ಹಂಪಿ ಉತ್ಸವಕ್ಕೆ ಕೊನೆಗೂ ಮುಹೂರ್ತ ಫಿಕ್ಸ್
ಬೆಂಗಳೂರು, ಆಗಸ್ಟ್ 16: ಕಳೆದ ಒಂದೂವರೆ ದಶಕದಿಂದ ಆಚರಿಸಿಕೊಂಡು ಬಂದಿದ್ದ ಹಂಪಿ ಉತ್ಸವಕ್ಕೆ ಕವಿದಿದ್ದ ಕಾರ್ಮೋಡ ಕೊನೆಗೂ ದೂರ ಸರಿದಂತಾಗಿದೆ. ಬಳ್ಳಾರಿ ಜಿಲ್ಲಾ ಉಸ್ತವಾರಿ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಗುರುವಾರ ಈ ಬಾರಿ ಹಂಪಿ ಉತ್ಸವ ನಡೆಯಲಿದೆ ಎಂದು ಕೊನೆಗೂ ಘೋಷಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಂಪಿ ಉತ್ಸವಕ್ಕೆಂದೇ 10ಕೋಟಿ ರೂ,ಗಳ ಅನುದಾನವನ್ನು ತೆಗೆದಿರಿಸುತ್ತಿತ್ತು, ಆದರೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಬಜೆಟ್ನಲ್ಲಿ ಹಂಪಿ ಉತ್ಸವಕ್ಕೆ ಯಾವುದೇ ಅನುದಾನವನ್ನು ತೆಗೆದಿರಿಸಿರಲಿಲ್ಲ.
ದಶಕಗಳ ಹಂಪಿ ಉತ್ಸವಕ್ಕೆ ಸರ್ಕಾರದ ತಿಲಾಂಜಲಿ?
ಈ ಹಿನ್ನೆಲೆಯಲ್ಲಿ ಈ ವರ್ಷ ಹಂಪಿ ಉತ್ಸವ ನಡೆಯುವುದಿಲ್ಲವೆಂದೇ ಭಾವಿಸಲಾಗಿತ್ತು. ಆದರೆ ಬಳ್ಳಾರಿ ಉಸ್ತುವಾರಿ ಸಚಿವರಾಗಿ ಅಧಿಕಾರವಹಿಸಿಕೊಂಡ ಬಳಿಕ ಇದೇ ಮೊದಲ ಬುಧವಾರ ಧ್ವಜಾರೋಹಣ ನೆರವೇರಿಸಿದ ಡಿಕೆ ಶಿವಕುಮಾರ್ ಗುರುವಾರ ಜಿಲ್ಲಾ ಅಭಿವೃದ್ಧಿ ಸಭೆ ನಡೆಸಿ ಈ ಬಾರಿ ಹಂಪಿ ಉತ್ಸವ ನಡೆಯಲಿದೆ ಎಂದು ಪ್ರಕಟಿಸಿದರು.
ರಾಜ್ಯ ಸರ್ಕಾರ ಹಂಪಿ ಉತ್ಸವಕ್ಕೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲವಾದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಸಂಪನ್ಮೂಲ ಕ್ರೋಢೀಕರಿಸಿ ಹಂಪಿ ಉತ್ಸವ ನೆರವೇರಿಸುವುದಾಗಿ ಹಂಪಿ ಉತ್ಸವ ನಡೆಸುವುದಾಗಿ ಡಿಕೆ ಶಿವಕುಮಾರ್ ಸಮಜಾಯಿಷಿ ನೀಡಿದರು.
ನವೆಂಬರ್ 3ರಿಂದ 5ರವರೆಗೆ ಮೂರು ದಿನಗಳ ಕಾಲ ಪ್ರತಿ ವರ್ಷದಂತೆ ಅದ್ಧೂರಿಯಾಗಿ ಹಂಪಿ ಉತ್ಸವ ನೆರವೇರಲಿದೆ, ಉತ್ಸವದ ಯಶಸ್ವಿಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.