ಬೈಲಹೊಂಗಲದಲ್ಲಿ ವಿದ್ಯುತ್ ಸ್ಪರ್ಶಿಸಿ ಜ್ಯೂನಿಯರ್ ಲೈನ್ ಮನ್ ಸಾವು
ಬೆಳಗಾವಿ, ಜುಲೈ 28: ಹೆಸ್ಕಾಂ ಇಲಾಖೆ ನಿರ್ಲಕ್ಷ್ಯದಿಂದ ಜ್ಯೂನಿಯರ್ ಲೈನ್ ಮನ್ ಸಾವು ಸಂಭವಿಸಿದೆ ಎಂದು ಆರೋಪ ಮಾಡಲಾಗಿದೆ. ಟಿ.ಸಿ. ಹತ್ತಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಲೈನ್ ಮನ್ ಸಾವು ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗುಡದೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಬೈಲಹೊಂಗಲ ತಾಲೂಕಿನ ಕೆಂಗಾನೂರು ಗ್ರಾಮದ ಇಪ್ಪತ್ನಾಲ್ಕು ವರ್ಷದ ಶರೀಫ್ ನದಾಫ್ ಮೃತ ಲೈನ್ ಮನ್. ಬೈಲಹೊಂಗಲ ತಾಲೂಕಿನ ಬೆಳವಡಿ ಶಾಖೆಯ ಹೆಸ್ಕಾಂನಲ್ಲಿ ಜ್ಯೂನಿಯರ್ ಲೈನ್ ಮನ್ ಆಗಿ ಕೆಲಸ ಮಾಡುತ್ತಿದ್ದರು ಶರೀಫ್. ರೊಚ್ಚಿಗೆದ್ದ ಗ್ರಾಮಸ್ಥರು ಹೆಸ್ಕಾಂ ಇಲಾಖೆಯ ಸೆಕ್ಷನ್ ಅಧಿಕಾರಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಕರ್ತವ್ಯನಿರತ ಲೈನ್ ಮನ್ ಸಾವಿಗೆ ಸೆಕ್ಷನ್ ಆಫೀಸರ್ ಕಾರಣ ಎಂದು ಆರೋಪಿಸಿ, ಹೆಸ್ಕಾಂ ಅಧಿಕಾರಿಗೆ ಥಳಿಸಿದ ಗ್ರಾಮಸ್ಥರು, ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಲೈನ್ ಮನ್ ಶರೀಫ್ ನದಾಫ್ ಸಾವಿನ ನಂತರ ಸ್ಥಳ ಪರಿಶೀಲನೆಗೆ ಬಂದ ಅಧಿಕಾರಿಗೆ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಒತ್ತಾಯ ಮಾಡಲಾಗಿದೆ.