ಪ್ರವಾಹದಲ್ಲಿ ಕೊಚ್ಚಿಕೊಂಡು ಗದ್ದೆಗೆ ಬಿದ್ದ ಕಾರುಗಳು
ಬೆಳಗಾವಿ, ಆಗಸ್ಟ್ 15: ಬಿಡದೇ ಸುರಿಯುತ್ತಿರುವ ಮಳೆ, ನದಿಗಳ ಪ್ರವಾಹ ಉಂಟು ಮಾಡಿರುವ ಅವಾಂತರಕ್ಕೆ ಲೆಕ್ಕವಿಲ್ಲ. ಬೆಳಗಾವಿಯಲ್ಲಂತೂ ಮಳೆ ಎಲ್ಲವನ್ನೂ ನಾಶ ಮಾಡಿದೆ. ಇದುವರೆಗೂ ಕೂಡಿಟ್ಟಿದ್ದ, ಸಂಪಾದಿಸಿದ್ದ ಆಸ್ತಿ ಪಾಸ್ತಿಗಳೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ.
ಇನ್ನು ನೀರಿನಲ್ಲಿ ಕಳೆದುಹೋದ ವಾಹನಗಳೂ ಪತ್ತೆಯಿಲ್ಲ. ಎಲ್ಲಿ ಕೊಚ್ಚಿಕೊಂಡು ಹೋಗಿ ಎಲ್ಲಿ ಬಿದ್ದಿವೆಯೋ ತಿಳಿದಿಲ್ಲ. ಅದು ಕಂಡರೂ ಜನರಿಗೆ ಅದು ತಮ್ಮದೇ ವಾಹನ ಎಂದು ಗುರುತು ಹಿಡಿಯುವುದೂ ಸುಲಭವಲ್ಲ. ಒಂದು ವೇಳೆ ಅವು ಸಿಕ್ಕರೂ ಮತ್ತೆ ಮೊದಲಿನ ಸ್ಥಿತಿಗೆ ಬರುವುದಂತೂ ಸಾಧ್ಯವಿಲ್ಲ.

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲೂ ಹೀಗೆ ಪ್ರವಾಹದಲ್ಲಿ ಕೊಚ್ಚಿ ಬಂದ ಕಾರುಗಳು ಗದ್ದೆ ಬಯಲಿನಲ್ಲಿ ಬಂದು ಬಿದ್ದಿವೆ. ರಾಮದುರ್ಗದ ಯಾದವಾಡ ಪೆಟ್ರೋಲ್ ಪಂಪ್ ಪಕ್ಕದಲ್ಲಿ ಇರುವ ಗದ್ದೆ ಸ್ವಲ್ಪ ತಗ್ಗಾಗಿರುವುದರಿಂದ ಎರಡು ಕಾರುಗಳು, ವಾಹನದ ಕೆಲ ಭಾಗಗಳು ಇಲ್ಲಿಗೆ ಬಂದು ಬಿದ್ದಿವೆ. ಇವೆಲ್ಲವೂ ರಸ್ತೆ ಬದಿಯ ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಕಾರುಗಳು ಇರಬಹುದು ಎನ್ನಲಾಗಿದೆ. ಆದರೆ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ್ದ ವಾಹನಗಳು ಈಗ ಉಪಯೋಗಕ್ಕೆ ಬಾರದೆ ನಿಂತಿರುವುದು ನೋಡಿದರೆ ಬೇಸರವಾಗುತ್ತದೆ.












Click it and Unblock the Notifications