ಲಕ್ಷ್ಮಣ ಸವದಿ ವಿಧಾನಸಭಾ ಚುನಾವಣಾ ಕಣಕ್ಕಿಳಿಯಲಿದ್ದಾರಾ?
ಬೆಳಗಾವಿ, ಮೇ 26: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಲಕ್ಷ್ಮಣ ಸವದಿಗೆ ಮತ್ತೊಂದು ಅವಕಾಶ ನೀಡಿದೆ. ಸವದಿಗೆ ಟಿಕೆಟ್ ನೀಡಿರುವ ಹಿಂದೆ ಬಿಜೆಪಿ ಹೈಕಮಾಂಡ್ನ ರಾಜಕೀಯ ಲೆಕ್ಕಾಚಾರ ಇದೆ ಎನ್ನಲಾಗಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಲಕ್ಷ್ಮಣ ಸವದಿ ಸಿದ್ಧತೆ ನಡೆಸಿದ್ದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲರ ಲೆಕ್ಕಾಚಾರ ಕೆಳಗೆ ಮಾಡಿದ ಬಿಜೆಪಿ ಹೈ ಕಮಾಂಡ್ ಲಕ್ಷ್ಮಣ ಸವದಿ ಮತ್ತೊಂದು ಅವಧಿಗೆ ಅವಕಾಶ ಕೊಟ್ಟಿದೆ.
ಕಾಂಗ್ರೆಸ್ನಿಂದ ವಲಸೆ ಬಂದಿರುವ ಮಹೇಶ್ ಕುಮಟಳ್ಳಿಗೆ ಮುಂದಿನ ವಿಧಾನಸಭೆ ಚುನಾವಣೆ ಟಿಕೆಟ್ ನೀಡಲು ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಲು ಕಂಡಿದ್ದ ಲಕ್ಷ್ಮಣ ಸವದಿಯನ್ನು ವಿಧಾನಪರಿಷತ್ಗೆ ಕಳುಹಿಸಲಾಗುತ್ತಿದೆ ಎನ್ನುವ ಸುದ್ದಿ ಹಬ್ಬಿದೆ.
2023ರಲ್ಲಿ ನಡೆಯಲಿರುವ ಚುನಾವಣೆಗೆ ಮುನ್ನ ಮಹೇಶ್ ಕುಮಟಳ್ಳಿ ಸೇರಿದಂತೆ 17 ಪಕ್ಷಾಂತರವಾದ ಶಾಸಕರನ್ನು ಒಟ್ಟಿಗೆ ಇಟ್ಟುಕೊಳ್ಳಲು ಮತ್ತು ಅವರಲ್ಲಿ ಹಲವರು ಕಾಂಗ್ರೆಸ್ ಸೇರಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಬಿಜೆಪಿಯು ಕುಮಟಳ್ಳಿಗೆ ಅಥಣಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಲು ಮುಂದಾಗಿದೆ ಎಂಬ ವಿಶ್ಲೇಷಣೆಯೂ ಇದೆ.
ಅಥಣಿಯಲ್ಲಿ ಸೋತಿದ್ದ ಸವದಿ
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಕ್ಷ್ಮಣ ಸವದಿ, ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ಕುಮುಟಹಳ್ಳಿ ವಿರುದ್ಧ ಸೋಲನುಭವಿಸಿದ್ದರು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಆಪರೇಷನ್ ಕಮಲಕ್ಕೆ ಸಿಲುಕಿ ಕಾಂಗ್ರೆಸ್ನ ಕುಮುಟಳ್ಳಿ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು.
ಬಿಜೆಪಿ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿದ್ದ ಮಹೇಶ್ ಕುಮುಟಳ್ಳಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದರು. ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲೂ ಮಹೇಶ್ ಕುಮುಟಳ್ಳಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ. ಆದರೆ ಲಕ್ಷ್ಮಣ ಸವದಿ ಕೂಡ ಅಥಣಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ಗೆ ಬೇಡಿಕೆ ಇಡುವ ಸಾಧ್ಯತೆ ಇದೆ.
ಹೈಕಮಾಂಡ್ನ ಚಾಣಾಕ್ಷ ನಡೆ
ಒಂದು ವೇಳೆ ಲಕ್ಷ್ಮಣ ಸವದಿಗೆ ಪರಿಷತ್ ಟಿಕೆಟ್ ನೀಡದಿದ್ದಲ್ಲಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದ ಟಿಕೆಟ್ ಮಹೇಶ್ ಕುಮಟಳ್ಳಿ ಬದಲಿಗೆ ತಮಗೆ ನೀಡುವಂತೆ ಬಿಗಿಪಟ್ಟು ಹಿಡಿಯುವ ಸಾಧ್ಯತೆ ಇತ್ತು. ಒಂದು ವೇಳೆ ಕುಮುಟಳ್ಳಿ ಬದಲಿಗೆ ಸವದಿಗೆ ಟಿಕೆಟ್ ನೀಡಿದರೆ ರಮೇಶ್ ಜಾರಕಿಹೊಳಿ ಬಂಡಾಯ ಏಳುವ ಸಾಧ್ಯತೆ ಇದೆ.
