ವಿಜಯನಗರ: ಕಾಂಗ್ರೆಸ್ಗೆ ಮರಳಲಿರುವ ಗವಿಯಪ್ಪ, ಸ್ಥಳೀಯ ಕೈ ಮುಖಂಡರಿಂದ ರಾಜೀನಾಮೆ ಪರ್ವ
ಬಳ್ಳಾರಿ, ಸೆಪ್ಟೆಂಬರ್, 09: ಬಿಜೆಪಿ ಮುಖಂಡ ಹೆಚ್.ಆರ್.ಗವಿಯಪ್ಪ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್ಗೆ ಸೇರ್ಪಡೆ ಆಗಲಿದ್ದಾರೆಂಬ ಮಾಹಿತಿ ಹೊರ ಬಿದ್ದಿದೆ. ಈ ವಿಷಯವನ್ನು ತಿಳಿಯುತ್ತಿದ್ದಂತೆ ಹೊಸಪೇಟೆ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ಗವಿಯಪ್ಪ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕಾಂಗ್ರೆಸ್ ಎಲ್ಲ ತಯಾರಿ ಮಾಡಿಕೊಂಡಿದ್ದು, ಇಂದು ಗವಿಯಪ್ಪ ತಮ್ಮ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಈ ವಿಷಯ ಬಹಿರಂಗ ಆಗುತ್ತಿದ್ದಂತೆ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ನ ಎಲ್ಲ ಪದಾಧಿಕಾರಿಗಳು ಹಾಗೂ ಕಮಲಾಪುರ ಬ್ಲಾಕ್ ಕಾಂಗ್ರೆಸ್ನ ಎಲ್ಲ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಗವಿಯಪ್ಪ ಸೇರ್ಪಡೆಗೆ ಪಕ್ಷದೊಳಗಿನಿಂದಲೇ ಭಿನ್ನಮತ ಸ್ಫೋಟಗೊಂಡಿದೆ.
ಕಾಂಗ್ರೆಸ್ ಪಕ್ಷದಲ್ಲಿಯೂ ರಾಜೀನಾಮೆ ಪರ್ವ:
ಇತ್ತೀಚೆಗೆ ಪಕ್ಷದಲ್ಲಿಯೇ ಆಗಿರುವ ಬೆಳವಣಿಗೆಗಳಿಂದಾಗಿ ಹೊಸಪೇಟೆ, ಕಮಲಾಪುರ ಬ್ಲಾಕ್ ಹಾಗೂ ಎಲ್ಲ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಹಿರಿಯ ಮುಖಂಡರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಸಾಮೂಹಿಕ ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕಳಿಸಿದ್ದಾರೆ. ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್, ಪ್ರಧಾನ ಕಾರ್ಯದರ್ಶಿ ಕೆ.ಪಾಂಡು ಸೇರಿದಂತೆ ಎಲ್ಲ ಪದಾಧಿಕಾರಿಗಳು, ಸದಸ್ಯರು ರಾಜೀನಾಮೆ ನೀಡಿದ್ದಾರೆ. ಅದೇ ರೀತಿ ಕಮಲಾಪುರ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷ ಕಾಜಾ ಹುಸೇನ್, ಪ್ರಧಾನ ಕಾರ್ಯದರ್ಶಿ ಬಿ.ವೀರಭದ್ರ ನಾಯಕ ಸೇರಿದಂತೆ ಎಲ್ಲ ಪದಾಧಿಕಾರಿಗಳು ಹಾಗೂ ಹಿರಿಯ ಮುಖಂಡರು ರಾಜೀನಾಮೆ ನೀಡಿದ್ದಾರೆ.

