ಬಾಂಬ್ ಬಿದ್ದರೂ ಬೆದರದ ಜನ, ಜೀವನ ಸರ್ವೇಸಾಮಾನ್ಯ
ಬೆಂಗಳೂರು, ಡಿ. 29: ನಗರದ ಚರ್ಚ್ ಸ್ಟ್ರೀಟ್ನಲ್ಲಿ ಭಾನುವಾರ ರಾತ್ರಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಿಗೆ ಸೋಮವಾರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಜನ ನಿಬಿಡ ಪ್ರದೇಶಗಳಲ್ಲಿ ಪೊಲೀಸರು ಕೈಯಲ್ಲಿ ವಾಕಿಟಾಕಿ ಹಿಡಿದು ಸಂಚರಿಸುತ್ತಿದ್ದಾರೆ.
ಬಸ್, ರೈಲು ನಿಲ್ದಾಣಗಳ ಒಳಗೆ, ಹೊರಗೆ ಬಾಂಬ್ ಸ್ಕ್ವಾಡ್ ಹಾಗೂ ಪೊಲೀಸ್ ಶ್ವಾನದಳ ಎಲ್ಲೆಡೆ ಪರಿಶೀಲಿಸುತ್ತಿವೆ. ನಿಲ್ದಾಣದೊಳಗೆ ಜನರು ಪ್ರವೇಶಿಸುವ ಸ್ಥಳಗಳಲ್ಲಿ ನಿತ್ಯದ ಪರೀಕ್ಷಾ ಯಂತ್ರದ ಜೊತೆಗೆ ಬಾಂಬ್ ಪತ್ತೆ ದಳ ಕೂಡ ಕರ್ತವ್ಯ ನಿರತವಾಗಿದೆ. ಅನುಮಾನ ಬಂದ ಜನರು ಹಾಗೂ ವಸ್ತುಗಳನ್ನು ತಡೆದು ಪರಿಶೀಲಿಸಲಾಗುತ್ತಿದೆ. [ಬಾಂಬ್ ಭೀತಿ ಹುಟ್ಟುಹಾಕಿದ್ದು ಅಂಜುಮನ್ ಸಂಸ್ಥೆ]
ಜನ ಹೆದರಿಲ್ಲ : ಬಾಂಬ್ ಸ್ಫೋಟದಿಂದ ಬೆಂಗಳೂರಿನ ಜನರು ಹೆದರಿದಂತೆ ಕಂಡುಬಂದಿಲ್ಲ. ಬಸ್, ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಆದರೆ, ನಿಲ್ದಾಣದ ಹೊರಗೆ ವಾಹನಗಳ ಸಂಚಾರ ಎಂದಿನಷ್ಟಿಲ್ಲ. ಪ್ರತಿ ಮೂಲೆಯಲ್ಲಿ ಪೊಲೀಸರು ವಾಕಿಟಾಕಿಯೊಂದಿಗೆ ಸಜ್ಜಾಗಿರುವುದು ಕಂತುಬಂತು. [ತಮಿಳುನಾಡಿಗೆ ತನಿಖಾ ತಂಡ-Live]
ಬಾಂಬ್ ಸ್ಫೋಟ ಕುರಿತು 'ಒನ್ಇಂಡಿಯಾ ಕನ್ನಡ' ಜೊತೆ ಮಾತನಾಡಿದ ಪ್ರಯಾಣಿಕ ರಾಜೇಶ್ ಜೈನ್, "ಇಂತಹ ಸ್ಫೋಟಗಳಿಗೆ ಹೆದರಿದರೆ ದೈನಂದಿನ ಜೀವನ ನಡೆಯಲ್ಲ" ಎಂದರು. ಇನ್ನೋರ್ವ ಪ್ರಯಾಣಿಕ ಸುಮನ್ "ಸ್ಫೋಟಕ್ಕೆ ಹೆದರಿ ಮನೆಯಲ್ಲಿ ಕುಳಿತರೆ ಭಯೋತ್ಪಾದಕರ ಉದ್ದೇಶ ಈಡೇರಿದಂತಾಗುತ್ತದೆ. ಆದ್ದರಿಂದ ಜನ ಹೆದರದೆ ಹೊರಗೆ ಬರಬೇಕು" ಎಂದು ಅಭಿಪ್ರಾಯಪಟ್ಟರು. ಪೊಲೀಸರು ಕೈಗೊಂಡಿರುವ ಬಿಗಿ ಬಂದೋಬಸ್ತ್ ಕುರಿತು ಕೂಡ ಪ್ರಯಾಣಿಕರು ತೃಪ್ತಿ ವ್ಯಕ್ತಪಡಿಸಿದ್ದಾರೆ.
ಚರ್ಚ್ ಸ್ಟ್ರೀಟ್ನಲ್ಲಿ ಬಾಂಬ್ ಸ್ಫೋಟಿಸುವ ಮೂಲಕ ಬೆಂಗಳೂರಿಗರ ಎದೆಯಲ್ಲಿ ನಡುಕ ಸೃಷ್ಟಿಸುವುದೇ ಭಯೋತ್ಪಾದಕರ ಹುನ್ನಾರವಾಗಿದ್ದರೆ, ಅವರ ಗುರಿ ತಲುಪಿಲ್ಲ. ಕ್ರಿಸ್ಮಸ್, ಹೊಸವರ್ಷದ ಸಂಭ್ರಮಾಚರಣೆಯ ತಯಾರಿಯಲ್ಲಿರುವ ಬೆಂಗಳೂರಿಗರು ಈಗ ಸ್ಫೋಟಿಸಿರುವ ಬಾಂಬ್ನಿಂದ ಕೊಂಚವೂ ವಿಚಲಿತವಾಗಿಲ್ಲ. ಹೊಸ ವರ್ಷಾಚರಣೆಗೆ ತಯಾರಿಯನ್ನೂ ನಿಲ್ಲಿಸಿಲ್ಲ. ಒಂದು ವೇಳೆ ಸಾಮೂಹಿಕ ಸಂಭ್ರಮಾಚರಣೆಗೆ ಪೊಲೀಸ್ ನಿಷೇಧ ಹೇರಿದರೆ, ಅವರವರೇ ಒಗ್ಗೂಡಿ ಆಚರಿಸಲು ಜನ ಈಗಾಗಲೇ ಮಾನಸಿಕವಾಗಿಯೂ ಸಜ್ಜಾಗಿದ್ದಾರೆ.