ಗೋಕಾಕ: ಅಣ್ತಮ್ಮ ನಡುವಿನ ಕಾದಾಟದಲ್ಲಿ ಮೂರನೆಯವನೇ 'ಸಾಹುಕಾರ'?
"ನನ್ನ ಸರಕಾರ ಅಧಿಕಾರಕ್ಕೆ ಬಂದ, ಹದಿನೈದೇ ದಿನಗಳಲ್ಲಿ, ಸರಕಾರಕ್ಕೆ ಕಿರಿಕಿರಿ ಮಾಡಲು ಆರಂಭಿಸಿದರು. ಒಂದು ದಿನವೂ ನೆಮ್ಮದಿಯಿಂದ ನನಗೆ ಕೆಲಸ ಮಾಡಲು ಬಿಟ್ಟಿಲ್ಲ. ಒಂದೇ ಒಂದು ಸಚಿವ ಸಂಪುಟ ಸಭೆಗೆ ಬರಲಿಲ್ಲ" ಇದು, ರಮೇಶ್ ಜಾರಕಿಹೊಳಿ ವಿರುದ್ದ ಕುಮಾರಸ್ವಾಮಿ ಆಡಿದ್ದ ಬೇಸರದ ಮಾತು.
ಕುಮಾರಸ್ವಾಮಿ ಸರಕಾರದ ಪತನಕ್ಕೆ ಹಲವು ಬಾರಿ ಮಹೂರ್ತ ಫಿಕ್ಸ್ ಮಾಡಿದವರು ರಮೇಶ್ ಜಾರಕಿಹೊಳಿ. ಕೊನೆಗೂ ಇಟ್ಟ ಮಹೂರ್ತಕ್ಕೆ ಸರಕಾರ ಬೀಳಿಸುವಲ್ಲಿ ರಮೇಶ್ ಜಾರಕಿಹೊಳಿ & ಟೀಂ ಯಶಸ್ವಿಯಾಗಿತ್ತು.
ಈ ಎಲ್ಲಾ ಪೀಠಿಕೆ ಏನಕ್ಕೆಂದರೆ, ಈ ವಿದ್ಯಮಾನಗಳು ಸಹೋದರರಾದ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ನಡುವೆ ಇನ್ನಷ್ಟು ಮನಸ್ತಾಪಕ್ಕೆ ಕಾರಣವಾಯಿತು. ಈ ಜಿದ್ದಿನಲ್ಲೇ, ಹೈಕಮಾಂಡ್ ನಿಂದ ಸ್ಪೆಷಲ್ ಅನುಮತಿಯನ್ನು ಪಡೆದು, ತನ್ನ ಇನ್ನೋರ್ವ ಸಹೋದರ ಲಖನ್ ಜಾರಕಿಹೊಳಿಯನ್ನು, ರಮೇಶ್ ವಿರುದ್ದ ಗೋಕಾಕ್ ಕ್ಷೇತ್ರದಿಂದ ಸತೀಶ್ ಕಣಕ್ಕಿಳಿಸಿದರು.
ಮೇಲ್ನೋಟಕ್ಕೆ ಇದು ಲಖನ್ ವರ್ಸಸ್ ರಮೇಶ್ ಮಾತ್ರ, ಆಸಲಿಗೆ, ಇದು ಬೆಳಗಾವಿ ಸಾಹುಕಾರ ವರ್ಸಸ್ ಸತೀಶ್ ಜೊರಕಿಹೊಳಿ ನಡುವೆ. ಆದರೆ, ದಿನದಿಂದ ದಿನಕ್ಕೆ ಬದಲಾಗುತ್ತಿರುವ ಕ್ಷೇತ್ರದ ಚಿತ್ರಣ, ಇಬ್ಬರ ನಡುವಿನ ಜಿದ್ದಾಜಿದ್ದಿಯಲ್ಲಿ ಮೂರನೆಯವರು ಲಾಭ ಪಡೆಯುವ ಸಾಧ್ಯತೆಯೂ ಇದೆ.

ಯಡಿಯೂರಪ್ಪ ಭರವಸೆ
ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರಿಂದ, ರಮೇಶ್ ಜಾರಕಿಹೊಳಿಗೆ ಬಿಫಾರಂ ನೀಡದೇ ಬೇರೆ ವಿಧಿಯಿರಲಿಲ್ಲ. ಇದು, ಕ್ಷೇತ್ರದ ಬಿಜೆಪಿ ಮುಖಂಡ ಅಶೋಕ್ ಪೂಜಾರಿಯವರನ್ನು ಕೆರಳಿಸಿತ್ತು. ಯಾಕೆಂದರೆ, ಪ್ರತೀ ಚುನಾವಣೆಯಲ್ಲಿ ತಮ್ಮ ಮತಬ್ಯಾಂಕ್ ಅನ್ನು ಅಶೋಕ್ ಗಣನೀಯವಾಗಿ ಹೆಚ್ಚಿಸಿಕೊಂಡಿದ್ದರು.