ಗವಿಯಪ್ಪಗೆ ಕ್ಷೇತ್ರದಿಂದ ಟಿಕೆಟ್ ನಿರಾಕರಣೆ:
ಹೊಸಪೇಟೆ, ಕಮಲಾಪುರ ಸೇರಿದಂತೆ ಒಟ್ಟು 80 ಜನರು ರಾಜೀನಾಮೆ ನೀಡಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ. ಈ ಹಿಂದೆ ಗವಿಯಪ್ಪ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ಸೇರಿದ್ದರು. ಬದಲಾದ ರಾಜಕೀಯ ವಿದ್ಯಮಾನದಲ್ಲಿ ಅವರು ಬಿಜೆಪಿಗೆ ಸೇರಿದ್ದರು.
2018ರಲ್ಲಿ ಆನಂದ್ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಗವಿಯಪ್ಪ ಅವರಿಗೆ ವಿಜಯನಗರ ಕ್ಷೇತ್ರದಿಂದ ಸ್ಪರ್ಧೆಗೆ ಟಿಕೆಟ್ ನಿರಾಕರಿಸಲಾಗಿತ್ತು. ಅವರು ಬಿಜೆಪಿ ಸೇರ್ಪಡೆ ಆಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಪೈಪೋಟಿ ನೀಡಿ ಆನಂದ್ ಸಿಂಗ್ ವಿರುದ್ಧ ಸೋಲು ಕಂಡಿದ್ದರು. ನಂತರ ಆನಂದ್ ಸಿಂಗ್ ಕಾಂಗ್ರೆಸ್ನಿಂದ ಬಿಜೆಪಿಗೆ ಮರಳಿ ಬಂದು, ಬಿಜೆಪಿಯಿಂದ ಗೆದ್ದಿದ್ದರು. ಈಗ ಆನಂದ್ ಸಿಂಗ್ ಬಿಜೆಪಿಯಿಂದ ಗೆದ್ದು ಸಚಿವರಾಗಿರುವ ಹಿನ್ನೆಲೆಯಲ್ಲಿ ಮತ್ತೆ ಅವರು ಕಾಂಗ್ರೆಸ್ ಸೇರುವ ಪ್ರಯತ್ನವನ್ನು ಮಾಡಿದ್ದರು.

ಕಾಂಗ್ರೆಸ್ ಸೇರ್ಪಡೆ ಆಗಲಿರುವ ಗವಿಯಪ್ಪ:
ಕಳೆದ ಚುನಾವಣೆಯಿಂದಲೂ ತಟಸ್ಥರಾಗಿದ್ದ ಗವಿಯಪ್ಪ ಅಂತಿಮವಾಗಿ ಸ್ವಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸಿದ್ದು, ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಪಕ್ಷ ಸೇರಲಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಸಂಸದರು ಆಗಿರುವ ಹೆಚ್. ಜಿ. ರಾಮುಲು ಕುಟುಂಬ ಮೊದಲಿನಿಂದಲೂ ಹೈದ್ರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಶಕ್ತಿ ಆಗಿತ್ತು. ಕಳೆದ ಚುನಾವಣೆಯಲ್ಲಿ ಕಾಂಗ್ರಸ್ನ ಕೆಲ ನಾಯಕರ ವರ್ತನೆಯಿಂದ ಬಿಜೆಪಿ ಸೇರಿದ್ದರು. ಹಾಗೂ ಅಲ್ಲಿಯೂ ಸದ್ಯ ಸಚಿವರಾಗಿರುವ ಆನಂದ ಸಿಂಗ್ ಅವರು ಮೂಲೆಗುಂಪಾಗುವಂತೆ ಮಾಡಿದ್ದರು. ಇದರಿಂದ ಬೇಸರಗೊಂಡಿದ್ದ ಗವಿಯಪ್ಪ ತಟಸ್ಥರಾಗಿದ್ದರು. ಈ ಚುನಾವಣೆಯು ಬದಲಾವಣೆಯ ಸಂಕೇತವಾಗಿದ್ದು, ಸ್ವತಂತ್ರವಾಗಿಯಾದರೂ ಈ ಬಾರಿ ಸ್ಪರ್ಧಿಸಿಯೇ ಸಿದ್ದ ಎಂದು ಕೆಲ ತಿಂಗಳುಗಳಿಂದ ಅತ್ಯಂತ ಕ್ರಿಯಾಶೀಲವಾಗಿ ಪ್ರಚಾರ ಆರಂಭಿಸಿದ್ದ ಗವಿಯಪ್ಪ, ಇದೀಗ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ರಾಜ್ಯ ಮುಖಂಡರ ಸಮಕ್ಷಮ ಪಕ್ಷ ಸೇರ್ಪಡೆ ಆಗಲಿರುವ ಗವಿಯಪ್ಪ, ಹೊಸಪೇಟೆಯಲ್ಲಿ ಹೊಸ ಬದಲಾವಣೆಯ ತರಲು ಮುಂದಾಗಿದ್ದಾರೆ. ಆದರೆ ಅಲ್ಲಿ ಸ್ಥಳೀಯ ಆಕಾಂಕ್ಷಿಗಳ ದೊಡ್ಡ ಪಡೆಯೇ ಇರುವುದರಿಂದ ಇವುಗಳನ್ನು ಮೆಟ್ಟಿನಿಂತು ಹೇಗೆ ಮುನ್ನಡೆಯುತ್ತಾರೆಯೋ ಕಾದುನೊಡಬೇಕು.












Click it and Unblock the Notifications