ಅನ್ನಿಸುತಿದೆ ಯಾಕೋ ಇಂದು, ಶಾಲೆ ಅಂದ್ರೆ ಗುಮ್ಮ ಎಂದು..!
ರಜಾದಿನದ ಆಟ-ಓಟ, ಅಜ್ಜಿಮನೆ, ಬೇಸಿಗೆ ಶಿಬಿರಗಳ ಲಹರಿಯಿಂದ ಮಕ್ಕಳನ್ನು ಹೊರತಂದು ಶಾಲೆಯೂ ಒಂದು ಆಪ್ಯಾಯಮಾನ ಜಾಗ ಎನ್ನಿಸುವಂತೆ ಅವರ ಮನಸ್ಸನ್ನು ಬದಲಿಸುವುದು ಶಿಕ್ಷಕರಿಗೂ, ಪಾಲಕರಿಗೂ ಒಂದು ಸವಾಲೇ ಸರಿ!
ಬೆಂಗಳೂರು, ಮೇ 29: ಎರಡು ತಿಂಗಳು ಕುಣಿದು, ಕುಪ್ಪಳಿಸಿ ಬೇಸಿಗೆ ರಜೆ ಕಳೆದಿದ್ದ ಮಕ್ಕಳ ಮುಖ ಮೇ ಅಂತ್ಯದ ಹೊತ್ತಿಗೇ ಯಾವುದೋ ಅರಿವಿಲ್ಲದ ತಲೆಬಿಸಿಯ ಲೇಪನ ಮಾಡಿಕೊಂಡಿರುತ್ತದೆ. ಇನ್ನು ಪ್ರತಿದಿನ ಬೆಳಗ್ಗೆ ಏಳು, ರೆಡಿ ಆಗು, ಮಣಭಾರದ ಚೀಲ ಹೊತ್ತು ಸ್ಕೂಲಿಗೆ ಹೋಗು, ಮತ್ತೆ ಸಂಜೆ ವಾಪಾಸ್ ಬಾ, ಹೋಂ ವರ್ಕ್ ಮಾಡು, ಮಲಗು... ಮತ್ತೆ ಬೆಳಗ್ಗೆ ಏಳು... ಅದೇ ಪುನರಾವರ್ತಿತ ದಿನಚರಿ!
ಈಗಾಗಲೇ ಶಾಲೆಗಳು ಪುನರಾರಂಭವಾಗಿವೆ. ಯೂನಿಫಾರ್ಮ್ ತೊಟ್ಟು, ಟಿಫಿನ್ ಬಾಕ್ಸ್ ಹಿಡಿದ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿರುವ ತಾಯಿಯರು, ತಂದೆಯರು, ಅಜ್ಜ-ಅಜ್ಜಿಯರು ರಸ್ತೆ ರಸ್ತೆಯಲ್ಲೂ ಕಾಣಸಿಗುತ್ತಾರೆ. ಯಾವ ಮಗುವಿನ ಮುಖದಲ್ಲೂ ಮಂದಹಾಸವಿಲ್ಲ! ಯಾವುದೋ ಅನಿವಾರ್ಯ ಕೆಲಸವನ್ನು ಇಷ್ಟವಿಲ್ಲದಿದ್ದರೂ ಮಾಡುತ್ತಿರುವಂತಿದೆ ಮಗುವಿನ ಮುಖಭಾವ. ಆ ಮಗುವಿಗೆ ಶಾಲೆ ಅಂದ್ರೆ ಗುಮ್ಮ ಅನ್ನಿಸಿರಲಿಕ್ಕೆ ಸಾಕು![ಮಗಳು ಬರೆದ ಲೇಖನ ಓದಿ ಅಪ್ಪನ ಕಣ್ಣಲ್ಲಿ ಅಶ್ರುಧಾರೆ!]
