ದೀಪಾವಳಿ ಪಟಾಕಿಯೊಂದಿಗೆ ನಮ್ಮ 'ಇಗೋ' ಸುಟ್ಟರೆ ಹೇಗೆ?
ಬೆಂಗಳೂರು, ಅ.24: ದೀಪಾವಳಿ ಎಂದರೆ ತಮಾಷೆ, ವಿಶೇಷ ಆಹಾರ, ಸಂಭ್ರಮ, ಸಂತಸಕ್ಕೆ ಹೆಸರುವಾಸಿ. ದೀಪಗಳ ಹಬ್ಬದ ಸಂಭ್ರಮಕ್ಕೆ ಕೊನೆಯೆ ಇಲ್ಲ. ಅನೇಕರ ಬಾಳಲ್ಲಿ ಕವಿದಿದ್ದ ಅಂಧಕಾರವನ್ನು ಹೊಡೆದೊಡಿಸಿವ ಶಕ್ತಿ ದೀಪಗಳ ಹಬ್ಬಕ್ಕಿದೆ. ಬಡತನ, ಅಸಹಾಯಕತೆ, ನಿರುದ್ಯೋಗದಂಥ ಸಮಸ್ಯೆಗಳಿಗೆ ಹಬ್ಬ ಉತ್ತರ ನೀಡಬಹುದೆ?
ನಮ್ಮ 'ಇಗೋ'ಗಳನ್ನು ಪಟಾಕಿಯೊಂದಿಗೆ ಸುಟ್ಟುಹಾಕಿ ಬಿಡೋಣ. ನಮ್ಮ ಕುಟುಂಬವನ್ನು ಮನೆಯನ್ನು ಜ್ಞಾನದ ಬೆಳಕಿನಿಂದ ಅಲಂಕರಿಸೋಣ. ಹೌದು ನಾವು ಬೇರೆಯವರಿಗೆ ಇಷ್ಟೆಲ್ಲಾ ಉಪದೇಶ ನೀಡುತ್ತೆವಲ್ಲಾ, ನಿಜವಾಗಿ ಒಂದೂ ಅಂಶವನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೆವೆಯೇ? ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.[ಈ ದೀಪಾವಳಿಯಂದು ನೀವು ಏನೇನು ಮಾಡಿದಿರಿ?]
ಈ ಬಗೆಯ ಪ್ರಶ್ನೆಗಳಿಗೆ ನಮ್ಮ ನಿತ್ಯ ಜೀವನದಲ್ಲಿ ಎದುರಾಗುವ ಅನೇಕರು ಉತ್ತರವಾಗಬಲ್ಲರು. ಆತ ಚಹಾ ಮಾರುವ ರಾಜಣ್ಣನಿರಬಹುದು, ಇಲ್ಲಾ, ನಿತ್ಯ ಜನರ ಪ್ರಾಣ ಕಾಪಾಡುತ್ತಿರುವ ಟ್ರಾಫಿಕ್ ಪೊಲೀಸ್ ಇರಬಹುದು, ರೆಸ್ಟೊರೆಂಟ್ ಗಳ ಸಪ್ಲಾಯರ್ ಇರಬಹುದು.
ಇವರನ್ನೆಲ್ಲ ಒತ್ತಟ್ಟಿಗೆ ಇಡಿ. ಬಿಸಿಲು ಚಳಿ ಲೆಕ್ಕಿಸದೇ ಗಡಿ ಕಾಯುತ್ತಿರುವ ಯೋಧನಿಗೆ ಏನನ್ನೋಣ! ಒಂದು ಸೆಲ್ಯೂಟ್ ಮಾತ್ರ ನೀಡಬಹುದಷ್ಟೇ. ಬ್ರೇಕಿಂಗ್ ನ್ಯೂಸ್ ಗಾಗಿ ಆಹಾರ, ನಿದ್ರೆ ಬಿಟ್ಟು ಹಪಹಪಿಸುವ ಪತ್ರಕರ್ತರು ಇವರಿಗಿಂಥ ಕಡಿಮೆ ಏನಿಲ್ಲ ಬಿಡಿ.
ನಮ್ಮದೇ ಲೋಕದಲ್ಲಿ ಸಂಚರಿಸುತ್ತ ಹಬ್ಬವೆಂದರೆ ಅದೇನೋ ಕಲ್ಪನೆ ಕಟ್ಟಿಕೊಂಡಿರುವ ನಮಗೆ ಆಡಂಬರವೇ ಜೀವನ. ತರಕಾರಿ ಮಾರುವವನ ಮಗನ ಮುಖದಲ್ಲಿ ನಗುವರಳಿಸಲು ಈ ರಜಾದಿನದಲ್ಲಿ ಏನಾದರೂ ಮಾಡಿದ್ದೆವೆಯೇ? ಉತ್ತರ ಶೂನ್ಯ. ದೀಪಾವಳಿ ದೀಪ ಆತನ ಬಾಳಲ್ಲಿ ಪ್ರಖರವಾಗಿ ಬೆಳಗಿದ್ದು ಅಷ್ಟಕಷ್ಟೆ.
ಆತ್ಮ ಚಿಂತನೆಗೆ ದೀಪಾವಳಿಯೇ ಆಗಬೇಕೆಂದೇನಿಲ್ಲ. ದೇಶ ಕಾಯುವ ಸೈನಿಕ, ಮಂಗಳಕ್ಕೆ ಉಪಗ್ರಹ ಕಳಿಸುವ ವಿಜ್ಞಾನಿ, ಹಣತೆ ತಯಾರು ಮಾಡುವ ಕುಂಬಾರ, ಎಣ್ಣೆ ನೀಡುವ ಗಾಣಿಗ ಎಲ್ಲರ ಮನೆಯ ದೀಪಗಳು ಪ್ರಜ್ವಲಿಸಬೇಕಿದೆ. ಅದಕ್ಕೆ ಸಾಮಾಜಿಕ ಚಿಂತನೆ ಬೆಳಯಬೇಕಿದೆ. ಇದೆಲ್ಲಾ ಬಿಡಿ ನಮ್ಮ ಮನೆಯ ದೀಪ ಬೆಳಗಲು ಕಾರಣವಾದ ಜನರಿಗೆ ಅಟ್ ಲೀಸ್ಟ್ ಒಂದು ಧನ್ಯವಾದ ವಾದರೂ ಹೇಳಲೇಬೇಕಿದೆ.