ಯೋಗ ಬಲ್ಲವನಿಗೆ ರೋಗವಿಲ್ಲ : ಸಿದ್ದರಾಮಯ್ಯ
ಬೆಂಗಳೂರು, ಜೂನ್ 21 : 'ಯೋಗ ಬಲ್ಲವನಿಗೆ ರೋಗವಿಲ್ಲ. ಎಲ್ಲರೂ ದಿನಕ್ಕೆ ಒಂದು ಗಂಟೆಯನ್ನು ಯೋಗಾಭ್ಯಾಸಕ್ಕಾಗಿ ಮೀಸಲಾಗಿಡೋಣ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಶ್ವಾಸ ಸಂಸ್ಥೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿರುವ 2ನೇ ವಿಶ್ವ ಯೋಗದಿನವನ್ನು ಮಂಗಳವಾರ ಬೆಳಗ್ಗೆ ಸಿದ್ದರಾಮಯ್ಯ ಉದ್ಘಾಟಿಸಿದರು. ['ಯೋಗ ಈಗ ಒಂದು ಅಂತರಾಷ್ಟ್ರೀಯ ಚಳವಳಿ']

ನಂತರ ಮಾತನಾಡಿದ ಅವರು, 'ಕಳೆದ ವರ್ಷದಿಂದ ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಣೆ ಮಾಡುತ್ತಿದ್ದೇವೆ. ವಿಶ್ವ ಯೋಗ ದಿನ ಆಚರಣೆ ಮಾಡುವಂತೆ ವಿಶ್ವಸಂಸ್ಥೆ ಕೈಗೊಂಡಿರುವ ನಿರ್ಣಯ ಉತ್ತಮವಾದದ್ದು' ಎಂದರು.
'ಯೋಗ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಋಷಿ ಮುನಿಗಳು ನಮ್ಮ ಸಮಾಜಕ್ಕೆ ಕೊಟ್ಟ ಕೊಡುಗೆ ಇದಾಗಿದೆ. ದಿನದ 24 ಗಂಟೆಯಲ್ಲಿ ಒಂದು ಗಂಟೆಯನ್ನು ಯೋಗಕ್ಕೆ ಮೀಸಲಾಗಿಡಿ. ಇದರಿಂದ ಲವಲವಿಕೆ, ಉತ್ಸಾಹ, ಉಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ' ಎಂದು ಮುಖ್ಯಮಂತ್ರಿಗಳು ಹೇಳಿದರು.
ಶ್ವಾಸಗುರು ಶ್ರೀವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಾವಿರಾರು ಮಂದಿ ಯೋಗ ಪ್ರದರ್ಶನ ನೀಡುತ್ತಿದ್ದು, ಬಾಲಿವುಡ್ ನಟಿ ಬಿಪಾಶಾ ಬಸು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ.

'ನಾನು ಯೋಗಾಭ್ಯಾಸ ಮಾಡುತ್ತಿದ್ದೇನೆ. ಪ್ರತಿದಿನ ಮಾಡಲಾಗುತ್ತಿಲ್ಲ. ಬೆಂಗಳೂರಿನಲ್ಲಿ ಇದ್ದಾಗ ತಪ್ಪದೇ ಯೋಗ ಮಾಡುತ್ತೇನೆ. ಗುರುಗಳು ಮನೆಗೆ ಬಂದು ಯೋಗ ಹೇಳಿಕೊಡುತ್ತಾರೆ. ಯೋಗಾಭ್ಯಾಸದಿಂದಾಗಿ ಶರೀರಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಕಂಡಿದ್ದೇನೆ' ಎಂದು ಸಿದ್ದರಾಮಯ್ಯ ಹೇಳಿದರು.
'ಉನ್ನತ ಶಿಕ್ಷಣ ಇಲಾಖೆ ಮೂಲಕ ಯೋಗಾಭ್ಯಾಸವನ್ನು ಎಲ್ಲ ವಿದ್ಯಾರ್ಥಿಗಳು ತಿಳಿಸುವ ಅಗ್ಯವಿದೆ. ಕಡ್ಡಾಯವಾಗಿ ಯೋಗ ಶಿಕ್ಷಣ ಕೊಡುವುದು ಅವಶ್ಯವಾಗಿದೆ. ವಿದ್ಯಾರ್ಥಿಗಳಿಗೆ ಯೋಗ ಕಲಿಸಲು ಸರ್ಕಾರ ಸಹಕಾರ ನೀಡಲಿದೆ' ಎಂದು ಸಿದ್ದರಾಮಯ್ಯ ತಿಳಿಸಿದರು.
'ಯೋಗಕ್ಕೆ ಯಾವುದೇ ಧರ್ಮ, ವಯಸ್ಸಿಗೆ ಸೀಮಿತವಾಗಿದ್ದಲ್ಲ. ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿ ಅವರು ಪ್ರತಿದಿನ ಯೋಗ ಮಾಡುವಂತೆ ನೋಡಿಕೊಳ್ಳಬೇಕು' ಎಂದು ಸಿದ್ದರಾಮಯ್ಯ ಹೇಳಿದರು.
ಕೇಂದ್ರ ಸಚಿವರಾದ ಅನಂತ ಕುಮಾರ್, ಡಿ.ವಿ.ಸದಾನಂದ ಗೌಡ, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಯು.ಟಿ.ಖಾದರ್, ಟಿ.ಬಿ.ಜಯಚಂದ್ರ ಮುಂತಾದವರು ಕಂಠೀರಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ನೀಡಿದರು.













Click it and Unblock the Notifications