ಹೂವಿನಹಡಗಲಿಯಲ್ಲಿ ಪರಮೇಶ್ವರನಾಯ್ಕಗೆ ಮುಳ್ಳಿನ ಹಾದಿ
ಹೂವಿನಹಡಗಲಿ (ಬಳ್ಳಾರಿ), ಮಾರ್ಚ್ 30: ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಗೆಲುವು ಸಾಧಿಸಿದವರು ಮತ್ತೊಮ್ಮೆ ಗೆಲ್ಲುವುದೇ ಇಲ್ಲ. ಇದು ಕ್ಷೇತ್ರದ ಇತಿಹಾಸ. ಆದರೆ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಆದ ನಂತರ ಪಿ.ಟಿ. ಪರಮೇಶ್ವರನಾಯ್ಕ ಎರಡು ಬಾರಿ ಗೆಲುವು ಸಾಧಿಸಿ, ಜಿಲ್ಲಾ ಉಸ್ತುವಾರಿ ಸಚಿವರೂ ಆದರು.
ಆರಂಭದಲ್ಲಿ ಎಂ.ಪಿ. ಪ್ರಕಾಶ್ ಅವರ 'ವಾರಸುದಾರ' ಎಂದು ಸ್ವಯಂ ಬಿಂಬಿಸಿಕೊಂಡಿದ್ದ ಪಿ.ಟಿ. ಪರಮೇಶ್ವರನಾಯ್ಕ, ಎಂ.ಪಿ. ಪ್ರಕಾಶ್ ಪತ್ನಿ ರುದ್ರಾಂಬಿಕಾ, ಪುತ್ರ ಶಾಸಕ ಎಂ.ಪಿ. ರವೀಂದ್ರ ವಿರುದ್ಧ ಬಹಿರಂಗವಾಗಿ ನಿಂತಿದ್ದು ಕ್ಷೇತ್ರದ ಅನೇಕರನ್ನು ಬೆಚ್ಚಿಬೀಳಿಸಿತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಂ.ಪಿ. ಪ್ರಕಾಶ್ ಕುಟುಂಬಕ್ಕೆ ತಿರುಗಿಬಿದ್ದಂತೆಯೇ ಅವರ ರಾಜಕೀಯ ಗುರು, ಹಿರಿಯ ಕಾಂಗ್ರೆಸ್ಸಿಗ, ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಅವರಿಗೂ ತಿರುಗೇಟು ನೀಡಿದ್ದು ಅನೇಕರಲ್ಲಿ ಚರ್ಚೆಯಲ್ಲಿದೆ. ಕೆ.ಸಿ. ಕೊಂಡಯ್ಯ ಅವರೇ 'ನನ್ನ ರಾಜಕೀಯ ಗುರು' ಎನ್ನುತ್ತಿದ್ದ ಪರಮೇಶ್ವರ ನಾಯ್ಕ, ಕಾಲ ಕ್ರಮೇಣ ಅವರ ವಿರುದ್ಧ ಧ್ವನಿ ಎತ್ತಿದ್ದೂ ಅಲ್ಲದೆ, ಕೊಂಡಯ್ಯ ಅವರಿಗೆ ವಿಧಾನಪರಿಷತ್ ಟಿಕೆಟ್ ಸಿಗದಂತೆ ದೆಹಲಿ - ಬೆಂಗಳೂರಿನಲ್ಲಿ ಲಾಬಿ ನಡೆಸಿದ್ದರು.
ಅನುಪಮಾ ಶೆಣೈ ಪ್ರಕರಣದಲ್ಲಿ ಮುಖಭಂಗ
ಕೂಡ್ಲಿಗಿ ಡಿವೈಎಸ್ ಪಿ ಆಗಿದ್ದ ಅನುಪಮಾ ಶೆಣೈ ಅವರನ್ನು ಇಂಡಿಗೆ ಒಒಡಿ ಮೇಲೆ ವರ್ಗಾವಣೆ ಮಾಡಿಸಿ, ಬಹಿರಂಗವಾಗಿ ಹೇಳಿಕೆ ನೀಡಿ ತೀವ್ರ ವಿವಾದಕ್ಕೆ ಗುರಿ ಆಗಿದ್ದ ಪಿ.ಟಿ. ಪರಮೇಶ್ವರನಾಯ್ಕ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲಾಯಿತು. ಆ ನಂತರ ಕ್ಷೇತ್ರದ ಅಭಿವೃದ್ಧಿಯತ್ತ ಹೆಚ್ಚಿನ ಗಮನ ನೀಡಿದ್ದ ಶಾಸಕ, ಗುತ್ತಿಗೆದಾರರಿಂದ ಕಮಿಷನ್ ಪಡೆದ ಆರೋಪಕ್ಕೂ ಗುರಿ ಆದರು.
