13 ಕ್ಷೇತ್ರಗಳತ್ತ ಮಾತ್ರವೇ ಜೆಡಿಎಸ್ ಗೌಡರ ಚಿತ್ತ
ಬೆಳಗಾವಿ, ಏ.9- ಚುನಾವಣೆ ಕಾಲೇ ಜೆಡಿಎಸ್ ಪಕ್ಷಕ್ಕೆ ಮತ್ತೊಂದು ಆಘಾತವಾಗಿದೆ. ಈ ಹಿಂದೆ ಹೇಳಿದ್ದಂತೆ ಹಾಲಿ ಲೋಕಸಭಾ ಚುನಾವಣಾ ಕಣದಿಂದ ಸುಮಾರು ಆರೇಳು ಅಭ್ಯರ್ಥಿಗಳು ಹಿಂದೆ ಸರಿಯುವ ಯತ್ನದಲ್ಲಿದ್ದಾರೆ ಎನ್ನಲಾಗಿತ್ತು.
ಅದಕ್ಕೆ ಪುಷ್ಠಿ ನೀಡುವಂತೆ ನಿನ್ನೆ ಪ್ರತಿಷ್ಠಿತ ಬೆಳಗಾವಿ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಸೀರ್ ಪಪುಲ್ ಸಾಬ್ ಬಾಗವಾನ್ (Nasir Papulsab Bagwan) ಅವರು ಪಕ್ಷದ ಹೊರೆ ಇಳಿಸಿ, ಕೈ ಪಾಲಾಗಿದ್ದಾರೆ. (ಜೆಡಿಎಸ್ಸಿನ ಕೆಲ ಅಭ್ಯರ್ಥಿಗಳು ಅನ್ಯ ಪಕ್ಷಗಳತ್ತ?)
56 ವರ್ಷದ ನಾಸೀರ್ ಗೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ಟಿಕೆಟ್ ಪ್ರಾಪ್ತಿಯಾಗಿತ್ತು. ವೃತ್ತಿಯಿಂದ ಬಿಲ್ಡರ್ ಆಗಿರುವ ನಾಸೀರ್, ತಾವು ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ತಾವು 105 ಕೋಟಿ ರೂ. ಆಸ್ತಿವಂತರು ಎಂದು ಘೋಷಿಸಿಕೊಂಡಿದ್ದರು.
ಹುಬ್ಬಳ್ಳಿಯಲ್ಲಿ ವ್ಯಾಪಾರ ವಹಿವಾಟು ಹೊಂದಿರುವ ಬಾಗವಾನ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಪಕ್ಷೇತರ ಆಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2008ರಲ್ಲಿ ಜೆಡಿಎಸ್ಸಿನಿಂದ ಖಾನಾಪುರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ, ಸೋತಿದ್ದರು.
ಕಾಂಗ್ರೆಸ್ ವತಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಬಿಜೆಪಿಯ ಹಾಲಿ ಸಂಸದ ಸುರೇಶ್ ಅಂಗಡಿ ಅವರು ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ 15.5 ಲಕ್ಷ ಮತದಾರರಿದ್ದು, 2.5 ಲಕ್ಷ ಮುಸ್ಲಿಂ ಮತಗಳು ಇವೆ. ಕಾಂಗ್ರೆಸ್ ಕಣ್ಣು ಇದೀಗ 2.5 ಲಕ್ಷ ಮುಸ್ಲಿಂ ಮತಗಳ ಮೇಲಿವೆ ಎಂದು ಪಕ್ಷದ ಹಿರಿಯ ನಾಯಕರು ನುಡಿದಿದ್ದಾರೆ. (ದೇಶಪಾಂಡೆಗೆ ಡಬಲ್ ಅಲ್ಲ ತ್ರಿಬಲ್ ಧಮಾಕಾ ಮುಂದೆ ಓದಿ...)
ಇದರೊಂದಿಗೆ ಚುನಾವಚಣೆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಬಲಗುಂದಿದಂತಾಗಿದೆ. ಇತ್ತೀಚೆಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶಿವಾನಂದ ನಾಯ್ಕ ಅವರು ಜೆಡಿಎಸ್ ತೆನೆ ಇಳಿಸಿ, ಬಿಜಿಪಿ ಪಾಳಯ ಸೇರಿಕೊಂಡಿದ್ದರು.
ಇದರೊಂದಿಗೆ ಜೆಡಿಎಸ್ ಲೆಕ್ಕಾಚಾರ ಹೀಗಿದೆ: ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಈಗ ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿಗಳ ಸಂಖ್ಯೆ 24. ಅದರಲ್ಲಿ ದೇವೇಗೌಡರ ಹೇಳುವಂತೆ 24ರ ಪೈಕಿ 13 ಕ್ಷೇತ್ರಗಳ ಮೇಲಷ್ಟೇ ಪಕ್ಷಕ್ಕೆ ಒಲವು ಇರುವುದು.

