Breaking; ಬಿಜೆಪಿ ನಾಯಕ ಲಕ್ಷ್ಮಣ ಸವದಿ ಕಾರು ಪಲ್ಟಿ
ಬೆಳಗಾವಿ, ಆಗಸ್ಟ್ 31: ಮಾಜಿ ಸಚಿವ, ಬಿಜೆಪಿ ನಾಯಕ ಲಕ್ಷ್ಮಣ ಸವದಿ ಕಾರು ಪಲ್ಟಿಯಾಗಿದೆ. ಸ್ಥಳೀಯರು ಮಾಜಿ ಸಚಿವರನ್ನು ರಕ್ಷಣೆ ಮಾಡಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
ಬುಧವಾರ ಮಧ್ಯಾಹ್ನ ಬೆಳಗಾವಿ ಜಿಲ್ಲೆಯ ಹಾರೋಗೇರಿ ಕ್ರಾಸ್ ಬಳಿ ಲಕ್ಷ್ಮಣ ಸವದಿ ಕಾರು ಚಾಲಕನ ನಿಯಂತ್ರ ತಪ್ಪಿ ರಸ್ತೆಯ ಪಕ್ಕವಿದ್ದ ಘಟಪ್ರಭಾ ಎಡದಂಡೆ ನಾಲೆಗೆ ಪಲ್ಟಿಯಾಗಿದೆ.
ಅಪಘಾತ ನಡೆದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ಕಾರಿನಲ್ಲಿ ಸಿಲುಕಿದ್ದ ಲಕ್ಷ್ಮಣ ಸವದಿ, ಕಾರು ಚಾಲಕ ಸೇರಿದಂತೆ ಇತರರನ್ನು ಕಾರಿನಿಂದ ಹೊರಗೆ ಕರೆತಂದು ರಕ್ಷಣೆ ಮಾಡಿದರು.

ಮಾಜಿ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಕಾರಿನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ. ಕಪ್ಪು ಬಣ್ಣದ ಐಷಾರಾಮಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಉರುಳಿತ್ತು.
ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರಿಯಾದ ಸಮಯಕ್ಕೆ ಸಹಾಯ ಮಾಡಿದ ಸ್ಥಳೀಯರಿಗೆ ಲಕ್ಷ್ಮಣ ಸವದಿ ಧನ್ಯವಾದಗಳನ್ನು ತಿಳಿಸಿದರು.
ಹಾರೋಗೇರಿ ಕ್ರಾಸ್ ಬಳಿಯ ಏಕಲವ್ಯ ಕಾಲೇಜು ಬಳಿ ಈ ಅಪಘಾತ ನಡೆದಿದೆ. ರಸ್ತೆಯಲ್ಲಿ ಕಾರು ವೇಗವಾಗಿ ಹೋಗುವಾಗ ಏಕಾಏಕಿ ಬೈಕ್ ಸವಾರರು ಅಡ್ಡಬಂದಿದ್ದಾರೆ. ಬೈಕ್ ತಪ್ಪಿಸಲು ಹೋದಾಗ ಕಾರು ಚಾಲಕನ ನಿಯಂತ್ರಣ ತಪ್ಪಿದೆ.

ಅಥಣಿಯಿಂದ ಗೋಕಾಕ್ಗೆ ಲಕ್ಷ್ಮಣ ಸವದಿ ಸಂಚಾರ ನಡೆಸುತ್ತಿದ್ದರು. ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯ ಪಕ್ಕದಲ್ಲಿದ್ದ ಘಟಪ್ರಭಾ ಎಡದಂಡೆ ನಾಲೆಗೆ ಪಲ್ಟಿಯಾಗಿದೆ. ಸ್ಥಳೀಯರ ಸಹಕಾರದಿಂದ ಲಕ್ಷ್ಮಣ ಸವದಿ ಮತ್ತು ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದು, "ಮಾಜಿ ಉಪ ಮುಖ್ಯಮಂತ್ರಿ ಶ್ರೀ ಲಕ್ಷ್ಮಣ ಸವದಿ ಅವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ವಿಚಾರ ತೀಳಿದು ತೀವ್ರ ಆಘಾತವಾಯಿತು. ಅದೃಷ್ಟವಶಾತ್ ಅವರಿಗೆ ಯಾವುದೇ ಹಾನಿಯಾಗಿಲ್ಲ. ಶೀಘ್ರವೇ ಅವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವೆ" ಎಂದು ಹೇಳಿದ್ದಾರೆ.












Click it and Unblock the Notifications