ಕಾರ್ತಿಕ್ ಗೌಡಗೆ ನಿರೀಕ್ಷಣಾ ಜಾಮೀನು ಮಂಜೂರು
ಬೆಂಗಳೂರು, ಸೆ.8: ಅತ್ಯಾಚಾರ, ವಂಚನೆ ಆರೋಪ ಹೊತ್ತು ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ಕಾರ್ತಿಕ್ ಗೌಡ ಅವರಿಗೆ ಸೆಷನ್ಸ್ ನ್ಯಾಯಾಲಯ ಸೋಮವಾರ ಸಂಜೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಕೇಂದ್ರ ರೈಲ್ವೆ ಸಚಿವ ಡಿ.ವಿ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಕೋರ್ಟಿನಲ್ಲಿ ಹಾಜರಿದ್ದ ನಟಿ ಮೈತ್ರಿಯಾ ಗೌಡ ಅವರಿಗೆ ಇದರಿಂದ ಹಿನ್ನಡೆಯಾಗಿದೆ.
2 ಲಕ್ಷ ರು ವೈಯಕ್ತಿಕ ಬಾಂಡ್, ಇಬ್ಬರ ಶ್ಯೂರಿಟಿ ಸಲ್ಲಿಸಬೇಕು. ತನಿಖಾಧಿಕಾರಿಗಳ ಅನುಮತಿ ಇಲ್ಲದೆ, ಕೋರ್ಟಿಗೆ ತಿಳಿಸದೆ ವಿದೇಶಕ್ಕೆ ಹಾರುವಂತಿಲ್ಲ. ತನಿಖೆ ನಡೆಸುತ್ತಿರುವ ಆರ್ ಟಿ ನಗರ ಪೊಲೀಸ್ ಠಾಣೆಯ ತನಿಖಾಧಿಕಾರಿ ಓಂಕಾರಪ್ಪ ಅವರ ಮುಂದೆ ಹಾಜರಾಗಬೇಕು. ಪೊಲೀಸರು ಹೇಳಿದಂತೆ ಠಾಣೆಗೆ ಹಾಜರಾಗಿ ಸಹಿ ಹಾಕಬೇಕಾಗುತ್ತದೆ ಇವೆ ಮುಂತಾದ ಷರತ್ತುಗಳನ್ನು ನ್ಯಾ. ಮುದಿಗೌಡರ್ ಅವರು ಸೂಚಿಸಿದ್ದಾರೆ.[ಘಾಟಿಯಲ್ಲಿ ಡಾಟಿ ಅವರ 'ಸೊಸೆ' ಮೈತ್ರಿಯಾ]

ಶುಕ್ರವಾರ ಕಾರ್ತಿಕ್ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ಮತ್ತು ಸರಕಾರಿ ಅಭಿಯೋಜಕ ಹೊಸಮನಿ ಅವರ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಮುದಿಗೌಡರ್ ಅವರು ತೀರ್ಪುನ್ನು ಶನಿವಾರಕ್ಕೆ ಕಾಯ್ದರಿಸಿದ್ದರು.ನಂತರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೋಮವಾರ ಸಂಜೆ ಪ್ರಕಟಿಸಿದ್ದಾರೆ.
ಕೋರ್ಟ್ ವಿಧಿಸಿದ ಷರತ್ತುಗಳನ್ನು ಪಾಲಿಸದಿದ್ದರೆ ಕಾರ್ತಿಕ್ ಗೌಡ ಅವರಿಗೆ ನೀಡಿದ ಜಾಮೀನು ರದ್ದಾಗಲಿದ್ದು, ಬಂಧನ ವಾರೆಂಟ್ ಜಾರಿಯಲ್ಲಿರುವುದರಿಂದ ಕಾರ್ತಿಕ್ ರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಬಹುದಾಗಿದೆ.
ಕಾರ್ತಿಕ್ ಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಆರ್.ಟಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ ಗೌಡ ಅವರಿಗೆ ಸೆಪ್ಟೆಂಬರ್ 1 ರಂದು ನೋಟೀಸ್ ನೀಡಿದ್ದರು. ಸೆಪ್ಟೆಂಬರ್ 3 ರೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಿದ್ದರು. ವಿಚಾರಣೆಗೆ ಹಾಜರಾಗದ ಕಾರ್ತಿಕ್ ಗೆ ಕೋರ್ಟ್ ಬಂಧನ ವಾರೆಂಟ್ ನೀಡಿತ್ತು. ನಂತರ ಮೂರು ವಿಶೇಷ ಪೊಲೀಸ್ ತಂಡ ರಚನೆ ಮಾಡಿ ಕೊಡಗು, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಕಾರ್ತಿಕ್ ಗಾಗಿ ಹುಡುಕಾಟ ನಡೆಸಲಾಗಿತ್ತು.
ಬೆಂಗಳೂರಿನಲ್ಲಿ ಸದಾನಂದ ಗೌಡ ಅವರ ಪತ್ನಿ, ಕಾರ್ತಿಕ್ ತಾಯಿ ಡಾಟಿ ಅವರ ಹೇಳಿಕೆ ಪಡೆಯಲಾಗಿತ್ತು. ಡಿವಿ ಸದಾನಂದ ಗೌಡರಿಗೂ ಇಮೇಲ್/ಫ್ಯಾಕ್ಸ್ ಮೂಲಕ ಮನವಿ ಪೂರ್ವಕ ನೋಟಿಸ್ ಕಳಿಸಿ ನಿಮ್ಮ ಮಗನ ಇರುವಿಕೆ ಬಗ್ಗೆ ತಿಳಿಸಿ ಎಂದು ಪೊಲೀಸರು ಕೋರಿದ್ದರು. ಈಗ ಕಾರ್ತಿಕ್ ಗೆ ಜಾಮೀನು ಸಿಕ್ಕಿರುವುದರಿಂದ ಸ್ವಿಚ್ ಆಫ್ ಆದ ಅವರ ಫೋನ್ ಚಾಲನೆಗೊಳ್ಳುವ ಸಾಧ್ಯತೆಯಿದೆ.
ಈ ನಡುವೆ ಸೆಷನ್ಸ್ ಕೋರ್ಟಿನ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಮೈತ್ರಿಯಾ ಪರ ವಕೀಲ ರಾಜು, ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ, ಹೈಕೋರ್ಟಿಗೆ ಅರ್ಜಿ ಹಾಕಲಾಗುವುದು. ಕಾರ್ತಿಕ್ ಅವರು ಮೊದಲು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿ ಎಂದಿದ್ದಾರೆ.












Click it and Unblock the Notifications