ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ನಡೆಯಲಿದೆಯೆ ಹಳೆಯ ಆಪ್ತರ ಕಾದಾಟ?- ಈಗಲೇ ಅಖಾಡ ಸೃಷ್ಟಿ
ಬಳ್ಳಾರಿ, ಆಗಸ್ಟ್, 17: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಶ್ರೀರಾಮುಲು ಸೋತಿದ್ದರು. ಆಗ ರಾಜ್ಯದ ಗಮನ ಸೆಳೆದ ಶ್ರೀರಾಮುಲು ಇದೀಗ ತವರು ಕ್ಷೇತ್ರ ಬಳ್ಳಾರಿ ಗ್ರಾಮೀಣದ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಆದರೆ ಮತ್ತೊಂದೆಡೆ ರಾಮುಲು ಆಪ್ತ ಶಾಸಕ ನಾಗೇಂದ್ರ ಕೂಡ ಇದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಯಲು ಮುಂದಾಗಿರುವುದು ಸಂಚಲನ ಮೂಡಿಸಿದೆ.
ಕ್ಷೇತ್ರದ ಕಾಂಗ್ರೆಸ್ ಶಾಸಕ ನಾಗೇಂದ್ರ ಅವರು ಈ ಹಿಂದೆ ಶ್ರೀರಾಮುಲು ಅವರ ಆಪ್ತರಾಗಿದ್ದರು. ಇಷ್ಟು ದಿನಗಳ ಕಾಲ ಪರಸ್ಪರ ಹೊಂದಾಣಿಕೆಯಿಂದ ಇದ್ದರು. ಆದರೆ ಚುನಾವಣೆ ಹತ್ತಿರ ಆಗುತ್ತಿದ್ದಂತೆ ಇವರಿಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಸದ್ಯ ಇಡೀ ಜಿಲ್ಲೆಯಲ್ಲಿ ಶ್ರೀರಾಮುಲು ಅವರಿಗೆ ಪ್ರಬಲ ಪ್ರತಿಸ್ಪರ್ಧಿ ನಾಗೇಂದ್ರ ಮಾತ್ರ ಎಂಬುದು ಕಾಂಗ್ರೆಸ್ನ ಲೆಕ್ಕಾಚಾರ ಆಗಿದೆ. ಸಚಿವ ಶ್ರೀರಾಮುಲು ವಿರುದ್ಧ ನಾಗೇಂದ್ರ ಮಾತನಾಡುತ್ತಿರಲಿಲ್ಲ. ಇದೀಗ ಚುನಾವಣೆ ಹತ್ತಿರ ಆಗುತ್ತಿದ್ದಂತೆ ಇವರಿಬ್ಬರ ನಡುವೆ ವಾಕ್ಸಮರವೇ ಶುರುವಾಗಿದೆ. ನಾಗೇಂದ್ರ ದಿನದಿಂದ ದಿನಕ್ಕೆ ಬಹಿರಂಗವಾಗಿಯೇ ಶ್ರೀರಾಮುಲು ಅವರಿಗೆ ಮಾತಿನಲ್ಲಿ ತಿವಿಯುತ್ತಿದ್ದಾರೆ.
ಬಳ್ಳಾರಿ: ಉದ್ಯೋಗದ ಭರವಸೆ ನೀಡಿ ಭೂಮಿ ವಶ; ಭೂಮಿಯೂ ಇಲ್ಲ, ಉದ್ಯೋಗವೂ ಇಲ್ಲ
ಶಾಸಕ ನಾಗೇಂದ್ರ ಅವರು ಇತ್ತೀಚೆಗೆ ಶ್ರೀರಾಮುಲು ವಿರುದ್ಧವೇ ಹರಿಹಾಯ್ದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಉತ್ಸಾಹಕ್ಕೆ ಕಾರಣವಾಗಿದೆ. ಬಳ್ಳಾರಿ ಗ್ರಾಮೀಣ ಭಾಗಕ್ಕೆ ಶ್ರೀರಾಮುಲು ಅವರು ಬಂದರೆ ನಾಗೇಂದ್ರ ಕ್ಷೇತ್ರ ಬದಲಿಸುತ್ತಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಸದ್ದ ಮಾಡಿತ್ತು. ಆದರೆ ಆಗಸ್ಟ್ 15ರಂದು ಬಳ್ಳಾರಿ ಗ್ರಾಮೀಣದಲ್ಲಿ ಯಾರೇ ಸ್ಪರ್ಧಿಸಿದರೂ ಪರವಾಗಿಲ್ಲ. ನಾನು ಕೂಡ ಸ್ಪರ್ಧೆಗೆ ತಯಾರಾಗಿರುವೆ ಎಂದು ನಾಗೇಂದ್ರ ಸ್ಪಷ್ಟಪಡಿಸಿರುವುದು.
