ವಿಂಟರ್ ಕಾರ್ನಿವಾಲ್ :ಇದು ವಿಶೇಷ ಮಕ್ಕಳ ಹಬ್ಬ
ಬೆಂಗಳೂರು, ಡಿಸೆಂಬರ್ 11 : ಇಂದಿರಾನಗರದಲ್ಲಿರುವ ಸ್ಪ್ಯಾಸ್ಟಿಕ್ ಸೊಸೈಟಿಯು ಬೌದ್ಧಿಕ ಬೆಳವಣಿಗೆ ಕುಂಠಿತ ಅನಾರೋಗ್ಯದಿಂದ ಬಳಲುತ್ತಿರುವ ವಿಶೇಷ ಮಕ್ಕಳಿಗಾಗಿ 'ವಿಂಟರ್ ಕಾರ್ನಿವಲ್ 'ಏರ್ಪಡಿತ್ತು.
ವಿಶೇಷ ಮಕ್ಕಳಿಗಾಗಿ ಸ್ಪ್ಯಾಸ್ಟಿಕ್ ಸೊಸೈಟಿಯಿಂದ 'ವಿಂಟರ್ ಕಾರ್ನಿವಲ್'
ಕಾರ್ಯಕ್ರಮವು ಇಂತಹ ಮಕ್ಕಳ ಮನೋಸ್ಥೈರ್ಯ ಉದ್ದೀಪನಗೊಳಿಸುವ ಮಹಾತ್ಕಾರ್ಯ ಕೈಗೊಂಡಿತು. ಕಾರ್ಯಕ್ರಮದಲ್ಲಿ ಮಕ್ಕಳು, ಪೋಷಕರು, ಕಲಾವಿದರು ಎಲ್ಲರೂ ಒಂದೆಡೆ ಸೇರಿ, ಕರಕುಶಲ ವಸ್ತುಗಳು, ಪೇಪರ್ ಕ್ರಾಫ್ಟ್, ಟೈಲರಿಂಗ್ ಮಾಡುವ ಮೂಲಕ ಸಂತಸ ಪಟ್ಟರು. ಎಲ್ಲರಲ್ಲಿರುವ ಕಲೆಯನ್ನು ಹೊರ ಹಾಕುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಎಸ್ ಬಿಐ ಲೈಫ್ ಇನ್ಶುರೆನ್ಸ್ ಅಹಯೋಗದಲ್ಲಿ ಕಾರ್ನಿವಲ್ ಹಮ್ಮಿಕೊಂಡಿತ್ತು, ಎಸ್ ಬಿಐ ಪ್ರಾದೇಶಿಕ ವ್ಯವಸ್ಥಾಪಕ ಪ್ರದೀಪ್ ಕುಮಾರ್ ಮಹಾಲಿಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ಪ್ಯಾಸ್ಟಿಕ್ ಸೊಸೈಟಿ ನಿರ್ದೇಶಕರಾದ ಕುಕ್ಮಿಣಿ ಕೃಷ್ಣಸ್ವಾಮಿ ಸೇರಿ ಒಟ್ಟು2500 ಮಂದಿ ಬುದ್ದಿಮಾಂದ್ಯ ಮಕ್ಕಳು ಮತ್ತೆ ಅವರೊಡನೆ ಪೋಷಕರು,ಶಿಕ್ಷಕರು ನಡೆದುಕೊಳ್ಳಬೇಕಾದ ರೀತಿ ಕುರಿತು ಚರ್ಚಿಸಿದರು.
ಚಳಿಗಾಲದ ಹಬ್ಬದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ, ಆಹಾರ ಮಳಿಗೆಗಳು, ಆಟಗಳ ಜತೆಗೆ ಕರಕುಶಲ ವಸ್ತುಗಳ ಪ್ರದರ್ಶನವನ್ನು ಕೂಡ ಆಯೋಜಿಸಲಾಗಿತ್ತು. ವಿಶೇಷ ಮಕ್ಕಳು ಬಗೆ ಬಗೆಯ ತಿಂಡಿ ತಿನಿಸುಗಳು, ಖುಷಿಕೊಡುವ ನಾನಾ ಬಗೆಯ ಮೋಜಿನ ಆಟಗಳು, ಕುಣಿದು ಕುಪ್ಪಿಸುವ ಮ್ಯೂಸಿಕ್ ಸೇರಿದಂತೆ ಇನ್ನೂ ಹಲವು ಅವಿಸ್ಮರಣೀಯ ಚಟುವಟಿಕೆಗಳನ್ನು ಭಾಗಿಯಾಗಿ ಸಂತಸ ಪಟ್ಟರು.
ಜತೆಗೆ ವಿದ್ಯಾ ವೆಂಕಟ್, ಮೊಹಮ್ಮದ್ ಜಹೀರ್ ಅವರಿಂದ ರೆಟ್ರೋ ಹಾಡುಗಳು ಮೂಡಿಬಂದವು. ಕಾರ್ಯಕ್ರಮದಲ್ಲಿ ನೂರಾರು ಆಕಾಶ ಬುಟ್ಟಿಗಳು, ಕಾಗದಿಂದ ತಯಾರಿಸಿದ ಅಲಂಕಾರಿಕ ವಸ್ತುಗಳು, ಗೃಹಲಂಕಾರಿ ವಸ್ತುಗಳ ಪ್ರದರ್ಶನ ನಡೆಯಿತು ಇದು ಕ್ರಿಸ್ ಮಸ್ ತಿಂಗಳಾಗಿರುವುದರಿಂದ ಸಾಂತಾ ಕ್ಲಾಸ್, ವಿಶೇಷ ಮುಖವಾಡಗಳು, ಮಕ್ಕಳು ಹಾಗೂ ಶಿಕ್ಷಕರು ಸೇರಿ ತಯಾರಿಸಿದ ಕ್ರಿಸ್ ಮಸ್ ಟ್ರೀ, ಅಲಂಕಾರಿಕ ಉತ್ಪನ್ನಗಳಾದ ಬಳೆ, ಸರಗಳು, ಚಿತ್ರಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.