ಗಣೇಶೋತ್ಸವ ಬಳಿಕ ರಾಯಣ್ಣ ಪುತ್ಥಳಿ ವಿವಾದ ಇತ್ಯರ್ಥ; ಸಚಿವ ಜಾರಕಿಹೊಳಿ ಭರವಸೆ
ಬೆಳಗಾವಿ, ಆಗಸ್ಟ್ 23: ಬೆಳಗಾವಿ ನಗರ ಹೊರವಲಯದ ಪೀರನವಾಡಿಯ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆ ಹಾಗೂ ತೆರವು ವಿವಾದವನ್ನು ಗಣೇಶೋತ್ಸವ ಬಳಿಕ ಇತ್ಯರ್ಥಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.
ಪುತ್ಥಳಿ ವಿವಾದ ಸಂಬಂಧ ಬೆಳಗಾವಿ ಜಿಲ್ಲೆಯ ಗೋಕಾಕಿನಲ್ಲಿರುವ ಸಚಿವರ ನಿವಾಸಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ನೇತೃತ್ವದ ಹಾಲುಮತ ಸಮಾಜದ ಮುಖಂಡರ ನಿಯೋಗಕ್ಕೆ ವಿವಾದ ಬಗೆಹರಿಸುವುದಾಗಿ ಸಚಿವ ಜಾರಕಿಹೊಳಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ನೇತೃತ್ವದ ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಗಣೇಶ ಚತುರ್ಥಿ ಮುಗಿದ ಬಳಿಕ ಸ್ಥಳೀಯರ ಜೊತೆಗೆ ಸಭೆ ನಡೆಸಲಾಗುವುದು. ಸಭೆ ನಂತರವೇ ಕಾನೂನಾತ್ಮಕವಾಗಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಿಸಲು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಬೆಳಗಾವಿ ನಗರ ಹೊರವಲಯದ ಪೀರನವಾಡಿ ವೃತ್ತದಲ್ಲಿ ಸ್ಥಳೀಯರು ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆ ಮಾಡಿದ್ದರು. ಅನುಮತಿ ಇಲ್ಲದೇ ಪುತ್ಥಳಿ ನಿರ್ಮಿಸಿದ ಹಿನ್ನೆಲೆಯಲ್ಲಿ ನಗರ ಪೊಲೀಸರು ಪುತ್ಥಳಿ ತೆರವುಗೊಳಿಸಿದ್ದರು. ಪೊಲೀಸರ ಕ್ರಮ ಖಂಡಿಸಿ ರಾಜ್ಯದ ವಿವಿದೆಡೆ ಪ್ರತಿಭಟನೆ ನಡೆದಿದ್ದವು.












Click it and Unblock the Notifications