ಕೋವಿಂದ್ ಅವರಿಗೆ 3 ಬಿಜೆಪಿಯೇತರರಿಂದಲೂ ಬೆಂಬಲ
ಬೆಂಗಳೂರು, ಜುಲೈ 05: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿರುವ ರಾಮನಾಥ ಕೋವಿಂದ್ ಅವರು ಮತ ಯಾಚನೆಗಾಗಿ ಬೆಂಗಳೂರಿಗೆ ಆಗಮಿಸಿರುವ ಸುದ್ದಿ ಓದಿರುತ್ತೀರಿ. ಬಿಜೆಪಿ ಅಭ್ಯರ್ಥಿ ಕೋವಿಂದ್ ಅವರಿಗೆ ಮೂವರು ಬಿಜೆಪಿಯೇತರರಿಂದ ಬೆಂಬಲ ಸಿಕ್ಕಿದೆ.
ಭಾರತದ ರಾಷ್ಟ್ರಪತಿ ಅಯ್ಕೆ ಹೇಗೆ? ಎಲೆಕ್ಟ್ರೋಲ್ ಕಾಲೇಜ್ ಹೇಗಿದೆ?
ಖಾಸಗಿ ಹೋಟೆಲ್ನಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಕೋವಿಂದ್ ಭಾಗವಹಿಸಿ, ಔಪಚಾರಿಕವಾಗಿ ಮತಯಾಚಿಸಿದರು. ಈ ಸಭೆಯಲ್ಲಿ ಬಿಜೆಪಿಯ ಸಂಸದರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೋವಿಂದ್, 'ಕರ್ನಾಟಕದ ಜನರು ಶಾಂತಿಪ್ರಿಯರು. ಕರ್ನಾಟಕದ ಬಗ್ಗೆ ನನಗೆ ಎಲ್ಲ ಮಾಹಿತಿ ಇದೆ. ನಾನು ಈ ಹಿಂದೆ ಇಲ್ಲಿನ ಕೆಲವೊಂದು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೆ. ಆಗ ಈ ರಾಜ್ಯದ ಪರಿಸರದ ಬಗ್ಗೆ ತಿಳಿದುಕೊಂಡಿದ್ದೇನೆ' ಎಂದರು.
ಬಿಜೆಪಿಯೇತರ ಶಾಸಕರಿಂದಲೂ ಕೋವಿಂದ್ ಅವರಿಗೆ ಬೆಂಬಲ ಸಿಕ್ಕಿದೆ. ಬಿಎಸ್ ಆರ್ ಕಾಂಗ್ರೆಸ್ ನಿಂದ ಒಬ್ಬರು ಹಾಗೂ ಇಬ್ಬರು ಪಕ್ಷೇತರರಿಂದ ಕೋವಿಂದ್ ಅವರಿಗೆ ಬಲ ಹೆಚ್ಚಿದೆ. ಬಿಎಸ್ ಆರ್ ಕಾಂಗ್ರೆಸ್ ನ ಶ್ರೀರಾಮುಲು, ಪಕ್ಷೇತರರರಾದ ರಾಜೀವ್ ಚಂದ್ರಶೇಖರ್ ಹಾಗೂ ನಾಗೇಶ್ ಎಂಬುವರು ಬೆಂಬಲ ನೀಡಲಿದ್ದಾರೆ.
ರಾಷ್ಟ್ರಪತಿ ಚುನಾವಣೆ ಎಂದರೆ ದಲಿತ ವಿರುದ್ಧ ದಲಿತ ಸ್ಪರ್ಧೆಯಲ್ಲ. ಮೀರಾ ಕುಮಾರ್ ಅವರು ರಾಷ್ಟ್ರಪತಿ ಚುನಾವಣೆಗೆ ಕಳೆದ ಬಾರಿಯೇ ಸ್ಪರ್ಧಿಸಬಹುದಾಗಿತ್ತು.
ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಿಯಾಗದಂತೆ ತಡೆಯಲು ಯುಪಿಎ ಯೋಜನೆ ಹಾಕಿಕೊಂಡಿತ್ತು. ಮೀರಾ ಕುಮಾರ್ ಅವರನ್ನು ಕಡೆಗಣಿಸಿದ್ದ ಯುಪಿಎ, ಈಗ ದಲಿತ ಮುಖಂಡ ಕೋವಿಂದ್ ವಿರುದ್ಧ ಸ್ಪರ್ಧೆಗೆ ಮೀರಾ ಅವರನ್ನು ಕರೆ ತಂದಿದೆ' ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. ಜುಲೈ 17ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ.