ಏಲಿಯನ್ಸ್ ಗೆ ಸಂದೇಶ ಕೊಟ್ಟ ಕನ್ನಡ ದನಿ 'ಪೈ'
ಬೆಂಗಳೂರು, ನ.3; ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ವಾಯೇಜರ್ 01 ಯೋಜನೆ ಮೂಲಕ ಅನ್ಯಗ್ರಹ ಜೀವಿಗಳಿಗೆ 55 ಭಾಷೆಯಲ್ಲಿ ಸಂದೇಶ ಕಳಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈ 55 ಭಾಷೆಗಳಲ್ಲಿ 'ಕಸ್ತೂರಿ ಕನ್ನಡ' ಎಂಬುದು ಹಳೆ ವಿಚಾರ. ಆದರೆ, ಈ ಕನ್ನಡ ವಾಯ್ಸ್ ಮೆಸೇಜ್ ರೆಕಾರ್ಡ್ ಆಗಿದ್ದು ಯಾರ ದನಿಯಲ್ಲಿ? ಎಂಬ ಕುತೂಹಲಕ್ಕೆ ರೇಡಿಯೋ ಸಿಟಿ ಆರ್ ಜೆ ಪ್ರದೀಪ ಉತ್ತರ ನೀಡಿದ್ದಾರೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆಸಿದ ಪ್ರದೀಪ ಏಲಿಯನ್ಸ್ ಗೆ ಸಂದೇಶ ಕಳಿಸಿದ್ದು ಶ್ರೀನಿವಾಸ್ ಪೈ ಎಂಬುವರ ದನಿಯ ಮೂಲಕ. ಉಡುಪಿ ಜಿಲ್ಲೆ ಕುಂದಾಪುರ ಮೂಲದ ಶ್ರೀನಿವಾಸ್ ಪೈ ಅವರು ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ಶ್ರೀನಿವಾಸ ಪೈ ಅವರು ಪ್ರದೀಪ ಅವರ ಜತೆ ನಡೆಸಿದ ಮಾತುಕತೆ ವಿವರ ನಿಮ್ಮ ಮುಂದೆ...
ನಮ್ಮೂರು ಕುಂದಾಪುರದಿಂದ ನಾಲ್ಕು ಮೈಲಿ ದೂರದ ಕುಂಭಕಾಶಿ ಹೇಳಿ..ಐಐಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ವೈಕಾನ್ ಲಿಮಿಟೆಡ್ ಕಂಪನಿಯಲ್ಲಿದ್ದೆ. ನಂತರ ಉತ್ತರ ಕರ್ನಾಟಕದ ರಾಯಚೂರಿನ ಕಾಲೇಜೊಂದರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದೆ. ಕೆನೆಡಾದಲ್ಲಿ ಮಾಸ್ಟರ್ ಮಾಡಲು ಬಂದೆ 1976ರಲ್ಲಿ ಕಾರ್ನಲ್ ವಿವಿಯಲ್ಲಿ ಸೇರಿಕೊಂಡೆ ನಂತರ ಇಲ್ಲೆ ನೆಲೆಸಿದೆ.
ವಾಯೇಜರ್ 1 ಎಂದರೆ ಏನು ಸಾರ್? : ಪ್ರದೀಪ
ಸ್ಪೇಸ್ ಪ್ರೋಬ್ 1977ರಲ್ಲಿ ಕಳಿಸಲಾಗಿದೆ. ಸೌರಮಂಡಲದ ಹೊರಗಡೆ ಇರುವ ಕುತೂಹಲಗಳ ಬಗ್ಗೆ ಅರಿವು ಮೂಡಿಸುತ್ತದೆ. ಪ್ರೊ ಕಾರ್ಲ್ ಸೆಗಾನ್ ಅವರು ವಿಶ್ವದ ಬಹುತೇಕ ಭಾಷೆಗಳಲ್ಲಿ ಸಂದೇಶ ನೀಡಲು ಯತ್ನಿಸಲಾಯಿತು. ನಾನು ಕನ್ನಡಿಗನಾಗಿ ಕನ್ನಡ ಭಾಷೆಯಲ್ಲಿ ಮಾತನಾಡಲು ಮುಂದಾದೆ.
