ಬಸ್ ದರ ಹೆಚ್ಚಳ ಕುರಿತು ಸ್ಪಷ್ಟನೆ ಕೊಟ್ಟ ಸಾರಿಗೆ ಸಚಿವ ಸವದಿ
ಬಳ್ಳಾರಿ, ಜನವರಿ 26: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ದಿನಕ್ಕೆ ಒಂದು ಕೋಟಿ ನಷ್ಟ ಆಗುತ್ತಿದೆ, ಅದೇ ರೀತಿಯಲ್ಲಿ ವಿವಿಧ ಸಾರಿಗೆ ವಿಭಾಗಗಳು ಸಹ ನಷ್ಟದಲ್ಲಿ ಸಾಗುತ್ತಿವೆ. ಆದರೆ ಅದನ್ನು ಸರಿದೂಗಿಸಲು ಬಸ್ ದರ ಹೆಚ್ಚಳ ಮಾಡಲ್ಲಾ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಇಂದು 71 ನೇ ಗಣರಾಜೋತ್ಸವ ನಿಮ್ಮಿತ್ತ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಸಚಿವರು, ಸಾರಿಗೆ ಇಲಾಖೆ ಬಹುದೊಡ್ಡ ಇಲಾಖೆ, ಕೆಲವೊಂದು ವಿಭಾಗದಲ್ಲಿ ಲೋಪದೋಷಗಳನ್ನು ಸರಿ ಮಾಡಬೇಕಿದೆ, ಹೀಗಾಗಿ ಸಾರಿಗೆ ಇಲಾಖೆಯಲ್ಲಿ ಕೆಲ ಬದಲಾವಣೆಗಳನ್ನು ತರಲು ಸರ್ಕಾರ ನಿರ್ಧಾರ ಮಾಡಿದೆ ಎಂದರು.
ಇನ್ನು ಬೆಂಗಳೂರಿನಲ್ಲಿ ಮೆಟ್ರೋ ಟ್ರೇನ್ ಬಂದ ಬಳಿಕ ಸಾರಿಗೆ ಬಸ್ ನಲ್ಲಿ ಸಂಚಾರ ಮಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಡೀಸೆಲ್, ಇಂಜಿನ್ ಬಿಡಿಭಾಗಗಳ ಬೆಲೆಯೂ ಸಹ ಹೆಚ್ಚಾಗಿದ್ದರಿಂದ ಸಾರಿಗೆ ಇಲಾಖೆಯ ನಷ್ಟ ಅನುಭವಿಸುತ್ತಿದೆ ಎಂದು ಹೇಳಿದರು.

ಬೆಂಗಳೂರು ಸೇರಿದಂತೆ ಆಯ್ದ ಕೆಲ ನಗರದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಆರಂಭಿಸಲು ವಿದೇಶಿ ಕಂಪನಿಗಳು ಮುಂದೆ ಬಂದಿದ್ದು, ಕಂಪನಿಗಳೇ ನೇರವಾಗಿ ಬಂಡವಾಳ ಹೂಡಿ, ಬಸ್ ಗಳನ್ನು ರಸ್ತೆಗೆ ಇಳಿಸಲು ಮುಂದಾಗಿವೆ. ಬರುವ ಲಾಭಾಂಶದಲ್ಲಿ ಸರ್ಕಾರ ಮತ್ತು ಕಂಪನಿಗಳು ಪ್ರತಿಶತ 40:60 ಅನುಪಾತದಲ್ಲಿ ಹಂಚಿಕೊಳ್ಳಲು ಮುಂದಾಗಿವೆ ಎಂದು ಮಾಹಿತಿ ನೀಡಿದರು.
ಇದೇ ವೇಳೆಯಲ್ಲಿ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, ಒಂದು ದೇಶ ಒಂದು ತೆರಿಗೆ ಯೋಜನೆಯನ್ನು ಹೇಗೆ ಕೇಂದ್ರ ಸರ್ಕಾರ ಜಾರಿಗೆ ತಂದಿದೆಯೋ, ಅದೇ ರೀತಿಯಾಗಿ ದೇಶದಲ್ಲಿ ಒಂದೇ ಸಾರಿಗೆ ನಿಯಮ ತರುವಂತೆ ಚಿಂತನೆ ನಡೆದಿದೆ. ಬೆಲೆ ಬಾಳುವ ಕಾರ್ ಗಳನ್ನು ಖರೀದಿ ಮಾಡಿ ಹೊರ ರಾಜ್ಯದಲ್ಲಿ ನೋಂದಣಿ ಮಾಡಿಸುತ್ತಾರೆ. ಈ ಕಾರಣದಿಂದ ರಾಜ್ಯದಲ್ಲಿ ಸಾರಿಗೆ ಮತ್ತು ರಸ್ತೆ ತೆರಿಗೆ ಹೆಚ್ಚಾಗಿದೆ ಎಂದರು.
ಜನರು ಹಣ ಉಳಿಸಲು ಬೇರೆ ರಾಜ್ಯಕ್ಕೆ ಹೋಗುತ್ತಿದ್ದಾರೆ. ಇದರಿಂದ ಈ ವರ್ಷ ರಾಜ್ಯಕ್ಕೆ ಸುಮಾರು ಒಂದು ಸಾವಿರ ಕೋಟಿ ರೂ, ನಷ್ಟವಾಗಿದೆ. ರಾಜ್ಯದ ಆದಾಯ ಬೇರೆ ರಾಜ್ಯಕ್ಕೆ ಹೋಗುತ್ತಿದ್ದು, ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಕೇಂದ್ರದ ಜೊತೆ ಮಾತನಾಡಿ ಒಂದೇ ಸಾರಿಗೆ ನಿಯಮ ತರಲು ಮುಂದಿನ ವಾರ ಸಭೆ ಸೇರಲಿದೆ ಎಂದು ತಿಳಿಸಿದರು.












Click it and Unblock the Notifications