ಅಂಧ ವಿಶ್ವಾಸಿ ಮೆಹದಿ ಮೇಲೆ ಪ್ರಕರಣಗಳ ತೂಗುಗತ್ತಿ
ಬೆಂಗಳೂರು, ಡಿ. 16: ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿರುವ ಐಎಸ್ಐಎಸ್ ಪರ ಟ್ವಿಟ್ಟರ್ @shammiwitness ನಿರ್ವಹಣೆ ಮಾಡುತ್ತಿದ್ದ ಶಂಕಿತ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣಗಳನ್ನು ಹುಡುಕಿ ಹುಡುಕಿ ದಾಖಲಿಸುತ್ತಿದ್ದಾರೆ.
ಈ ಮೂಲಕ "ನಾನು ಭಾರತದ ಕಾನೂನು ಉಲ್ಲಂಘಿಸಿಲ್ಲ. ಭಾರತದ ವಿರುದ್ಧ ಸಂಚು ರೂಪಿಸಿಲ್ಲ. ಆದ್ದರಿಂದ ನನಗೆ ಶಿಕ್ಷೆ ವಿಧಿಸುವುದು ಸಾಧ್ಯವಿಲ್ಲ" ಎಂಬ ಅಂಧ ವಿಶ್ವಾಸದಲ್ಲಿದ್ದ ಮೆಹದಿ ಬಿಸ್ವಾಸ್ನಿಗೆ ಬೆಂಗಳೂರು ಪೊಲೀಸರು ಶಾಕ್ ನೀಡುತ್ತಿದ್ದಾರೆ. ಇದೀಗ ಮೆಹದಿ ವಿರುದ್ಧ ಮಹಿಳೆಯರನ್ನು ಅವಮಾನಿಸಿದ ಪ್ರಕರಣ ದಾಖಲಿಸಲಾಗಿದೆ.
ಇದಕ್ಕೆ ಪೊಲೀಸರು ನೀಡಿರುವ ಕಾರಣ "ಆರೋಪಿ ಮೆಹದಿ ಬಿಸ್ವಾಸ್ ತನ್ನ ಟ್ವಿಟ್ಟರ್ನಲ್ಲಿ ಕುರ್ದಿಶ್ ಮಹಿಳೆಯೋರ್ವಳು ಯೋಧರಿಗಾಗಿ ವೇಶ್ಯೆಯಾಗಿ ಕೆಲಸ ಮಾಡುತ್ತಿದ್ದಾಳೆಂದು ಆಕೆಯ ಫೋಟೊ ಅಪ್ಲೋಡ್ ಮಾಡಿದ್ದಾನೆ. ಈ ಚಿತ್ರವು ಅಶ್ಲೀಲವಾಗಿದೆ" ಎಂಬುದು. ಭಾರತೀಯ ಸಂವಿಧಾನದ ಪರಿಚ್ಚೇದ 354ರ ಪ್ರಕಾರ ಈ ಅಪರಾಧಕ್ಕೆ ಎರಡು ವರ್ಷಗಳ ಶಿಕ್ಷೆ ವಿಧಿಸಬಹುದು. [ಜಾಣ ಮೆಹದಿ ಪೊಲೀಸರ ಕಣ್ಣು ತಪ್ಪಿಸಿದ್ದು ಹೇಗೆ]

ಕೋಮುವಾದ ಹರಡಿದ ಆರೋಪ : ಪರಿಚ್ಛೇದ 153(ಎ) ಅಡಿ ಕೋಮುವಾದ ಹರಡಿದ ಪ್ರಕರಣವನ್ನೂ ದಾಖಲಿಸಲಾಗಿದೆ. ಈ ಅಪರಾಧಕ್ಕೆ ಮೂರು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು. ಮೆಹದಿ ಮಾಡಿರುವ ಟ್ವೀಟ್ಗಳು ಕೋಮವಾದ ಕೆರಳಿಸುವಂತಹುದು. ಆದ್ದರಿಂದ ಈ ಆರೋಪ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. [ಮೆಹದಿ ಬಿಡುಗಡೆ ಮಾಡಿ; ಐಎಸ್ಐಎಸ್ ಎಚ್ಚರಿಕೆ]
ಮೆಹದಿಯನ್ನು ನ್ಯಾಯಾಲಯವು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಈ ಅವಧಿಯು ಗುರುವಾರ ಅಂತ್ಯಗೊಳ್ಳಲಿದೆ. ಆದ್ದರಿಂದ ಹೆಚ್ಚಿನ ತನಿಖೆ ನಡೆಸಲು ಇನ್ನಷ್ಟು ದಿನ ಕಾಲಾವಕಾಶ ಕೋರಲು ಪೊಲೀಸರು ನಿರ್ಧರಿಸಿದ್ದಾರೆ. [ಮೆಹದಿ ಬಂದನ: ಟಾಪ್ 10 ಬೆಳವಣಿಗೆ]
ತನ್ನನ್ನು ಹಿಡಿಯಲೇ ಸಾಧ್ಯವಿಲ್ಲ ಎಂದುಕೊಂಡಿದ್ದ ಮೆಹದಿ ಬಿಶ್ವಾಸ್ ಈಗಾಗಲೇ ಪೊಲೀಸರಿಗೆ ಸಿಕ್ಕಿಬಿದ್ದಿರುವ ಶಾಕ್ನಲ್ಲಿದ್ದಾನೆ. ಈಗ ಪೊಲೀಸರು ಆತನ ತಪ್ಪುಗಳನ್ನು ಹುಡುಕಿ ತೆಗೆದು ಪ್ರಕರಣ ದಾಖಲಿಸುತ್ತಿರುವ ಕಾರಣ ಮೆಹದಿ ಮತ್ತಷ್ಟು ಆತಂಕಕ್ಕೊಳಗಾಗಿದ್ದಾನೆ.












Click it and Unblock the Notifications