ಹೊಸಪೇಟೆಯಲ್ಲಿ ರಾಹುಲ್ ಸಮಾವೇಶ, ವಿಶೇಷತೆಗಳೇನು?
ಬಳ್ಳಾರಿ, ಫೆಬ್ರವರಿ 7 : ರಾಜ್ಯ ಮತ್ತು ರಾಷ್ಟ್ರ ಕಾಂಗ್ರೆಸ್ಸಿಗರ ಚಿತ್ತ ಬಳ್ಳಾರಿ ಜಿಲ್ಲೆಯ ಹೊಸಪೇಟೆಯತ್ತ ನೆಟ್ಟಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆ.10ರಂದು ಹೊಸಪೇಟೆಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಫೆ.10 ರಿಂದ ಮೂರು ದಿನಗಳ ಕಾಲ ರಾಹುಲ್ ಗಾಂಧಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.
ರಾಹುಲ್ ಗಾಂಧಿ ಪ್ರವಾಸವನ್ನು ಯಶಸ್ವಿಗೊಳಿಸಲು ಕೆಪಿಸಿಸಿ ಬಳ್ಳಾರಿ, ಕೊಪ್ಪಳ ಮತ್ತು ಕಲಬುರಗಿ ಜಿಲ್ಲೆಗಳ ಸ್ಥಳೀಯ ಮುಖಂಡರನ್ನು ಒಳಗೊಂಡ ಸ್ಥಳೀಯ ಸಮಿತಿಗಳನ್ನು ರಚಿಸಿ, ಪ್ರತ್ಯೇಕವಾಗಿ ಜವಾಬ್ದಾರಿಗಳನ್ನು ನೀಡಲಾಗಿದೆ. ಅಲ್ಲದೇ, ಸ್ಥಳೀಯ ಮುಖಂಡರನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಮಾಧ್ಯಮ ಸಮಿತಿ, ಊಟ, ವಸತಿ - ವ್ಯವಸ್ಥೆಯ ಸಮಿತಿ, ಜನರನ್ನು ಸಂಘಟಿಸುವ ಸಮಿತಿ, ಮಾರ್ಗಸೂಚಿ ಇನ್ನಿತರೆ ಸಮಿತಿಗಳಿವೆ. ಕೆಪಿಸಿಸಿ ಮುಖಂಡರು, ಗಣ್ಯರು, ಸಾರ್ವಜನಿಕ ಸಭೆಯ ಸಿದ್ಧತೆಗಳ ಹಿನ್ನಲೆಯಲ್ಲಿ ಹೊಸಪೇಟೆಗೆ ಧಾವಿಸಿ ಬರುತ್ತಿದ್ದಾರೆ.
ಗಣ್ಯರ ಆಹ್ವಾನ, ಸಾರಿಗೆ, ಆಸನಗಳ ವ್ಯವಸ್ಥೆ ಮತ್ತು ಪಾಸ್ಗಳ ವಿತರಣೆ ಎಲ್ಲವನ್ನೂ ಕೂಡ ಕೆಪಿಸಿಸಿ ಪ್ರತೀ ಹಂತದಲ್ಲಿ ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಲು ಅನುಭವಿಗಳ ತಂಡವನ್ನೇ ರಚಿಸಿದೆ. ಹೊಸಪೇಟೆಯ ತಾಲೂಕು ಪಂಚಾಯಿತಿಯ ಐದು ಎಕರೆ ಭೂಮಿಯ ಮೈದಾನದಲ್ಲಿ ಸಮಾವೇಶ ನಡೆಯಲಿದೆ.
ರಾಹುಲ್ಗಾಂಧಿ ಅವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ನೇರವಾಗಿ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ನೇರವಾಗಿ ಹೊಸಪೇಟೆಗೆ ಆಗಮಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಜಿಲ್ಲೆಯಾದ್ಯಂತ ಪ್ರವಾಸ : ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಮತ್ತು ಸಾರ್ವಜನಿಕರನ್ನು ಸಭೆಗೆ ಆಹ್ವಾನಿಸುತ್ತಿದ್ದಾರೆ.












Click it and Unblock the Notifications