ಹೌದು, ಈ ಶಾಲೆ ಎಂಬುದು ಮಗುವಿನ ಮನಸ್ಸಿನಲ್ಲಿ ಆಹ್ಲಾದಕರ ಭಾವವನ್ನು ಬಿತ್ತುವುದೇ ಇಲ್ಲವಲ್ಲ, ಯಾಕೆ? ರಜಾದಿನದ ಆಟ-ಓಟ, ಅಜ್ಜಿಮನೆ, ಬೇಸಿಗೆ ಶಿಬಿರಗಳ ಲಹರಿಯಿಂದ ಮಕ್ಕಳನ್ನು ಹೊರತಂದು ಶಾಲೆಯೂ ಒಂದು ಆಪ್ಯಾಯಮಾನ ಜಾಗ ಎನ್ನಿಸುವಂತೆ ಅವರ ಮನಸ್ಸನ್ನು ಬದಲಿಸುವುದು ಶಿಕ್ಷಕರಿಗೂ, ಪಾಲಕರಿಗೂ ಒಂದು ಸವಾಲೇ ಸರಿ!
ಮಕ್ಕಳ ಪುಟ್ಟ ಮನಸ್ಸಿನ ಮೇಲೆ ಬೀಳುವ ಅಗತ್ಯಕ್ಕಿಂತ ಹೆಚ್ಚಿನ ಒತ್ತಡ ಅವರಲ್ಲಿನ ಕ್ರಿಯಾಶೀಲತೆಯನ್ನೇ ಕಸಿಯುತ್ತಿದೆ ಎಂಬ ಕೂಗು ಹಲವೆಡೆಯಿಂದ ಕೇಳಿಬರುತ್ತಿದೆ. ಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ ಯಂತ್ರವನ್ನಾಗಿ ರೂಪಿಸಲಾಗುತ್ತಿದೆಯೇ ಹೊರತು, ಮಾನವರನ್ನಾಗಿಸುವ ಪ್ರಯತ್ನವನ್ನು ಇಂದಿನ ಶಿಕ್ಷಣ ಮಾಡುತ್ತಿಲ್ಲ ಎಂದೂ ಹಲವು ಹಿರಿಯರು ಅಭಿಪ್ರಾಯ ಪಡುತ್ತಾರೆ.[ಬೇಸಿಗೆ ರಜೆ ಮುಗಿದಿಲ್ಲ, ಆದರೂ ಬೆಂಗಳೂರಿನಲ್ಲಿ ಶಾಲೆ ಶುರುವಾಗಿದೆ!]
ಇಂಥ ಸಮಯದಲ್ಲಿ ಮಕ್ಕಳ ಬಾಲ್ಯವನ್ನು ಕಸಿಯದೆ, ಅವರ ಮುಗ್ಧತೆಯನ್ನು ಮರೆಯಾಗಿಸದೆ, ಶಾಲೆ ಎಂದರೆ ಭಯದ ಬದಲಾಗಿ ಗೌರವ, ಬೇಸರದ ಬದಲಾಗಿ ಉಲ್ಲಾಸವನ್ನು ಸೃಷ್ಟಿಸುವಂತೆ ಮಾಡುವ ಹೊಣೆ, ಪಾಲಕರು, ಪೋಷಕರು ಮತ್ತು ಶಿಕ್ಷಕರ ಮೇಲಿದೆ.
ಮಕ್ಕಳ ಮನಸ್ಸು ರಿಲ್ಯಾಕ್ಸ್ ಆಗಲು ಬಿಡಿ
ಶಾಲೆಯಿಂದ ಬಂದ ಮಗುವಿನ ಮನಸ್ಸು ಸ್ವಲ್ಪ ಸಮಯ ರಿಲ್ಯಾಕ್ಸ್ ಆಗುವುದಕ್ಕೆ ಬಿಡಬೇಕು. ಬರುತ್ತಿದ್ದಂತೆಯೇ ಸ್ಕೂಲಲ್ಲಿ ಏನೆಲ್ಲ ಕಲ್ಸಿದ್ರು? ಹೋಂ ವರ್ಕ್ ಏನಿದೆ? ಹೋಂ ವರ್ಕ್ ಮುಗ್ಸಿ ಇವತ್ತಿನ ಪಾಠ ರಿವಿಶನ್ ಮಾಡು.... ಎಂದು ಆ ಪುಟ್ಟ ತಲೆಯ ಮೇಲೆ ಅನಗತ್ಯ ಭಾರ ಹೇರುವುದು ತಪ್ಪು. ಅವರಿಗೆ ಆಸಕ್ತಿ ಇರುವ ಕ್ರಿಯಾಶೀಲ ಕೆಲಸದಲ್ಲಿ ಕೆಲ ಸಮಯವಾದರೂ ಕಳೆಯಲಿ. ಡ್ರಾಯಿಂಗ್ ಮಾಡಲಿ, ಆಟ ಆಡಲಿ, ಕಥೆ ಪುಸ್ತಕಗಳನ್ನು ಓದಲಿ, ಹಾಡಲಿ... ಮಕ್ಕಳ ಮನಸ್ಸಿನ ಒತ್ತಡ ಇದರಿಂದ ಎಷ್ಟೋ ಕಡಿಮೆಯಾಗುತ್ತದೆ.
