ಜೆಪಿ ಗರಡಿಯಲ್ಲಿ ಪಳಗಿದ ಅನಂತ್ ಕುಮಾರ್
22ನೆ ಜುಲೈ 1959ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅನಂತಕುಮಾರರ ತಂದೆಯವರ ಹೆಸರು ಶ್ರೀ ನಾರಾಯಣ ಶಾಸ್ತ್ರಿ ಮತ್ತು ತಾಯಿಯವರು ಶ್ರೀಮತಿ ಗಿರಿಜಾ ಎನ್ ಶಾಸ್ತ್ರಿ. ಅನಂತಕುಮಾರರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದ ಹುಬ್ಬಳ್ಳಿಯ ಕೆ ಎಸ್ ಆರ್ಟ್ಸ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಧವೀಧರರಾಗಿ (B.A), ನಂತರ ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿದ ಜೆ.ಎಸ್.ಎಸ್. ಲಾ ಕಾಲೇಜಿನಲ್ಲಿ ಕಾನೂನು ಪದವೀಧರರಾದರು.
ಅನಂತ್ ಅವರ ಪೂರ್ವಿಕರ ಊರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ ಹೆಗ್ಗನಹಳ್ಳಿ. ಅನಂತ್ ಅವರ ತಾತ ನರಹರಿ ಶಾಸ್ತ್ರಿ ಅವರು ಮೈಸೂರಿನಲ್ಲಿ ಮಹಾರಾಜರ ಆಸ್ಥಾನದಲ್ಲಿ ಅವರ ಸಲಹೆಗಾರರಾಗಿದ್ದರು. ತಾಯಿ ಗಿರಿಜಾ ಅವರ ತಂದೆ ಶ್ರೀಕಂಠ ಪಂಡಿತರು ಖ್ಯಾತ ವೈದ್ಯರಾಗಿದ್ದರು. ಇವರಿದ್ದ ಶೇಷಾದ್ರಿಪುರಂ ಮನೆಯಲ್ಲೇ ಅನಂತ್ ಅವರು 1959ರಲ್ಲಿ ಜನಿಸಿದ್ದು.

16ರ ಹದಿಹರೆಯದ ಹುಡುಗನಾಗಿದ್ದಾಗಲೂ ಅವರ ದೇಹ, ಮನಸ್ಸಿನ ತುಂಬ ಉತ್ಸಾಹ, ಕ್ರಿಯಾಶೀಲತೆ. ದೇಶದ ಪ್ರಜಾತಂತ್ರವನ್ನೇ ಛಿದ್ರಗೊಳಿಸುತ್ತಿದ್ದ ಕಾಂಗ್ರೆಸ್ ದುರಾಡಳಿತದ ವಿರುದ್ಧ ಜಯಪ್ರಕಾಶ್ ನಾರಾಯಣ್ ನೀಡಿದ ಕರೆಗೆ ಓಗೊಟ್ಟರು. ಇದರ ಪರಿಣಾಮವಾಗಿ ಅವರು 30 ದಿನಗಳ ಕಾಲ ಸೆರೆವಾಸ ಅನುಭವಿಸಿದರು. ಇದು ಅವರ ನಿರ್ಣಯವನ್ನು ಸಡಿಲಗೊಳಿಸುವ ಬದಲಿಗೆ ರಾಷ್ಟ್ರೀಯ ಪುನರ್ನಿರ್ಮಾಣಕ್ಕೆ ಮತ್ತಷ್ಟು ಪ್ರಬಲವಾಗಿ ಹೋರಾಡುವ ದೃಢತೆಯನ್ನು ಹೆಚ್ಚಿಸಿತು.
ಅವರು ವಿದ್ಯಾರ್ಥಿ ಸಮುದಾಯದ ಧ್ವನಿಯಾದರು; ಶಿಕ್ಷಣ ಸಂಸ್ಥೆಗಳ ಮೊಗಸಾಲೆಗಳಲ್ಲಿ ನಡೆಯುತ್ತಿದ್ದ ಹಲವು ಅನ್ಯಾಯಗಳ ವಿರುದ್ಧ ಹೋರಾಡಿದರು. 1977ರಿಂದ 1987ರವರೆಗಿನ ಅವಧಿಯು ಅವರ ನಿರಂತರ ಕಲಿಕೆಯ ಕಾಲಾವಧಿಯಾಗಿತ್ತು. 1977ರಲ್ಲಿ ಹುಬ್ಬಳ್ಳಿಯಲ್ಲಿ ಎಬಿವಿಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿ ಸೇರಿಕೊಂಡ ಅವರು ಮುಂದೆ, ಆರೆಸ್ಸೆಸ್ ಬರ ಪರಿಹಾರ ಸಮಿತಿಯ ರಾಜ್ಯ ಸಂಚಾಲಕರಾಗಿ, ಎಬಿವಿಪಿ ಸಂಘಟನಾ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ ಹತ್ತು ಹಲವು ಹೊಣೆಗಾರಿಕೆಗಳನ್ನು ವಹಿಸಿಕೊಂಡರು.












Click it and Unblock the Notifications