ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದ ಕನಸುಗಾರ ಅನಂತ್ ಕುಮಾರ್
Recommended Video
ಅನಂತ್ ಕುಮಾರ್ ಅನಂತ ಚಲನಶೀಲತೆಯ ವ್ಯಕ್ತಿತ್ವವಾಗಿದ್ದರು. ದೇಶ ಮತ್ತು ನಾಡಿನ ಬಗ್ಗೆ ಹಲವಾರು ಕನಸು ಕಂಡಿದ್ದರು. ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದರು. ಈ ಕಾರಣದಿಂದಾಗಿಯೇ ಸತತ 5 ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದ ಜನತೆ ಅವರನ್ನು ಸಂಸತ್ತಿಗೆ ಆರಿಸಿ ಕಳಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಕೂಡ ಜಯಭೇರಿ ಬಾರಿಸಿದ್ದ ಅವರ ಕುರಿತು ಆಗ ಪ್ರಕಟವಾದ ಲೇಖನ ಇಲ್ಲಿದೆ. ಅನಂತ್ ಅವರು 2018ರ ನವೆಂಬರ್ 12ರಂದು ಬೆಂಗಳೂರಿನಲ್ಲಿ ವಿಧಿವಶರಾದರು.
***
ಮುಗುಳ್ನಗುತ್ತಲೇ ರಾಜಕೀಯ ಚದುರಂಗದಾಟದಲ್ಲಿ ಎದುರಾಳಿ ರಾಜಕಾರಣಿಗಳನ್ನು ಮಣಿಸಬಲ್ಲ ಜನನಾಯಕ, ಉತ್ತಮ ವಾಕ್ಪಟುತ್ವದಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪ್ರಬುದ್ಧ ಮತದಾರರನ್ನು ಗಳಿಸಿಕೊಂಡಿರುವ ಸಮರ್ಥ ಜನಪ್ರತಿನಿಧಿ, ಸಾಮಾಜಿಕ ಕಾರ್ಯಕರ್ತ ಅಂದರೆ ಅದು ಹೆಗ್ಗನಹಳ್ಳಿ ನಾರಾಯಣಶಾಸ್ತ್ರಿ ಅವರ ಮಗ ಅನಂತ್ ಕುಮಾರ್ (54) ಎಂಬ ಅಪ್ಪಟ ಕನ್ನಡಪ್ರೇಮಿ ಮತ್ತು ದೇಶಪ್ರೇಮಿ. ಹುಟ್ಟೂರು ಬೆಂಗಳೂರಿನ ಬಗ್ಗೆಯೂ ಅವರಿಗೆ ಅಪಾರವಾದ ಪ್ರೇಮ.
ಅತ್ಯುತ್ತಮ ಕುಶಲ ಸಂಘಟಕ, ಉತ್ತಮ ವಾಗ್ಮಿ ಮತ್ತು ಮಾನವತಾವಾದಿ ಎಂದು ಹೆಸರು ಗಳಿಸಿರುವ ಅನಂತ್ ಅವರು 1996ರಿಂದ ಸತತವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿಕೊಂಡು ಬಂದಿದ್ದು, 6ನೇ ಬಾರಿ ಕೂಡ ಅದೇ ವಿಶ್ವಾಸ, ಅದೇ ಹುರುಪಿನಿಂದ ಚುನಾವಣಾ ಕಣದಲ್ಲಿ ಇಳಿದಿದ್ದಾರೆ. ಜನ ಆಶೀರ್ವಾದ ಮಾಡೇ ಮಾಡುತ್ತಾರೆ, ನರೇಂದ್ರ ಮೋದಿ ಅವರನ್ನು ಪ್ರಧಾನಿ ಆಗೇ ಆಗುತ್ತಾರೆ ಎಂಬ ಅಚಲ ವಿಶ್ವಾಸ ಅವರಲ್ಲಿದೆ.
'ಪ್ರಾಮಾಣಿಕತೆ, ಚಾರಿತ್ರ್ಯ, ಬದ್ಧತೆ, ವಿಶ್ವಾಸ, ಪ್ರೀತಿ ಮತ್ತು ವಿಧೇಯತೆಗಳೇ ಸಮತೋಲನದ ಯಶಸ್ಸಿನ ಬುನಾದಿ' ಎಂದು ನಂಬಿರುವ ಆಧುನಿಕ ಭಾರತದ ಚಿಂತನೆಯನ್ನು ಜಪಿಸುತ್ತಿರುವ ಅನಂತ್ ಅವರು ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದರೂ, ಸತತ ಹೋರಾಟ, ದಿಟ್ಟತನ, ಬದ್ಧತೆಯಿಂದ ಸಾಮಾಜಿಕವಾಗಿ, ರಾಜಕೀಯವಾಗಿ ಹಂತಹಂತವಾಗಿ ಮೇಲೇರಿ ಬಂದವರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತನಾಗಿ, ಪಕ್ಷದ ಸಂಘಟಕನಾಗಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ, ಕೇಂದ್ರ ಸಚಿವರಾಗಿ, ಜನಪರ ಕಾಳಜಿಯ ನಾಯಕನಾಗಿ, 'ಅದಮ್ಯ' ಚೇತನವುಳ್ಳ ಸಾಮಾಜಿಕ ಕಾರ್ಯಕರ್ತನಾಗಿ ನರನಾಡಿಗಳಲ್ಲಿ ರಾಷ್ಟ್ರೀಯತೆಯನ್ನು ತುಂಬಿಕೊಂಡಿರುವ ಮುತ್ಸದ್ದಿ ಅನಂತ್ ಕುಮಾರ್ ಅವರ ಜೀವನ, ಏಳುಬೀಳುಗಳ ಮೆಲುಕು, ರಾಜಕೀಯ ಹೆಜ್ಜೆಗುರುತುಗಳು ಇಲ್ಲಿವೆ.