ಬೆಂಗಳೂರಲ್ಲಿ ನೀರಿನ ಅಭಾವ: ಬಿಬಿಸಿ ವರದಿ ತಳ್ಳಿ ಹಾಕಿದ ಜಾರ್ಜ್
ಬೆಂಗಳೂರು, ಫೆಬ್ರವರಿ 12 : ಬೆಂಗಳೂರಿಗೆ 1004 ಎಂಎಲ್ ಡಿ ನೀರು ಹರಿದುಬರುತ್ತಿದೆ.775 ಎಂಎಲ್ ಡಿಯಷ್ಟು ನೀರು ಕಾವೇರಿ 5 ನೇ ಹಂತದಿಂದ ಬರುತ್ತಿದೆ ಹಾಗಾಗಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಭರಸವೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಜಲಕ್ಷಾಮ ಎಂದು ಬಿಬಿಸಿ ಸುದ್ದಿವಾಹಿನಿ ಪ್ರಕಟಿಸಿದ ವರದಿಯ ಕುರಿತು ಜಲಮಂಡಳಿಯಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ನೀರಿನ ಸೋರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಿದ್ದೇವೆ. ಎಲ್ಲ ಕಟ್ಟಡಗಳಲ್ಲಿ ಎಸ್ ಟಿ ಪಿ ಅಳವಡಿಸಲು ಸೂಚಿಸಿದ್ದೇವೆ. ಎಸ್ ಟಿಪಿ ಅವಳವಡಿಕೆಯನ್ನು ಕಡ್ಡಾಯ ಗೊಳಿಸಿದ್ದೇವೆ ಹಾಗಾಗಿ ನೀರಿನ ಅಭಾವವಿರುವುದಿಲ್ಲ ಎಂದರು.
ಶರವಾತಿ ನದಿಯಿಂದ ನೀರು ತರುವ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಅಣೆ ಕಟ್ಟು ಕಟ್ಟಿ ನೀರಿನ ಶುದ್ಧ ಯೋಜನೆಯನ್ನು ಮಾಡಲು ಚಿಂತನೆ ನಡೆಸಲಾಗಿದೆ. ಬೆಂಗಳೂರು ಬ್ರ್ಯಾಂಡ್ ನ್ನು ಹಾಳು ಮಾಡುವ ಯತ್ನ ನಡೆಯುತ್ತಿದೆ ಎಂದು ವರದಿಯನ್ನು ತಳ್ಳಿ ಹಾಕಿದರು.
ಕುಡಿಯುವ ನೀರಿನ ಅಭಾವ ಹೊಂದಿರುವ ಜಗತ್ತಿನ 11 ಮಹಾನಗರಗಳ ಸಮಸ್ಯೆಯನ್ನು ಬಿಬಿಸಿ ನ್ಯೂಸ್ ವಾಹಿನಿ ತೆರೆದಿಟ್ಟಿದ್ದು, ಅಂತಹ ಬಾಯಾರಿದ ನಗರಗಳ ಸಾಲಿನಲ್ಲಿ ಬೆಂಗಳೂರು ಕೂಡ ಒಂದಾಗಿದೆ.
ಇನ್ನೂ ಗಂಭೀರ ವಿಷಯವೆಂದರೆ ಹೀಗೆ ವಿಶ್ವದಲ್ಲಿ ನೀರಿನ ಗಂಭೀರ ಕೊರತೆ ಎದುರಿಸುತ್ತಿರ ಬಹುದಾದ 11 ನಗರಗಳ ಪೈಕಿ ಬೆಂಗಳೂರು ವಿಶ್ವದಲ್ಲೇ 2 ನೇ ಸ್ಥಾನದಲ್ಲಿದೆ. ಅಭಿವೃದ್ಧಿ ನಗರೀಕರಣದ ನೆಪದಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಕಳೆದುಕೊಂಡಿರುವ ನಗರಗಳು ಮತ್ತು ಅಲ್ಲಿನ ದುಸ್ಥಿತಿ ಕುರಿತು ವಾಹಿನಿ ವರದಿ ಮಾಡಿತ್ತು.
ವರದಿ ಪ್ರಕಾರ 2030 ರ ವೇಳೆಗೆ ಜಗತ್ತಿನಾದ್ಯಂತ, ಶೇ.40 ರಷ್ಟು ಶುದ್ಧ ನೀರಿನ ಕೊರತೆ ಎದುರಾಗಲಿದೆ. ನಗರಗಳಿಗೆ ಹರಿದು ಬರುತ್ತಿರುವ ಭಾರಿ ಜನಸಂಖ್ಯೆ, ನೀರಿನ ಸೂಕ್ತನಿರ್ವಹಣೆ ಕೊರತೆ, ನೀರಿನ ಮರುಬಳಕೆ ತಂತ್ರಜ್ಞಾನ ಬಳಕೆ ಮಾಡದಿರುವುದು ಮತ್ತು ಭಾರೀ ಪ್ರಮಾಣದಲ್ಲಿ ನೀರಿನ ಬಳಕೆ ಮಾಡುತ್ತಿರುವ ಕಾರಣ, ಜಗತ್ತಿನ ಹಲವು ನಗರಗಳು ಮುಂದಿನ ದಿನಗಳಲ್ಲಿ ಗಂಭೀರವಾದ ನೀರಿನ ಸಮಸ್ಯೆ ಎದುರಿಸಲಿದೆ ಎಂದು ವರದಿ ಹೇಳಿದೆ.