ವಿಮ್ಸ್ನಲ್ಲಿ ದುರಂತ: ಆರೋಗ್ಯ ಸಚಿವ, ವಿಮ್ಸ್ ನಿರ್ದೇಶಕರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ
ಬಳ್ಳಾರಿ, ಸೆಪ್ಟೆಂಬರ್ 17: ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಸ್ವಪಕ್ಷದ ಶಾಸಕ ಸೋಮಶೇಖರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಸಚಿವ ಸುಧಾಕರ್ ವಿರುದ್ಧ ಹರಿಹಾಯ್ದಿದ್ದು, ವಿಮ್ಸ್ ನಿರ್ದೇಶಕ, ಆರೋಗ್ಯ ಮಂತ್ರಿ ಸುಧಾಕರ್ ರಾಜೀನಾಮೆ ಕೊಡಬೇಕು ಎಂದು ಶಾಸಕ ನಾಗೇಂದ್ರ ಆಗ್ರಹಿಸಿದ್ದಾರೆ.
ವಿಮ್ಸ್ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಆಮ್ಲಜನಕ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗದೇ ಮೂವರು ರೋಗಿಗಳು ಮೃತಪಟ್ಟಿದ್ದರು. ಈ ಘಟನೆಗೆ ಜಿಲ್ಲೆಯಾದ್ಯಂತ ಟೀಕೆಗೆ ಒಳಗಾಗಿತ್ತು. ಮುಂಗಾರು ಅಧಿವೇಶನದಲ್ಲೂ ಸಿದ್ದರಾಮಯ್ಯ ಸೇರಿದಂತೆ ಹಲವಾರು ಮಂದಿ ಆಕ್ರೋಶ ಸರಕಾರದ ವಿರುದ್ಧ ಕಿಡಿ ಕಾರಿದ್ದರು.
ಶನಿವಾರ ವಿಮ್ಸ್ ದುರಂತ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ನಾಗೇಂದ್ರ ಮಾತನಾಡಿ, "ಬಡವರ ಜೀವ ಕಾಪಾಡುವುದಕ್ಕೆ ಆಗಿಲ್ಲ ಎಂದಮೇಲೆ ಶಾಸಕರಾಗಿ ಏಕಿರಬೇಕು, ಮಂತ್ರಿಗಳಾಗಿ ಏಕಿರಬೇಕು, ರಾಜೀನಾಮೆ ಕೊಟ್ಟು ಮನೆಗಳಿಗೆ ಹೋಗಲಿ," ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಈ ಅವಿವೇಕಿ ವೈದ್ಯಕೀಯ ಶಿಕ್ಷಣ ಸಚಿವ ಅಂತಾ ಬಹಳ ದೊಡ್ಡದಾಗಿ ಬಿಂಬಿಸಿಕೊಂಡು ಓಡಾಡುತ್ತಾರೆ. ನಮ್ಮ ಬಳ್ಳಾರಿಯಲ್ಲಿ ಬಡ ಜನ ಸಾಯುತ್ತಿದ್ದಾರೆ, ನಿಮ್ಮ ಸ್ವಾರ್ಥಕ್ಕಾಗಿ ಹಾಗೂ ಇಲ್ಲಿ ಹಣ ಲೂಟಿ ಮಾಡಲು ಯಾರನ್ನೋ ಅಧಿಕಾರಿಯನ್ನಾಗಿ ಕೂರಿಸಿದ್ದೀರಿ, ವಿಮ್ಸ್ನಲ್ಲಿ ಸಾವಿರಾರು ಕೋಟಿ ಲೂಟಿ ಹೊಡಿತ್ತಿದ್ದಾರೆ, ದುಡ್ಡು ಹೊಡೆಯಲು ತಮಗೆ ಬೇಕಾದ ಅಧಿಕಾರಿಗಳನ್ನ ಇಲ್ಲಿ ಬಿಟ್ಟಿದ್ದಾರೆ. ಕಾಡಾನೆಗಳು ಯಾವ ರೀತಿ ಕಾಡನ್ನ ಧ್ವಂಸ ಮಾಡುತ್ತಾವೋ, ಹಾಗೆ ಬಳ್ಳಾರಿಯನ್ನ ಬಿಜೆಪಿಯವರು ಧ್ವಂಸ ಮಾಡುತ್ತಿದ್ದಾರೆ" ಎಂದರು
25 ಲಕ್ಷ ರೂ.ಗಳ ಪರಿಹಾರ ನೀಡಬೇಕು
ದುರಂತದಲ್ಲಿ ಮೃತ ಕುಟುಂಬಗಳಿಗೆ 25 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿತ್ತು, ಆದರೆ ಸರಕಾರ ಕೇವಲ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ. ಪರಿಹಾರ ಮೊತ್ತವನ್ನು ಹೆಚ್ಚಿಗೆ ನೀಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಗೆ ವಹಿಸಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ನಾಳೆಯು ಪ್ರತಿಭಟನೆ ಮಾಡುತ್ತೇವೆ ಎಂದರು.
ಇದೆಲ್ಲಾ ಷಡ್ಯಂತ್ರ ಎಂದ ನಿರ್ದೇಶಕ

ಮೂರು ವರ್ಷಗಳ ಅವಧಿಗೆ ನಾನು ವಿಮ್ಸ್ ಖಾಯಂ ನಿರ್ದೇಶಕನಾಗಿ ನೇಮಕವಾಗಿ ಬಂದಿರುವುದನ್ನು ಸಹಿಸದ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಆರೋಪಿಸಿದ್ದಾರೆ.
ವಿದ್ಯುತ್ ಪೂರೈಕೆ ವ್ಯತ್ಯಯ ವಿಚಾರ ಸಹಜವಾಗಿ ಆಗಿರುವುದಲ್ಲ, ಇದರ ಹಿಂದೆ ಷಡ್ಯಂತ್ರ ಇರುವಂತೆ ಕಾಣುತ್ತಿದೆ, ಇದಕ್ಕೆ ಸಂಬಂಧಿಸಿ ನನ್ನ ಬಳಿ ದಾಖಲೆಗಳಿವೆ. ವಿಮ್ಸ್ ನಲ್ಲಿ ನಡೆದಿರುವ ಈ ಘಟನೆ ಕೆಲವರಿಂದ ನಡೆಸಿರುವ ದುರುದ್ದೇಶದ ಸಂಚು. ಈ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ದುರುದ್ದೇಶದ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಸಮಗ್ರ ಮಾಹಿತಿ ಹಾಗೂ ದಾಖಲಾತಿ ಸಂಗ್ರಹಿಸಿ ಎಫ್ಐಆರ್ ದಾಖಲಿಸುವೆ. ಕೆಲವೇ ದಿನಗಳಲ್ಲಿ ಈ ಪ್ರಕರಣದ ಬಗ್ಗೆ ನಿಜಾಂಶ ಹೊರಬರಲಿದೆ ಎಂದಿದ್ದಾರೆ.












Click it and Unblock the Notifications