ಮೂಲತಃ ಹರಪನಹಳ್ಳಿಯವರು
ಮೂಲತಃ ಹರಪನಹಳ್ಳಿಯವರಾಗಿರುವ ಪಿ.ಟಿ. ಪರಮೇಶ್ವರನಾಯ್ಕ ಅವರು ಕ್ಷೇತ್ರಗಳ ಪುನರ್ ವಿಂಗಡಣೆಯ ನಂತರ 2008ರಲ್ಲಿ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸೋಲನುಭವಿಸಿದ್ದರು. ಆಗ ಬಿಜೆಪಿಯ ಚಂದ್ರಾನಾಯ್ಕ ಅವರು ಗೆಲುವು ಸಾಧಿಸಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಿಂದ ಪುನಃ ಸ್ಪರ್ಧಿಸಿ, ಅಭೂತಪೂರ್ವ ಗೆಲುವು ಸಾಧಿಸಿದ್ದರು.
ಕಾಂಗ್ರೆಸ್ಸಿಗರಿಂದಲೇ ತೀವ್ರ ವಿರೋಧ
ಕಾಂಗ್ರೆಸ್ಸಿನ 'ಹಾಲಿ ಶಾಸಕರಿಗೆ ಟಿಕೆಟ್ ಗ್ಯಾರಂಟಿ' ನೀತಿಯಲ್ಲಿ ಪುನಃ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿರುವ ಪಿ.ಟಿ. ಪರಮೇಶ್ವರನಾಯ್ಕ ಅವರು ಇಲ್ಲಿ ಕಾಂಗ್ರೆಸ್ಸಿಗರಿಂದಲೇ ತೀವ್ರ ವಿರೋಧ ಎದುರಿಸುತ್ತಿದ್ದಾರೆ.
ಒಮ್ಮೆ ಗೆಲುವು, ಮತ್ತೊಮ್ಮೆ ಸೋಲು ಎಂಬ ನೀತಿ
ಎಂ.ಪಿ. ಪ್ರಕಾಶ್ ಅವರನ್ನು ಒಮ್ಮೆ ಗೆಲ್ಲಿಸಿ, ಮತ್ತೊಮ್ಮೆ ಸೋಲಿಸುತ್ತಿದ್ದ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಮತದಾರರು, ಪಿ.ಟಿ. ಪರಮೇಶ್ವರನಾಯ್ಕ ಅವರನ್ನೂ 2008 ರಲ್ಲಿ ಸೋಲಿಸಿ, 2013 ರಲ್ಲಿ ಗೆಲ್ಲಿಸಿದ್ದು ಸೋಲು - ಗೆಲುವಿನ ಸಂಪ್ರದಾಯ ಮುಂದುವರಿದಿತ್ತು. ಅಷ್ಟೇ ಅಲ್ಲ, ಕಾರ್ಮಿಕ ಇಲಾಖೆ ಸಚಿವರಾದವರು ಪುನರಾಯ್ಕೆ ಆಗುವುದಿಲ್ಲ ಎನ್ನುವ ಮಾತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ.
ಗೆಲುವು ಸಾಧಿಸಿದರೆ ಇತಿಹಾಸ ಸೃಷ್ಟಿ
ಅದರಂತೆ, 'ಸೋಲು - ಗೆಲುವು' ಸಂಪ್ರದಾಯ ಮುಂದುವರಿದಿದ್ದೇ ಆದಲ್ಲಿ ಪಿ.ಟಿ. ಪರಮೇಶ್ವರನಾಯ್ಕ ಅವರನ್ನು ಕಾಂಗ್ರೆಸ್ಸಿಗರೇ ಸೋಲಿಸುವ ಪಟ್ಟು ಹಿಡಿದು, ಹಗಲಿರುಳೂ ಅದಕ್ಕಾಗಿ ಶ್ರಮಿಸುತ್ತಿರುವುದು ಗಮನಾರ್ಹ. ಸ್ವಪಕ್ಷೀಯರ ವಿರೋಧದ ಮಧ್ಯೆಯೂ ಪಿ.ಟಿ. ಪರಮೇಶ್ವರನಾಯ್ಕ ಅವರು ಗೆಲುವು ಸಾಧಿಸಿದಲ್ಲಿ ಇತಿಹಾಸವನ್ನೇ ಸೃಷ್ಟಿ ಮಾಡಲಿದ್ದಾರೆ.