ಕೃಷ್ಣ ರಾಜೇಂದ್ರ ಮಾರುಕಟ್ಟೆಯನ್ನು ಬೆಳಗಿದ ಹಸಿ ತ್ಯಾಜ್ಯ
ಬೆಂಗಳೂರು, ಜೂ.26: ಕೆ.ಆರ್.ಮಾರುಕಟ್ಟೆಯ ಖದರ್ ಬದಲಾಗಿದೆ. ಮಾರುಕಟ್ಟೆಯ ದುರ್ಗಂಧಕ್ಕೆ ಕಾರಣವಾಗಿದ್ದ ತ್ಯಾಜ್ಯ ಈಗ ಮಾರುಕಟ್ಟೆಯನ್ನು ಬೆಳಗುವಂತೆ ಮಾಡಿದೆ.
ಬೆಂಗಳೂರಿನ ಕಸದ ಸಮಸ್ಯೆಗೆ ಪರಿಹಾರವಾಗಿ ಬಿಬಿಎಂಪಿ ಇದೀಗ ಕೆ.ಆರ್.ಮಾರುಕಟ್ಟೆಯಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕವನ್ನು ಆರಂಭಿಸಿದೆ. ನಾಸಿಕ್ ಮೂಲದ ಅಶೋಕ ಬಯೋಗ್ರೀನ್ ಪ್ರೈವೆಟ್ ಸಂಸ್ಥೆ,ಬಾಬಾ ಅಣುಶಕ್ತಿ ಕೇಂದ್ರದ ತಂತ್ರಜ್ಞಾನವನ್ನು ಬಳಸಿಕೊಂಡು ಈ ಘಟಕವನ್ನು ಸ್ಥಾಪಿಸಿದೆ.[ಬಿಬಿಎಂಪಿ : ಘನತ್ಯಾಜ್ಯ ನಿರ್ವಹಣೆಗೆ ವಿಶೇಷ ಆಯುಕ್ತರು]
ಹೀಗಾಗಿ ಬಹಳಷ್ಟು ಮಂದಿಗೆ ಈ ಘಟಕದಲ್ಲಿ ಹೇಗೆ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ? ಬೆಂಗಳೂರಿನಲ್ಲಿ ಎಲ್ಲೆಲ್ಲಿ ಈ ಘಟಕವನ್ನು ಸ್ಥಾಪಿಸಲಾಗುತ್ತದೆ? ಈ ಘಟಕ ಸುಲಭವಾಗಿ ಕಾರ್ಯನಿರ್ವಹಿಸುವಂತಾಗಲು ನಾವು ಏನು ಮಾಡಬೇಕು ಇತ್ಯಾದಿ ಮಾಹಿತಿಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.
ಬಿಸಿ ನೀರಿನೊಂದಿಗೆ ಹಸಿ ತ್ಯಾಜ್ಯ ಮಿಶ್ರಣ
ಮಾರುಕಟ್ಟೆಯಲ್ಲಿ ಉತ್ಪಾದನೆಯಾಗುವ ಹಸಿ ತ್ಯಾಜ್ಯವನ್ನು ತೂಕಮಾಡಿ ಬಿಸಿನೀರನ್ನು ಸೇರಿಸಿ ಪ್ರಿಡೈಜೆಸ್ಟರ್ಗೆ ಹಾಕಲಾಗುತ್ತದೆ.ಬಿಸಿನೀರಿನ ವ್ಯವಸ್ಥೆಗೆ ಸೋಲಾರ್ ವಾಟರ್ ಹೀಟರ್ನ್ನು ಅಳವಡಿಸಲಾಗಿದೆ.
ಗುಮ್ಮಟಕಾರದ ಟ್ಯಾಂಕ್ನಲ್ಲಿ ಅನಿಲ ಉತ್ಪಾದನೆ
ಈ ದ್ರವೀಕೃತ ತ್ಯಾಜ್ಯ ಮಿಶ್ರಣವನ್ನು ಗುಮ್ಮಟಕಾರದ ಟ್ಯಾಂಕ್ಗೆ ಹಾಯಿಸಲಾಗುತ್ತದೆ. ಈ ಟ್ಯಾಂಕ್ನಲ್ಲಿ ತ್ಯಾಜ್ಯ ಸಂಸ್ಕರಣೆಯಾಗಿ ಜೈವಿಕ ಅನಿಲ ಉತ್ಪಾದನೆಯಾಗುತ್ತದೆ.
ಬಯೋಗ್ಯಾಸ್ ಜನರೇಟರ್ ಬಳಸಿ ವಿದ್ಯುತ್ ಉತ್ಪಾದನೆ
ಉತ್ಪಾದನೆಯಾದ ಅನಿಲ ಶುದ್ಧೀಕರಿಸಿ ಪ್ರತ್ಯೇಕ ಸಿಲಿಂಡರ್ನಲ್ಲಿ ಸಂಗ್ರಹವಾಗುತ್ತದೆ. ಈ ಸಿಲಿಂಡರ್ನಲ್ಲಿರುವ ಅನಿಲವನ್ನು ಬಯೋಗ್ಯಾಸ್ ಜನರೇಟರ್ ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಅನಿಲ ತೆಗೆದು ಉಳಿಯುವ ತ್ಯಾಜ್ಯವನ್ನು ಗೊಬ್ಬರದ ಉತ್ಪಾದನೆಗೆ ಕಳುಹಿಸಲಾಗುತ್ತದೆ.
ಕಾರು ಬಸ್ಗಳನ್ನು ಓಡಿಸಬಹುದು:
ಈ ಅನಿಲವನ್ನು ಅಡುಗೆಗೆ ಬಳಸಬಹುದು. ಕಾರು, ಬಸ್ಗಳನ್ನು ಈ ಅನಿಲದಿಂದ ಓಡಿಸಹುದು.
