ಬೆಳಗಾವಿ: ಅಂಜಲಿ ನಿಂಬಾಳ್ಕರ್ ವಿರುದ್ಧ ಗೆದ್ದು ಬೀಗಿದ ಅರವಿಂದ್ ಪಾಟೀಲ್
ಬೆಳಗಾವಿ, ನವೆಂಬರ್ 6: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ ನ ಮೂರು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಖಾನಾಪುರ ಕ್ಷೇತ್ರದಿಂದ ಮಾಜಿ ಶಾಸಕ ಅರವಿಂದ್ ಪಾಟೀಲ್ ಅವರು ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ಗೆಲುವಿನ ನಗೆ ಬೀರಿದರು.
ಖಾನಾಪುರ ಕ್ಷೇತ್ರದಿಂದ ಒಟ್ಟು 52 ಮತಗಳು ಚಲಾವಣೆಯಾಗಿದ್ದು, ಅರವಿಂದ್ ಪಾಟೀಲ್ 27 ಮತಗಳನ್ನು ಪಡೆದುಕೊಂಡರೆ, ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ 25 ಮತಗಳು ಲಭಿಸಿದವು. 2 ಮತಗಳ ಅಂತರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅರವಿಂದ್ ಪಾಟೀಲ್ ಗೆಲವು ಸಾಧಿಸಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ; 3 ವರ್ಷಗಳ ನಂತರ ಒಂದಾದ ನಾಯಕರು
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆಯಲ್ಲಿ ಗೆದ್ದ ಬಳಿಕ ಮಾತನಾಡಿದ ಮಾಜಿ ಶಾಸಕ ಅರವಿಂದ್ ಪಾಟೀಲ್, ಈ ಗೆಲುವಿಗೆ ಸಹಕರಿಸಿದ ಪಿಕೆಪಿಎಸ್ ಸದಸ್ಯರು ಮತ್ತು ಬಿಜೆಪಿ ಜಿಲ್ಲಾ ನಾಯಕರಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.
ಮತ ಹಾಕದವರ ಮೇಲೆ ನಾನು ದ್ವೇಷ ಮಾಡಲ್ಲ
ಕಳೆದ ಹದಿನೈದು ವರ್ಷದಿಂದ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಕೆಲಸ ಮಾಡಿದ್ದಕ್ಕೆ ಇಂದು ನನಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ನಮ್ಮ ರೈತರಿಗೆ ಸಹಾಯ, ಸಹಕಾರ ಮಾಡುವ ಕೆಲಸ ಮಾಡುತ್ತೇನೆ. ನನಗೆ ಮತ ಹಾಕದವರ ಮೇಲೆ ನಾನು ದ್ವೇಷ ಮಾಡುವುದಿಲ್ಲ ಎಮದು ಬೆಳಗಾವಿಯ ಬಿ.ಕೆ ಮಾಡೆಲ್ ಸ್ಕೂಲ್ ಬಳಿ ಅರವಿಂದ್ ಪಾಟೀಲ್ ಹೇಳಿದರು.
ಶಾಸಕಿ ಅಂಜಲಿ ನಿಂಬಾಳ್ಕರ್ ಸೋಲು
ಎರಡು ಮತಗಳ ಅಂತರದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸೋತಿರುವ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು, ಕಾರಿನಿಂದ ಕೆಳಗಿಳಿದು ಕಾರು ಅಡ್ಡಗಟ್ಟಿದ ಬೆಂಬಲಿಗರಿಗೆ ಎರಡು ನಿಮಿಷ ಕಾರಿನಲ್ಲಿ ಕುಳಿತು, ನಂತರ ಕಾರಿನಿಂದ ಕೆಳಗಿಳಿದು ಪಾಟೀಲ್ ಬೆಂಬಲಿಗರಿಗೆ ಅಭಿನಂದನೆ ಸಲ್ಲಿಸಿದರು.
ನಾನು ನಂಬಿದವರು ವೋಟ್ ಮಾಡಿದ್ದಾರೆ
ನಂತರ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್, ಎಲ್ಲರ ಆಶೀರ್ವಾದಿಂದ ಮುಂದೆ ಕೆಲಸ ಮಾಡುತ್ತೇನೆ. ನನಗೆ 25 ಮತ್ತು ವಿರೋಧ ಪಕ್ಷಕ್ಕೆ 27, ಕೇವಲ ಎರಡು ಮತಗಳಿಂದ ಸೋತಿದ್ದೇನೆ. ಕ್ರಾಸ್ ವೋಟಿಂಗ್ ಆಗಿಲ್ಲ, ನಾನು ನಂಬಿದವರು ವೋಟ್ ಮಾಡಿದ್ದಾರೆ. ನನಗೆ ಯಾವುದೇ ರೀತಿ ಹಿನ್ನಡೆಯಾಗಿಲ್ಲ, ಹೆಣ್ಣು ಮಗಳಾಗಿ ನಾನು ಇಷ್ಟು ಹೋರಾಟ ಮಾಡಿದ್ದು ಹೆಮ್ಮೆ ಅನಿಸುತ್ತಿದೆ ಎಂದರು.
ಅವರೆಲ್ಲಾ ಒಗ್ಗಟ್ಟಾಗಿ ಪ್ಲಾನಿಂಗ್ ಮಾಡಿಸಿದ್ದಕ್ಕೆ ಸಕ್ಸಸ್ ಸಿಕ್ಕಿದೆ. ಯಾಕೆ ಅವರಿಗೆ ಇಷ್ಟು ಭಯ ಇತ್ತು ಗೊತ್ತಿಲ್ಲ ಎಂದು ಬೆಳಗಾವಿಯ ಬಿ.ಕೆ ಮಾಡೆಲ್ ಸ್ಕೂಲ್ ಬಳಿ ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದರು.
ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವಶಂಕರಪ್ಪ ಢವಣ ಗೆಲುವು
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ರಾಮದುರ್ಗ ತಾಲೂಕಿನಿಂದ ನಿರ್ದೇಶರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವಶಂಕರಪ್ಪ ಢವಣ ಗೆಲುವು ಪಡೆದರು. ಪ್ರತಿಸ್ಪರ್ಧಿ ಭೀಮಪ್ಪ ಬೆಳವಣಕಿ ವಿರುದ್ಧ ಮೂರು ಮತಗಳ ಅಂತರದಿಂದ ಗೆಲವು ಸಾಧಿಸಿದರು. ಒಟ್ಟು 29 ಮತಗಳು ಚಲಾವಣೆ ಆಗಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವಶಂಕರಪ್ಪ ಢವಣ 16, ಭೀಮಪ್ಪ ಬೆಳವಣಕಿ 13 ಮತ ಪಡೆದರು.
ಇನ್ನು ನೇಕಾರ ಸಹಕಾರಿ ಸಂಘ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಾಲಾಯಿತು. ಕೃಷ್ಣಾ ಅನಗೋಳಕರ 55 ಮತಗಳನ್ನು ಪಡೆಯುವ ಮೂಲಕ 17 ಮತಗಳ ಅಂತರದಿಂದ ಗೆಲವು ಪಡೆದರು. ಪ್ರತಿಸ್ಪರ್ಧಿ ಗಜಾನನ ಕೊಳ್ವಿ 38 ಮತಗಳನ್ನು ಪಡೆದರು.