ಬೈಕ್ ನಲ್ಲಿ ಮಗುವಿನ ಶವವನ್ನು ತೆಗೆದುಕೊಂಡು ಹೋದ ಅಸಹಾಯಕ ತಂದೆ
ಅಸ್ಸಾಂನಿಂದ ಬೆಂಗಳೂರಿಗೆ ವಲಸೆ ಬಂದಿರುವ ಆ ವ್ಯಕ್ತಿಯ ಮಗುವಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿತು. ಆಸ್ಪತ್ರೆಯಿಂದ ಮನೆಗೆ ಅಂಬ್ಯುಲೆನ್ಸ್ ವ್ಯವಸ್ಥೆ ಕೂಡ ಆತನಿಗೆ ಸಿಗಲಿಲ್ಲ. ಮುಂದೇನು ಮಾಡಿದರು ಗೊತ್ತಾ?
ಬೆಂಗಳೂರು, ಮೇ 2: ತನ್ನ ಮೂರು ವರ್ಷದ ಸಣ್ಣ ಮಗುವಿನ ಶವವನ್ನು ಕೈಯಲ್ಲಿ ಹಿಡಿದಿದ್ದ ಸಫನ್ ರಾಯ್ ಮನೆಗೆ ತೆಗೆದುಕೊಂಡು ಹೋಗಲು ವಾಹನಕ್ಕಾಗಿ ಕಾದಿದ್ದೇ ಬಂತು. ಕಾರು ಅಪಘಾತವಾಗಿ ಮಗು ಮೃತಪಟ್ಟಿತ್ತು. ಇನ್ನೂ ಆ ಕಾರಿನ ಚಾಲಕ ಪತ್ತೆಯಾಗಿಲ್ಲ. ಆದರೆ ಈ ವ್ಯಕ್ತಿ ಬೆಂಗಳೂರಿನ ಆನೇಕಲ್ ನ ಸರಕಾರಿ ಆಸ್ಪತ್ರೆ ಬಳಿ ಪಟ್ಟ ಪಾಡು ಎಂಥವರ ಹೃದಯ ಕರಗಿಸುವಂತಿತ್ತು.
ಅಸ್ಸಾಂನಿಂದ ವಲಸೆ ಬಂದಿರುವ ರಾಯ್, ತನ್ನ ಮಗ ರಹೀಮ್ ನನ್ನು ಕಳೆದುಕೊಂಡು ಕಂಗಾಲಾಗಿದ್ದರು. ಆದರೆ ಮಗುವಿನ ಶವ ತೆಗೆದುಕೊಂಡು ಹೋಗಲು ಉಚಿತ ಆಂಬ್ಯುಲೆನ್ಸ್ ಸಿಗುತ್ತದೋ ಇಲ್ಲವೋ ಎಂಬ ಬಗ್ಗೆ ಕೂಡ ಅವರಿಗೆ ಮಾಹಿತಿ ಇರಲಿಲ್ಲ. ಜತೆಗೆ ಕನ್ನಡವೂ ಬರುತ್ತಿರಲಿಲ್ಲ. ಆತನ ನೆರವಿಗೆ ಆಸ್ಪತ್ರೆಯ ಸಿಬ್ಬಂದಿ ಕೂಡ ಬಂದಿಲ್ಲ.[ಆತ ಊಟ-ನೀರಿಲ್ಲದೆ ತಂದೆ ಶವದ ಬಳಿಯೇ ಐದು ದಿನ ಇದ್ದ]
ಆಂಬ್ಯುಲೆನ್ಸ್ ಗೆ ಹಣ ನೀಡಬೇಕೇನೋ ಎಂಬ ಕಾರಣಕ್ಕೆ ತನ್ನ ಪರಿಚಯದವರೊಬ್ಬರನ್ನು ಕರೆದು, ತನ್ನ ಮಗನ ದೇಹವನ್ನು ದ್ವಿಚಕ್ರ ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋದರು. ಆತ ಪಟ್ಟ ಪಾಡು, ಸ್ಥಿತಿಯನ್ನು ವಿಡಿಯೋ ಮಾಡಲಾಗಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾದ ಮೇಲೆ ಪೊಲೀಸರು ದೂರು ದಾಖಲಿಸಿ, ರಹೀಮ್ ಶವವನ್ನು ವಾಪಸ್ ಆಸ್ಪತ್ರೆಗೆ ತಂದು, ಮರಣೋತ್ತರ ಪರೀಕ್ಷೆ ನಡೆಸಲಾಯಿತು.['ರಜಾ ಹಾಕ್ತೀನಿ ಅಂದಿದ್ದ ನನ್ನ ಮಗ ಇನ್ಯಾವತ್ತೂ ಮನೆಗೆ ಬರಲ್ಲ']
ಇಂಥ ಪ್ರಕರಣದಲ್ಲಿ ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ನೀಡಬೇಕು. ಅದರೆ ಆಸ್ಪತ್ರೆಯವರು ಆ ಕೆಲಸ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಕುಟುಂಬಕ್ಕೆ ಶವ ಹಸ್ತಾಂತರಿಸಲಾಯಿತು. ಆ ನಂತರ ಆಂಬ್ಯುಲೆನ್ಸ್ ಒದಗಿಸಲಾಯಿತು.