1.02 ಕೋಟಿ ವೆಚ್ಚ:
5 ಟನ್ ತ್ಯಾಜ್ಯ ಸಂಸ್ಕರಿಸುವ ಘಟಕ ನಿರ್ಮಾಣಕ್ಕೆ ನಿರ್ಮಾಣ ಮತ್ತು ನಿರ್ವಹಣೆಗಾಗಿ ಒಟ್ಟು 1.02 ಕೋಟಿ ರೂ ವೆಚ್ಚವಾಗಿದೆ. ಪ್ರಾರಂಭಿಕ ಹಂತವಾಗಿ 6 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ 150 ದೀಪಗಳಿಗೆ ಪೊರೈಸಲಾಗುತ್ತದೆ. ಹಂತ ಹಂತವಾಗಿ ತ್ಯಾಜ್ಯ ಸಂಸ್ಕರಣೆ ಪ್ರಮಾಣ ಹೆಚ್ಚಾಗಲಿದ್ದು 50 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.
ಐದು ಸಾವಿರ ಲೀಟರ್ ನೀರು:
ಐದು ಟನ್ ಕಸವನ್ನು ಸಂಸ್ಕರಿಸುವುರಿಂದ ಇದಕ್ಕೆ ಐದು ಸಾವಿರ ಲೀಟರ್ ನೀರಿನ ಅಗತ್ಯವಿದೆ. ಹೀಗಾಗಿ ಇಲ್ಲೇ ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಈ ಘಟಕ ನಿರ್ವಹಣೆಗೆ ಹೆಚ್ಚಿನ ಜನರ ಅಗತ್ಯವಿಲ್ಲ. ನಾಲ್ಕು ಜನ ಸಿಬ್ಬಂದಿಗಳಿದ್ದರೆ ಈ ಘಟಕವನ್ನು ನಿರ್ವಹಣೆ ಮಾಡಬಹುದು.
ಬೆಂಗಳೂರಿನಲ್ಲಿ 16 ಬಯೋಮೆಥನೇಷನ್ ಘಟಕ:
ಬಿಬಿಎಂಪಿ ಹಸಿ ತ್ಯಾಜ್ಯ ಸಂಸ್ಕರಣೆ ಮಾಡಲು 5 ಟನ್ ಸಾಮರ್ಥ್ಯದ 16 ಬಯೋಮೆಥನೇಷನ್ ಘಟಕವನ್ನು ನಗರದಲ್ಲಿ ವಿವಿಧ ಸ್ಥಳಗಳಲ್ಲಿ ನಿರ್ಮಾಣ ಮಾಡುತ್ತಿದೆ. ಕೆ.ಆರ್.ಮಾರುಕಟ್ಟೆ. ಮತ್ತಿಕೆರೆ, ಕುವೆಂಪುನಗರ ವಾರ್ಡ್ನಲ್ಲಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ.
ಕಾಮಗಾರಿ ಪ್ರಗತಿಯಲ್ಲಿರುವ ಘಟಕಗಳು
ಜಯನಗರದಲ್ಲಿ ಎರಡು (ವಾರ್ಡ್ ಸಂಖ್ಯೆ 167 ಮತ್ತು168) ಕಡೆ, ಉಳಿದಂತೆ ಗಾಂಧೀನಗರ, ಬೇಗೂರು, ಕೆ.ಸಿ.ಡಿ.ಸಿ, ಲಿಂಗಧೀರನಹಳ್ಳಿ, ವರ್ತೂರು, ಕೆ.ಆರ್.ಪುರ, ವಿಶ್ವೇಶ್ವರಯ್ಯ ಲೇಔಟ್, ದೊಮ್ಮಲೂರು, ಕೋರಮಂಗಲ, ನಾಗಪುರ, ಆರ್.ಎಂ.ವಿ. ಎಕ್ಸ್ಟೆನ್ಷನ್ ವಾರ್ಡ್ಗಳಲ್ಲಿ ಒಂದೊಂದು ಘಟಕ ನಿರ್ಮಾಣವಾಗುತ್ತಿದೆ.
ಕಸ ವಿಂಗಡನೆ ಮಾಡಿ ಸಹಕರಿಸಿ:
ಬೆಂಗಳೂರಿನ ಕಸದ ಸಮಸ್ಯೆಗೆ ಬಿಬಿಎಂಪಿ, ಸರ್ಕಾರ ಒಂದೇ ಕಾರಣವಲ್ಲ. ಜನರು ಮನೆಯಲ್ಲಿ ಸರಿಯಾಗಿ ವಿಂಗಡನೆ ಮಾಡದಿರುವುದು ಒಂದು ಕಾರಣ. ಹೀಗಾಗಿ ಮನೆಯಲ್ಲೇ ಹಸಿ ತ್ಯಾಜ್ಯವನ್ನು ವಿಂಗಡಿಸಿ ಕಸ ಸಾಗಿಸುವ ವಾಹನದಲ್ಲಿ ಹಾಕಿದರೆ ನಿಮ್ಮ ಏರಿಯಾದ ವಿದ್ಯುತ್ ದೀಪಗಳು ಈ ತ್ಯಾಜ್ಯದಿಂದಲೇ ಬೆಳಗುತ್ತದೆ.
ತಾಂತ್ರಿಕ ಮಾಹಿತಿ:
ಕಸದಿಂದ ವಿದ್ಯುತ್ ಉತ್ಪಾದನೆಯಾಗುವ ಪ್ರಕ್ರಿಯೆಯನ್ನು ತಿಳಿಯಬಹುದು.