ಬೆಳಗಾವಿ : ಪಟ್ಟು ಸಡಿಲಿಸಿದ ಬಿಜೆಪಿ, ಕಲಾಪ ಆರಂಭ
ಬೆಳಗಾವಿ, ನ. 28 : ರೈತ ಆತ್ಮಹತ್ಯೆ ಪ್ರಕರಣ ಸದನದ ನಾಲ್ಕನೇ ದಿನದ ಕಲಾಪಕ್ಕೆ ತಡೆ ಉಂಟುಮಾಡಿತ್ತು. ಬೆಳಗ್ಗೆ 11 ಗಂಟೆಗೆ ಸದನ ಆರಂಭವಾದಾಗ ಪ್ರತಿಪಕ್ಷ ಬಿಜೆಪಿ ಸದಸ್ಯರು ಕಪ್ಪುಪಟ್ಟಿ ಧರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಕಲಾಪವನ್ನು ಅರ್ಧಗಂಟೆಗಳ ಕಾಲ ಮುಂದೂಡಲಾಯಿತು. ನಂತರ ಎರಡು ಬಾರಿ ಸದನ ಮುಂದೂಡಿದ ನಂತರ ಕಲಾಪ 4.45ಕ್ಕೆ ಆರಂಭವಾಗಿದೆ.
ಕಪ್ಪುಪಟ್ಟಿಧರಿಸಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ಸಫಲವಾಗಿದ್ದು, ಸುಗಮ ಕಪಾಪಕ್ಕೆ ಬಿಜೆಪಿ ಅವಕಾಶ ನೀಡಿದೆ. ಜೆಡಿಎಸ್ ಸದನದವೊಳಗೆ ಪ್ರತಿಭಟನೆ ನಡೆಸುವುದು ಬೇಡ ಎಂದು ತೀರ್ಮಾನಿಸಿದ್ದು, ಕಲಾಪ ನಡೆಯಲು ಅವಕಾಶ ಮಾಡಿಕೊಟ್ಟಿದೆ. (ರೈತ ಆತ್ಮಹತ್ಯೆ : ಸರ್ಕಾರಕ್ಕೆ ಪ್ರತಿಪಕ್ಷಗಳ ಗುದ್ದು)
ವಿಧೇಯಕಗಳ ಮಂಡನೆ : ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ನಾಗರೀಕ ಸೇವೆಗಳ ವಿಧೇಯಕ, ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ, ಕರ್ನಾಟಕ ಕೊಳಚೆ ಪ್ರದೇಶಗಳ ತಿದ್ದುಪಡಿ ವಿಧೇಯಕ, ಮಹಿಳಾ ಆಯೋಗದ ತಿದ್ದುಪಡಿ ವಿಧೇಯಕ, ಆರೋಗ್ಯ ವಿವಿ ತಿದ್ದುಪಡಿ ವಿಧೇಯಕ, ಕೈಗಾರಿಕಾ ಅಭಿವೃದ್ಧಿ ವಿಧೇಯಕಗಳನ್ನು ಸದನದಲ್ಲಿ ಮಂಡಿಸಲಾಗಿದೆ.
ಕುರುಬ ವಿವಾದ : ಪ್ರತಿಪಕ್ಷದ ಬಿ.ಎಸ್.ಯಡಿಯೂರಪ್ಪ ಆತ್ಮಗತ್ಯೆ ಮಾಡಿಕೊಂಡ ರೈತ ವಿಠಲ ಅರಭಾವಿ ಅವರ ಭಾಷಣವನ್ನು ಸದನದಲ್ಲಿ ಓದಿದ್ದು ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಭಾಷಣದ ಮೊದಲ ಸಾಲಿನಲ್ಲಿ "ನಾನು ಕುರುಬ...ನೀನು ಕುರುಬ" ಎಂಬ ಪದವಿತ್ತು. ಯಡಿಯೂರಪ್ಪ ಕುರುಬ ಎಂದು ಹೇಳುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಪದವನ್ನು ಕಡತದಿಂದ ಕಿತ್ತುಹಾಕಬೇಕು ಎಂದು ಆಗ್ರಹಿಸಿದರು. ಸ್ಪೀಕರ್ ಆಡಳಿತ ಪಕ್ಷದ ಶಾಸಕರನ್ನು ಸಮಾಧಾನ ಪಡಿಸಿ ಕಲಾಪಕ್ಕೆ ಅವಕಾಶ ಮಾಡಿಕೊಟ್ಟರು.
