ಬೆಳಗಾವಿಯಲ್ಲಿ ಪ್ರವಾಹದ ಆತಂಕ; ಸಚಿವ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿ, ಆಗಸ್ಟ್ 08: ಮಹಾರಾಷ್ಟ್ರದಲ್ಲಿ ಬಿಡದೇ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿ ತಟದ ಪ್ರದೇಶಗಳಲ್ಲಿ ಪ್ರವಾಹ ಸಂಭವಿಸುತ್ತಿದೆ. ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಭೀತಿ ಆವರಿಸಿದೆ.
ನದಿ ಪ್ರವಾಹದಿಂದಾಗಿ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಸುಗಂಧಾದೇವಿ ದೇವಸ್ಥಾನ ಜಲದಿಗ್ಬಂಧನವಾಗಿದೆ. ಇಲ್ಲಿನ ಹೊಲ ಗದ್ದೆಗಳಿಗೂ, ಮನೆಗಳಿಗೂ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಕೆಲವೆಡೆ ಪ್ರವಾಹದ ನೀರಿನಲ್ಲಿ ಬೆಳೆಗಳೆಲ್ಲವೂ ಕೊಚ್ಚಿ ಹೋಗುತ್ತಿದ್ದು, ರೈತರು ಆತಂಕದಲ್ಲಿದ್ದಾರೆ. ಕಳೆದ ವರ್ಷವೂ ಇದೇ ರೀತಿ ಪ್ರವಾಹದಿಂದಾಗಿ ಮನೆ ಮಠ ಕಳೆದುಕೊಂಡಿದ್ದ ಜನರಿಗೆ ಮತ್ತೆ ಅದೇ ಆತಂಕ ಎದುರಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಿಪ್ಪಾಣಿಯಲ್ಲಿ ನದಿಗಳಿಂದ ಪ್ರವಾಹ ಭೀತಿ ಎದುರಾಗಿದ್ದು, ಪ್ರವಾಹದಿಂದ ಬಾಧಿತವಾಗಿರುವ ಸ್ಥಳಗಳಿಗೆ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದರು. ಚಿಕ್ಕೋಡಿ ತಾಲೂಕಿನ ಯಡೂರು, ಅಂಕಲಿ, ಮಾಂಜರಿ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಾರಕಿಹೊಳಿ, ಕಳೆದ ಬಾರಿಗಿಂತ ಈ ಬಾರಿ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೋಯ್ನಾ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿಲ್ಲ. ಇದರಿಂದ ನದಿ ತೀರದ ಜನರು ಹೆದರುವ ಅವಶ್ಯಕತೆಯಿಲ್ಲ. ಪ್ರವಾಹ ನಿಯಂತ್ರಣಕ್ಕೆ ಸರ್ಕಾರ ಬದ್ದವಾಗಿದ್ದು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಸಹ ಪ್ರವಾಹ ನಿಯಂತ್ರಣದ ವಿಷಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.












Click it and Unblock the Notifications