'ನಮಸ್ತೆ ಕನ್ನಡಿಗರ ಪರವಾಗಿ ಶುಭಾಶಯಗಳು' ಎಂಬ ಪುಟ್ಟ ಸಂದೇಶ ಸೇರಿದಂತೆ ಒಟ್ಟಾರೆ 55 ಭಾಷೆಗಳಲ್ಲಿ ಸಂದೇಶ ಕಳಿಸಲಾಗಿದೆ. ನಮ್ಮ ಸೌರಮಂಡಲದ ಆಚೆ ಬುದ್ಧಿಶೀಲಿ ಅನ್ಯಗ್ರಹ ಜೀವಿಗಳಿದ್ದರೆ ಈ ಸಂದೇಶಗಳನ್ನು ಪಡೆದು ಪ್ರತಿಕ್ರಿಯಿಸಲಿ ಎಂಬ ಉದ್ದೇಶ ಹೊಂದಲಾಗಿದೆ.
ಸಂದೇಶ ಅಷ್ಟೇ ಅಲ್ಲ ಶಾಸ್ತ್ರೀಯ ಸಂಗೀತ, ಮಗುವಿನ ಅಳು, ಕಡಲ ಅಳೆ ಶಬ್ದ, ಮೋಝಾರ್ಟ್ ಟ್ಯೂನ್ ಸೇರಿದಂತೆ ವಿವಿಧ ರೀತಿಯ ಸಂದೇಶಗಳನ್ನು ಸೌಂಡ್ಸ್ ಆಫ್ ಅರ್ಥ್ ಹೆಸರಿನಲ್ಲಿ ನೀಡಲಾಗಿದೆ.
ಈ ರೀತಿ ಏಲಿಯನ್ಸ್ ಗೆ ಸಂದೇಶ ಕಳಿಸಲು ನಿಮ್ಮ ದನಿ ಬಳಸಿದ್ದರ ಬಗ್ಗೆ ನಿಮಗೇನ್ನಿಸುತ್ತದೆ? ಇದು ತುಂಬಾ ದೊಡ್ಡ ಅವಕಾಶ ನನಗೆ ಸಿಕ್ಕಿದ್ದು ಖುಷಿಯಾಗಿದೆ ಎಂದು ಶ್ರೀನಿವಾಸ ಪೈ ಹೇಳಿದ್ದಾರೆ.
ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆ ನೀಡಿದ ಪೈ ಅವರು ಅಮೆರಿಕದಲ್ಲಿ ಸಾಕ್ರಮೆಂಟೋ, ಬೇ ಏರಿಯಾದಲ್ಲಿ ಕನ್ನಡ ರಾಜ್ಯೋತ್ಸವ ಸಂತಸದಿಂದ ಆಚರಿಸುತ್ತೇವೆ ಎಂದಿದ್ದಾರೆ. ಆರ್ ಜೆ ಪ್ರದೀಪ ಅವರು ಪೈ ಅವರ ಜತೆ ಮಾತನಾಡಿದ ಧ್ವನಿಮುದ್ರಿಕೆ ಸೌಂಡ್ ಕ್ಲೌಡ್ ನಲ್ಲೂ ಸದ್ದು ಮಾಡುತ್ತಿದ್ದು ಐದು ಮುಕ್ಕಾಲು ಸಾವಿರಕ್ಕೂ ಅಧಿಕ ಜನ ಇದನ್ನು ಕೇಳಿದ್ದಾರೆ. 55 ಭಾಷೆಗಳಲ್ಲಿ ಸಂದೇಶಗಳು ಹೇಗಿದೆ ಎಂಬುದನ್ನು ಇಲ್ಲಿ ಕೇಳಿ