರಸ್ತೆ ಹಾಗೂ ಸೇತುವೆಯ ಹಾನಿ ವೀಕ್ಷಣೆ ಮಾಡಲಾಯಿತು.
ಕೇಂದ್ರ ಗೃಹ ವ್ಯವಹಾರಗಳ ಇಲಾಖೆಯ ಆಡಳಿತ ವಿಭಾಗದ ಜಂಟಿ ಕಾರ್ಯದರ್ಶಿ ಪ್ರಕಾಶ್, ವಿತ್ತ ಇಲಾಖೆಯ ಎಫ್.ಸಿ.ಡಿ. ನಿರ್ದೇಶಕರಾದ ಎಸ್.ಸಿ.ಮೀನಾ, ಕೃಷಿ ಮತ್ತು ರೈತರ ಸಹಕಾರ ಇಲಾಖೆಯ ಎಣ್ಣೆ ಬೀಜಗಳ ಕಚೇರಿಯ ಜಂಟಿ ನಿರ್ದೇಶಕರಾದ ಡಾ.ಪುನ್ನುಸ್ವಾಮಿ, ಕೇಂದ್ರ ಜಲಸಂಪನ್ಮೂಲ ಇಲಾಖೆಯ ಅಧೀಕ್ಷ ಎಂಜಿನಿಯರ್ ಜಿತೇಂದ್ರ ಪನ್ವಾರ್, ಕೇಂದ್ರ ರಸ್ತೆ ಸಾರಿಗೆ ಇಲಾಖೆಯ ವಿಜಯಕುಮಾರ್, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್, ಕೇಂದ್ರ ಇಂಧನ ಇಲಾಖೆಯ ಉಪ ನಿರ್ದೇಶಕರಾದ ಓ.ಪಿ.ಸುಮನ್ ತಂಡದಲ್ಲಿದ್ದರು.