ಸರ್ಕಾರ ಸತ್ತು ಹೋಗಿದೆ : ವಿಧಾನ ಪರಿಷತ್ ಕಲಾಪ ಬೆಳಗ್ಗೆ 11 ಗಂಟೆಗೆ ಆರಂಭವಾಗುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ರೈತರ ಬಗ್ಗೆ ಮುಖ್ಯಮಂತ್ರಿಗಳು ಉದ್ಧಟತನ ತೋರುತ್ತಿದ್ದಾರೆ. ಕಳೆದ 3 ತಿಂಗಳಿಂದ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದ ಕಾರಣ ರೈತನೋರ್ವ ಸಾವನ್ನಾಪಿದ್ದಾನೆ. ರೈತರ ಸಮಸ್ಯೆಗೆ ಸ್ಪಂದಿಸದ ಸರ್ಕಾರ ಸತ್ತು ಹೋಗಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಪ್ರತಿಭಟನೆ ಹಿನ್ನಲೆಯಲ್ಲಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಮಧ್ಯಾಹ್ನ 3 ಗಂಟೆಗೆ ಕಲಾಪದಲ್ಲಿ ಪುನಃ ಬಿಜೆಪಿ ಪ್ರತಿಭಟನೆ ನಡೆಸಿದ್ದರಿಂದ ಕಲಾಪವನ್ನು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ. ವಿಧಾನ ಪರಿಷತ್ತಿನ ಇಂದಿನ ಕಲಾಪ ರೈತರ ಆತ್ಮಹತ್ಯೆ ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು.
ಗ್ರಾಮ ಸಹಾಯಕರ ಉಪವಾಸ ಅಂತ್ಯ : ತಮ್ಮನ್ನು ಡಿ ದರ್ಜೆ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಕಂದಾಯ ಇಲಾಖೆಯ ಗ್ರಾಮ ಸಹಾಯಕರು ಸುವರ್ಣ ವಿಧಾನಸೌಧದ ಮುಂಭಾಗ ಮೂರುದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಗುರುವಾರ ಅಂತ್ಯಗೊಂಡಿದೆ. ಸಿಎಂ ಸಿದ್ದರಾಮುಯ್ಯ ಉಪವಾಸ ನಿರತರೊಂದಿಗೆ ಸಭೆ ನಡೆಸಿ, ಡಿ.10ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. ಆದ್ದರಿಂದ ಗ್ರಾಮ ಸಹಾಯಕರು ಪ್ರತಿಭಟನೆ ಹಿಂಪಡೆದಿದ್ದಾರೆ. (ಸುವರ್ಣ ಸೌಧ ಮುತ್ತಿಗೆ ಹಾಕ್ತಾರಂತೆ ಗ್ರಾಮ ಸಹಾಯಕರು)
ರೈತನ ಅಂತ್ಯ ಸಂಸ್ಕಾರ : ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಕಬ್ಬು ಬೆಳೆಗಾರ ವಿಠಲ್ ಅರಭಾವಿ ಅಂತ್ಯಕ್ರಿಯೆ ಗುರುವಾರ ಅವರ ಸ್ವ ಗ್ರಾಮದಲ್ಲಿ ನೆರವೇರಿತು. ಸರ್ಕಾರ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಂತ್ಯಸಂಸ್ಕರದಲ್ಲಿ ಪಾಲ್ಗೊಂಡಿದ್ದರು. (ಸಕ್ಕರೆದಾತನ ಅಂತ್ಯಕ್ರಿಯೆ)