ಗೌರವ ಕಳೆಯುವ ಆ ಮಾತು
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಅಂಕ ಗಳಿಸುವುದು ಮುಖ್ಯ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹಾಗಂತ ಪಕ್ಕದ ಮನೆಯ ಹುಡುಗನಿಗಿಂತ ಒಂದಂಕ ಜಾಸ್ತಿ ಬಂದಿಲ್ಲವೆಂದು ನಮ್ಮ ಮಕ್ಕಳಿಗೆ ಬೈಯುವುದು ಘೋರ ತಪ್ಪು. ಒಳ್ಳೆಯ ಅಂಕ ಗಳಿಸಿ, ರ್ಯಾಂಕ್ ಗಳಿಸು ಅನ್ನೋದಕ್ಕೂ, ಪಕ್ಕದ ಮನೆಯವನಿಗಿಂತ ಹೆಚ್ಚು ಅಂಕ ಗಳಿಸಿ ಎನ್ನುವವುದಕ್ಕೂ ವ್ಯತ್ಯಾಸವಿದೆ. ಮಕ್ಕಳಿಗೆ ತಂದೆ-ತಾಯಿಯ ಮೇಲಿನ ಗೌರವವನ್ನೇ ಕಡಿಮೆ ಮಾಡುವ ಶಕ್ತಿ ಆ ಮಾತಿಗಿದೆ!
ಶಿಕ್ಷಕರೆಂದ್ರೆ ಗೌರವ ಮೂಡುವುದು ಯಾವಾಗ?
ಶಿಕ್ಷಕರೆಂದರೆ ತಮ್ಮ ಭವಿಷ್ಯವನ್ನು ರೂಪಿಸುತ್ತಿರುವ ದೇವರು ಎಂಬ ಗೌರವ ಮಕ್ಕಳಲ್ಲಿ ಮೂಡುವಂತಿರಬೇಕು. ಆದರೆ ಪ್ರತಿದಿನ ಅನಗತ್ಯ ಒತ್ತಡ ಹೇರಿ, ಬೆಟ್ಟದಷ್ಟು ಹೋಂವರ್ಕ್ ನೀಡಿ, ಮಾಡಿಲ್ಲವೆಂದರೆ ಹತ್ತು ಜನರೆದುರು ಮರ್ಯಾದೆ ಕಳೆಯುವವರು ಎಂಬ ಋಣಾತ್ಮಕ ಭಾವನೆ ಮಕ್ಕಳಲ್ಲಿ ಹುಟ್ಟಿಬಿಟ್ಟರೆ, ಶಿಕ್ಷಕರೆಂದರೆ ಗೌರವದ ಬದಲಾಗಿ ಭಯ ಮೂಡುತ್ತದೆ.
ಪಾಠ ಅರ್ಥವಾಗುವಂತಿರಲಿ
ನಾವು ಕಲಿಸುವ ಪಾಠ ಹತ್ತು ಬುದ್ಧಿವಂತ ಮಕ್ಕಳಿಗೆ ಒಮ್ಮೆಲೇ ಅರ್ಥವಾಗಬಹುದು. ಆದರೆ ನಾವು ಪಾಠ ಮಾಡುತ್ತಿರುವುದು ಹತ್ತು ಬುದ್ಧಿವಂತರಿಗಷ್ಟೇ ಅಲ್ಲ, ಇನ್ನೂ ನಲವತ್ತು ಸಾಧಾರಣ ವಿದ್ಯಾರ್ಥಿಗಳೂ ಕ್ಲಾಸಿನಲ್ಲಿದ್ದಾರೆ ಎಂಬುದು ಶಿಕ್ಷಕರಿಗೂ ಅರ್ಥವಾಗಬೇಕು. ಆಗ ಅವರು ಮಾಡುವ ಪಾಠವೂ ಮಕ್ಕಳಿಗೆ ಅರ್ಥವಾಗುತ್ತದೆ. ಕಲಿಸುವ ಪಾಠ ಅರ್ಥವಾದರೆ, ಅದನ್ನು ರಸವತ್ತಾಗಿ ಹೇಳಿದರೆ ಪಾಠ ಯಾವ ವಿದ್ಯಾರ್ಥಿಗೂ ಬೇಸರಮೂಡಿಸಲಾರದು.