2008ರಿಂದ ಸ್ಪರ್ಧಿಸುತ್ತಿರುವ ಅಶೋಕ್ ಪೂಜಾರಿ
2008ರಿಂದ ಸ್ಪರ್ಧಿಸುತ್ತಿರುವ ಅಶೋಕ್ ಪೂಜಾರಿ, ಈ ಉಪಚುನಾವಣೆಯಲ್ಲಿ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸುತ್ತಿದ್ದಾರೆ. 2008-37,229: 2013-51,170: 2018-75,969 ಇದು ಕಳೆದ ಮೂರು ಚುನಾವಣೆಯಲ್ಲಿ ಪೂಜಾರಿ ಪಡೆದ ಮತ. 1957ರಲ್ಲಿ ರಾಜ್ಯಗಳ ಪುನರ್ ವಿಂಗಡಣೆಯ ನಂತರ, ಬಿಜೆಪಿಗೆ ಈ ಕ್ಷೇತ್ರದಲ್ಲಿ ಗೆಲುವು ಮರೀಚಿಕೆಯಾಗಿಯೇ ಉಳಿದಿದೆ. (ಚಿತ್ರದಲ್ಲಿ: ಅಶೋಕ್ ಪೂಜಾರಿ)

ರಮೇಶ್ ಜಾರಕಿಹೊಳಿ ಬೆನ್ನಿಗೆ ಸಹೋದರ ಬಾಲಚಂದ್ರ
ರಮೇಶ್ ಜಾರಕಿಹೊಳಿ ಬೆನ್ನಿಗೆ ಸಹೋದರ ಬಾಲಚಂದ್ರ, ಲಖನ್ ಬೆನ್ನಿಗೆ ಸತೀಶ್ ಜಾರಕಿಹೊಳಿ ನಿಂತಿದ್ದಾರೆ. ಚುನಾವಣೆ ಘೋಷಣೆಯಾದ ನಂತರವಂತೂ ರಮೇಶ್ ಮತ್ತು ಸತೀಶ್ ಜಾರಕಿಹೊಳಿ ನಡುವಿನ ಮಾತಿನ ಸಮರ, ವೈಯಕ್ತಿಕ ಮಟ್ಟಕ್ಕೆ ಹೋಗುತ್ತಿದೆ. ಇವೆಲ್ಲವೂ, ಇಬ್ಬರು ಬಿಟ್ಟು ಮೂರನೆಯವರಾದ ಅಶೋಕ್ ಪೂಜಾರಿಗೆ ಅಡ್ವಾಂಟೇಜ್ ಆಗುವ ಸಾಧ್ಯತೆಯಿದೆ ಎನ್ನುವುದು ಸದ್ಯ ಅಲ್ಲಿ ಕೇಳಿಬರುತ್ತಿರುವ ಮಾತು.

ಗೋಕಾಕ ರಾಜಕೀಯ ಚಿತ್ರಣ
ಕೇಂದ್ರ ಸಚಿವ ಸುರೇಶ್ ಅಂಗಡಿ, ಮಹಾಂತೇಶ್ ಕವಟಗಿಮಠ ಮತ್ತು ಉಮೇಶ್ ಕತ್ತಿ, ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ನಡೆಸಿದ ಪ್ರಯತ್ನವೂ ಫಲಕೊಡಲಿಲ್ಲ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಗುರುವಾರವೂ (ನ 21) ಹಲವು ಸುತ್ತಿನ ಮಾತುಕತೆ ವರ್ಕೌಟ್ ಆಗಲಿಲ್ಲ. ಕ್ಷೇತ್ರದ ಸದ್ಯದ ಬದಲಾಗುತ್ತಿರುವ ರಾಜಕೀಯ ಚಿತ್ರಣವನ್ನು ಅರಿತೋ ಏನೋ, ನಾಮಪತ್ರ ಹಿಂಪಡೆಯಲು, ಅಶೋಕ್ ಪೂಜಾರಿ ಕೊನೆಗೂ ಒಪ್ಪಲೇ ಇಲ್ಲ.

ರಮೇಶ್ ವರ್ಸಸ್ ಲಖನ್
ಜಾರಕಿಹೊಳಿ ಕುಟುಂಬದ ಇಬ್ಬರು ಸದಸ್ಯರು ಬೇರೆ ಬೇರೆ ಪಕ್ಷದಿಂದ ಕಣಕ್ಕಿಳಿಯುತ್ತಿರುವುದರಿಂದ, ಮತವಿಭಜನೆಯ ಸಾಧ್ಯತೆಯಿದೆ ಎನ್ನುವುದು ಕ್ಷೇತ್ರದ ಸದ್ಯದ ಮೇಲ್ನೋಟ. ಆದರೆ, ಮತದಾನದ ಮುನ್ನಾದಿನ ನಡೆಯುವ 'ಬೇರೆ ರಾಜಕೀಯ' ಲಖನ್ ಮೂರನೇ ಸ್ಥಾನಕ್ಕೆ ಹೋಗುವ ಸಾಧ್ಯತೆಯಿಲ್ಲದಿಲ್ಲ. ಯಾಕೆಂದರೆ, ಮತದಾನದ ಮುನ್ನಾದಿನ ಬೆಳಗಾವಿಯ ಅಸೆಂಬ್ಲಿ ಕ್ಷೇತ್ರಗಳಲ್ಲಿ ನಡೆಯುವ ಓಲೈಕೆಗಳೇ ಬೇರೆ.












Click it and Unblock the Notifications