ವಿಧಾನಸಭೆ ಚುನಾವಣೆ ವೇಳೆ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಈಗಲೇ ಎಚ್ಚೆತ್ತುಕೊಂಡಿರುವ ಬಿಜೆಪಿ ಹೈ ಕಮಾಂಡ್ ಎಲ್ಲಾ ಲೆಕ್ಕಾಚಾರ ಹಾಕಿಕೊಂಡೇ ಲಕ್ಷ್ಮಣ ಸವದಿಗೆ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡಿದೆ ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.
ಸವದಿಗೆ ಸಾಲು ಸಾಲು ಅವಕಾಶ
ಈಗಾಗಲೇ ಅಥಣಿ ಕ್ಷೇತ್ರದಿಂದ ಸೋಲು ಕಂಡಿರುವ ಲಕ್ಷ್ಮಣ ಸವದಿ ಸ್ಥಾನಕ್ಕೆ ಕಾಂಗ್ರೆಸ್ನಿಂದ ಮಹೇಶ್ ಕುಮಟಳ್ಳಿ ಬಂದಿದ್ದು, ಅಥಣಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ಯೋಚನೆಯಲ್ಲಿದ್ದಾರೆ. ಮತ್ತೊಂದೆಡೆ ಲಕ್ಷ್ಮಣ ಸವದಿ ಅಥಣಿ ಕ್ಷೇತ್ರಕ್ಕಾಗಿ ತಿಕ್ಕಾಟ ಶುರುವಾಗಬಾರದು ಎನ್ನುವ ದೃಷ್ಟಿಯಿಂದ ಸವದಿಗೆ ಮೇಲಿಂದ ಮೇಲೆ ಉತ್ತಮ ಅವಕಾಶ ನೀಡುತ್ತಿದೆ ಎನ್ನಲಾಗಿದೆ.
ಸವದಿ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಉಪಮುಖ್ಯಮಂತ್ರಿ ಸ್ಥಾನ ಒಲಿದು ಬಂದಿತ್ತು. ವಿಧಾನಪರಿಷತ್ಗೆ ಆಯ್ಕೆ ಮಾಡಲಾಗಿತ್ತು, ಈಗ ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈಗ ಎರಡನೇ ಬಾರಿಗೆ ವಿಧಾನಪರಿಷತ್ಗೆ ಟಿಕೆಟ್ ನೀಡಿದೆ. ಇದೆಲ್ಲದರ ಹಿಂದೆ ಅಥಣಿ ಕ್ಷೇತ್ರದಲ್ಲಿ ಗೊಂದಲವಾಗದಂತೆ, ಕುಮುಟಹಳ್ಳಿ ವಿಧಾನಸಭೆ ಚುನಾವಣೆಗೆ ದಾರಿ ಮಾಡಿಕೊಡಲು ಹೈ ಕಮಾಂಡ್ ಲೆಕ್ಕಾಚಾರ ಹಾಕಿದೆ ಎಂದು ಮೂಲಗಳು ತಿಳಿಸಿವೆ.
ಲಕ್ಷ್ಮಣ ಸವದಿ ಹೇಳಿದ್ದೇನು?
ಈ ಕುರಿತು ಮಾತನಾಡಿರುವ ಬಿಜೆಪಿ ನಾಯಕ ಮಹಾಂತೇಶ ಕವಠಗಿಮಠ "2023ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸವದಿಯವರನ್ನು ಕಣಕ್ಕಿಳಿಸಲು ಪಕ್ಷ ಉತ್ಸುಕವಾಗಿದೆ. ಪಕ್ಷದ ಹಿರಿಯ ನಾಯಕರಾಗಿರುವ ಕಾರಣ ಪಕ್ಷ ಅವರನ್ನು ಪರಿಷತ್ ಚುನಾವಣೆಯಲ್ಲಿ ಕಣಕ್ಕಿಳಿಸಿದೆ, ಅವರು ಅಧಿಕಾರದಲ್ಲಿ ಇರಬೇಕೆಂಬುದು ಪಕ್ಷದ ಬಯಕೆ" ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ವೇಳೆ ತಾವು ಸ್ಪರ್ಧಿಸುತ್ತೀರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಣ ಸವದಿ, "ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುವೆ. ಪಕ್ಷಕ್ಕೆ ಮುಜುಗರ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು" ಎಂದು ಹೇಳಿಕೆ ನೀಡಿದ್ದಾರೆ.