ದೇವೇಗೌಡರು ಏನನ್ನುತ್ತಾರೆ?
ಬೆಳಗಾವಿಯ ಕ್ಷೇತ್ರವನ್ನು ನಾವು ಗಂಭೀರವಾಗಿ ಪರಿಗಣಿಸಿಲ್ಲ. ವಿಜಾಪುರ, ಬೀದರ್, ಚಿಕ್ಕೋಡಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ 13 ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೇ ಆಗಲಿ ಬಿಜೆಪಿಗೇ ಆಗಲಿ ಆಪರೇಶನ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪಕ್ಷದಲ್ಲಿ ತಾಕಾ ಬೆಳವಣಿಗೆಗಳನ್ನು ವಿಶ್ಲೇಷಿಸಿದ್ದಾರೆ.

ನಾಸೀರ್ ಬಾಗವಾನ್ ಹೇಳುದೇನು?
ಜೆಡಿಎಸ್ಸಿನ ಹೊಲಸು ರಾಜಕಾರಣದಿಂದ ಬೇಸತ್ತು ಕಾಂಗ್ರೆಸ್ ಸೇರಿದ್ದೇನೆ. ನಾನು ಪಕ್ಷದಿಂದ ಹಣ ಕೇಳಿಲ್ಲ. ಗೌರವನ್ನು ಮಾತ್ರ ನಿರೀಕ್ಷಿಸಿದ್ದೆ. ಆದರೆ ಪ್ರಚಾರಕ್ಕೆ ಕರೆದರೆ ಯಾವುದೇ ಮುಖಂಡರು ಬರಲು ಸಿದ್ಧರಿಲ್ಲ. ಕೊನೆ ಪಕ್ಷ ನನ್ನ ಫೋನನ್ನೂ ಮುಖಂಡರು ರಿಸೀವ್ ಮಾಡುತ್ತಿಲ್ಲ ಎಂದು ನಾಸೀರ್ ಪಪುಲ್ ಸಾಬ್ ಬಾಗವಾನ್ ಅಲವತ್ತುಕೊಂಡಿದ್ದಾರೆ.

ಪಕ್ಷಕ್ಕೆ ಸಿಹಿಸುದ್ದಿ ಸಿದ್ದು ಮೊದಲೇ ಹೇಳಿದ್ದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ರಾತ್ರಿ ಕಿತ್ತೂರಿನಲ್ಲಿ ಬಹಿರಂಗ ಪ್ರಚಾರ ಸಭೆ ನಡೆಸಿದ್ದರು. ಪಕ್ಷಕ್ಕೆ ಸಿಹಿ ಸುದ್ದಿ ಕೊಡುವುದಾಗಿ ಸಿದ್ದರಾಮಯ್ಯ ಮೊದಲೇ ಹೇಳಿದ್ದರು. ಅದರಂತೆ ಸಭೆ ಮುಕ್ತಾಯಕ್ಕೆ ದಿಢೀರನೆ ಜೆಡಿಎಸ್ಸಿನ ನಾಸೀರ ಭಾಗವಾನ್ ಅವರು ನಮ್ಮ ಕೈಹಿಡಿದ್ದಾರೆ ಎಂದು ಘೋಷಿಸಿದರು.

ಸ್ಥಳೀಯ ಅಭ್ಯರ್ಥಿ ಪ್ರಶಾಂತ ದೇಶಪಾಂಡೆ ಸಾಕ್ಷಿಯಾದರು
ತಕ್ಷಣ ವೇದಿಕೆಯ ಮುಂದಿದ್ದ ನಾಸೀರ ಬಾಗವಾನ್ ಅವರು ವೇದಿಕೆಯೇರಿದರು. ಆಗ ಇನ್ನೂ ಅವರ ಹೆಗಲ ಮೇಲೆ ಜೆಡಿಎಸ್ಸಿನ ಹಸಿರು ಶಾಲು ರಾರಾಜಿಸುತ್ತಿತ್ತು. ಬಾಗವಾನ್ ಜತೆಗೆ ಮತ್ತೊಬ್ಬ ಬಾಗವಾನ್ ಮುಖಂಡ ಕಳೆದ ಬಾರಿ ಕಿತ್ತೂರಿನಿಂದ ವಿಧಾನಸಭೆಗೆ ಸ್ಪರ್ಧಿಸಿ, ಸೋತಿದ್ದ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಅವರೂ ಸಹ ಕಾಂಗ್ರೆಸ್ ಸೇರಿದರು.
ಸಿಎಂ ಸಿದ್ದರಾಮಯ್ಯ ಇಬ್ಬರಿಗೂ ಪಕ್ಷದ ಶಾಲು ಹೊದಿಸಿ, ಧ್ವಜ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು. ಸ್ಥಳೀಯ ಅಭ್ಯರ್ಥಿ ಪ್ರಶಾಂತ ದೇಶಪಾಂಡೆ ಇದಕ್ಕೆ ಸಾಕ್ಷಿಯಾದರು.