ದೇಹ ಕ್ಲಾಸಿನಲ್ಲಿ, ಮನಸ್ಸು ಮೈದಾನದಲ್ಲಿ!
ಸಿಲೆಬಸ್ ಮುಗಿಸುವುದು ಕಷ್ಟವೆಂದು ಶಾಲೆಯಲ್ಲಿ ಆಟದ ಸಮಯದಲ್ಲೂಪಾಠ ಮಾಡಿದರೆ, ಸಿಲೆಬಸ್ ಮುಗಿಯಬಹುದಾದರೂ ಮಕ್ಕಳಿಗೆ ಮಾತ್ರ ಶಿಕ್ಷಕರು ಹೇಳಿದ ಪಾಠ ಕಿಂಚಿತ್ತೂ ಅರ್ಥವಾಗಿರುವುದಿಲ್ಲ. ಯಾಕಂದ್ರೆ ಅವರ ಕಣ್ಣೆಲ್ಲ ಆಟದ ಮೈದಾನದಲ್ಲೇ ನೆಟ್ಟಿರುತ್ತದೆ! ದೇಹ ಕ್ಲಾಸಿನಲ್ಲಿದ್ದರೂ, ಮನಸ್ಸು ಮೈದಾನದಲ್ಲಿ ಆಟವಾಡುತ್ತಿರುತ್ತದೆ! ದೈಹಿಕ, ಮಾನಸಿಕ ಸ್ವಾಸ್ಥ್ಯಕ್ಕೆ ಆಟ ಅತ್ಯಗತ್ಯ ಎಂಬುದು ನೆನಪಿರಲಿ.
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡಿ
ಕೇವಲ ಪಠ್ಯವಷ್ಟೇ ಅಲ್ಲದೆ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾಗುವಂಥ ಕೆಲವಾದರೂ ಚಟುವಟಿಕೆಗಳು ಶಾಳೆಗಳಲ್ಲಿರಲಿ. ರಾಜಸ್ಥಾನ ಸರ್ಕಾರ ಪ್ರತಿಶನಿವಾರ ಶಾಲೆಗಳಿಗೆ ಅಜ್ಜಿಯರನ್ನು ಕರೆಸಿ ಕಥೆ ಹೇಳಿಸುವ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಮಕ್ಕಳಲ್ಲಿ ಕಾಲ್ಪನಿಕ ಶಕ್ತಿಯನ್ನು ಹೆಚ್ಚಿಸುವ ಪುರಾಣೇತಿಹಾಸದ, ಕಾಲ್ಪನಿಕ ಕತೆಗಳ ಕುರಿತು ಜ್ಞಾನ ಮೂಡಿಸುವ, ಜೊತೆ ಜೊತೆಯಲ್ಲೇ ಅವರಿಗೆ ಮನರಂಜನೆಯನ್ನೂ ನೀಡುವ ಇಂಥ ಯೋಜನೆಗಳು ನಿಜಕ್ಕೂ ಸ್ವಾಗತಾರ್ಹವಲ್ಲವೇ?
ಮನರಂಜನೆಯೂ ಇರಲಿ
ಕೇವಲ ಓದು, ಪಠ್ಯವನ್ನು ಮೀರಿ ಮಕ್ಕಳ ಮನಸ್ಸಿಗೆ ಮನರಂಜನೆ ದೊರಕುವಂಥ ಚಟುವಟಿಕೆಗಳು ಮನೆಯಲ್ಲೂ, ಶಾಲೆಯಲ್ಲೂ ಇರಲಿ.