ದೇಶಪಾಂಡೆಗೆ ಡಬಲ್ ಅಲ್ಲ ತ್ರಿಬಲ್ ಧಮಾಕಾ:
ಮೂಲತಃ ಖಾನಾಪುರದವರಾದ ನಾಸೀರ ಬಾಗವಾನ್ ಅವರು ಹೀಗೆ ಸಮರದಲ್ಲಿ ಸಕ್ರಿಯವಾಗಿರುವಾಗ ಪಕ್ಷಾಂತರ ಮಾಡಲು ಕಾರಣವಾದರು ಏನು, ಯಾರು ಎಂದು ನೋಡಿದಾಗ ುತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಅವರ ಹೆಸರು ಕೇಳಿಬರುತ್ತದೆ.

ಉ.ಕ.ದಲ್ಲಿ ಪ್ರಶಾಂತ ದೇಶಪಾಂಡೆ ಹಾದಿ ಸುಗಮ
ಅಂದಹಾಗೆ ದೇಶಪಾಂಡೆ ಅವರ ಪುತ್ರ ಪ್ರಶಾಂತ ದೇಶಪಾಂಡೆ ಅವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಅಲ್ಲಿಂದ ಈಗಾಗಲೇ ಜೆಡಿಎಸ್ ಅಭ್ಯರ್ಥಿಯನ್ನು ಯಶಸ್ವಿಯಾಗಿ ತಮ್ಮ ಬುಟ್ಟಿಗೆ ಹಾಕಿಕೊಂಡಿರುವ ಸೀನಿಯರ್ ದೇಶಪಾಂಡೆ ಇದೀಗ ನಾಸೀರ ಬಾಗವಾನ್ ಮೂಲಕ ಪುತ್ರನ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದ್ದಾರೆ. ಆಗಲೇ ಹೇಳಿದಂತೆ ಬಾಗವಾನ್ ಮೂಲತಃ ಖಾನಾಪುರದವರು. ಖಾನಾಪುರವು ಜೂನಿಯರ್ ದೇಶಪಾಂಡೆ ಸ್ಪರ್ಧಿಸುತ್ತಿರುವ ಉತ್ತರ ಕನ್ನಡ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಅದೀಗ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದೆ. ಅಷ್ಟರಮಟ್ಟಿಗೆ ಸೀನಿಯರ್ ದೇಶಪಾಂಡೆ ತಮ್ಮ ಜೂನಿಯರ್ ಸ್ಪರ್ಧಾಕಣವನ್ನು ಸುಗಮಗೊಳಿಸಿದ್ದಾರೆ.

ಮತ್ತಷ್ಟು ಆಪರೇಶನ್ನುಗಳು ಜೆಡಿಎಸ್ಸಿಗೆ ಮುಳುವು
ಚುನಾವಣೆಗೆ ಇನ್ನು ಒಂದೇ ವಾರ ಮಧ್ಯಂತರವಿದೆ. ಈ ಮಧ್ಯೆ, ಚುನಾವಣೆ ಖರ್ಚಿಗೆಂದು ಜೆಡಿಎಸ್ ವರಿಷ್ಠರು ಪಾರ್ಟಿ ಫಂಡ್ ನೀಡುತ್ತಿಲ್ಲವೆಂದು ಕೆಲ ಕ್ಷೇತ್ರಗಳ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯುವ ಬೆದರಿಕೆಯೊಡ್ಡಿದ್ದಾರೆ. ಇದನ್ನೇ ತಮ್ಮ ಬಂಡವಾಳವಾಗಿಸಿಕೊಂಡು ಜೆಡಿಎಸ್ಸಿನ ಇನ್ನಷ್ಟು ಅಭ್ಯರ್ಥಿಳನ್ನು ವಿರೋಧ ಪಕ್ಷಗಳು ತಮ್ಮ ಪಾಳಯಕ್ಕೆ ಸೆಳೆದುಕೊಳ್ಳುವ ಅಪಾಯವಿದೆ ಎಂದು ತಿಳಿದುಬಂದಿದೆ.












Click it and Unblock the Notifications