ನಾಗೇಂದ್ರ ರಾಮುಲುಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದೇಕೆ?
ಬಿ.ನಾಗೇಂದ್ರ ಅವರು 2008ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಜನಾರ್ಧನ ರೆಡ್ಡಿ ಅವರ ಸೂಚನೆಯ ಮೇರೆಗೆ ಶ್ರೀರಾಮುಲು ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. 2013ರಲ್ಲಿ ಪಕ್ಷೇತರವಾಗಿ ಕೂಡ್ಲಿಗಿಯಲ್ಲಿ ಗೆಲುವು ಸಾಧಿಸಿದರು. ಆದರೆ ರಾಜಕೀಯ ಸ್ಥಿತಿಗತಿಗಳನ್ನು ಗಮನಿಸಿ ಕಾಂಗ್ರೆಸ್ ಪಕ್ಷಕ್ಕೆ ಬಂದು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಕಳೆದ ಬಾರಿ ಶ್ರೀರಾಮುಲು ತವರು ಕ್ಷೇತ್ರ ಬಿಟ್ಟು ಮೊಳಕಾಲ್ಮೂರು ಕ್ಷೇತ್ರಕ್ಕೆ ಹೋಗಿದ್ದರು. ತವರು ಕ್ಷೇತ್ರದ ಮಹತ್ವವನ್ನು ಅರಿತ ಶ್ರೀರಾಮುಲು, ಈ ಬಾರಿ ತವರು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನುವಂತಹ ಸ್ಥತಿ ನಿರ್ಮಾಣವಾಗಿದೆ. ಇಬ್ಬರ ಮಧ್ಯೆ ಇರುವ ಸ್ನೇಹವು ರಾಜಕೀಯ ವೈರತ್ವಕ್ಕೆ ಕಾರಣವಾದಂತೆ ಕಾಣುತ್ತಿದೆ.
ಸಂಚಲನ ಮೂಡಿಸಿದ ಶಾಸಕ ನಾಗೇಂದ್ರ ಹೇಳಿಕೆ
ಶ್ರೀರಾಮುಲು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದ ಮೇಲೆ ಹಲವು ವೇದಿಕೆಗಳನ್ನು ಇಬ್ಬರು ಹಂಚಿಕೊಳ್ಳುತ್ತಿದ್ದರು. ಇದರ ಜೊತೆಗೆ ಅಕ್ಕಪಕ್ಕದಲ್ಲಿ ಕುಳಿತು ಮಾತನಾಡುತ್ತಿದ್ದರು. ಕಳೆದ ಏಳೆಂಟು ದಿನಗಳ ಅವಧಿಯಲ್ಲಿ ಇವರಿಬ್ಬರ ಮಧ್ಯೆ ಅಸಮಾಧಾನ ಉಂಟಾಗಿದೆ. ಶ್ರೀರಾಮುಲು ನಾಗೇಂದ್ರ ತಾನು ಬೆಳೆಸಿದ ಹುಡುಗ ಎಂದು ಮಾತನಾಡಿದ್ದರು. ಈ ವಿಚಾರವನ್ನು ಇಟ್ಟುಕೊಂಡು ನಾಗೇಂದ್ರ ಅವರು ಆಗಸ್ಟ್ 15ರಂದು ಇದು ಶ್ರೀರಾಮುಲು ಅವರ ಸಂಸ್ಕೃತಿ ತೋರಿಸುತ್ತದೆ. ಪರಸ್ಪರ ಸಹಕಾರದಿಂದ ಇಬ್ಬರು ಬೆಳೆದಿದ್ದೇವೆ. ಅವರಿಂದಲೇ ನಾನು ಬೆಳೆದಿದ್ದು ಎಂದು ಹೇಳುವುದು ತಪ್ಪು. ಅವರ ಸಹೋದರಿ ಗೆಲುವಿನಲ್ಲಿ ನನ್ನ ಪಾತ ಇರಲಿಲ್ಲವೇ? ದೊಡ್ಡವರಾಗಿ ಹೀಗೆ ಹೇಳಬಾರದು ಎಂದು ಕಿಡಿಕಾರಿದ್ದರು.
ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ ರಾಮುಲು
ಶ್ರೀರಾಮಲು ನಂತರ ಮಾತನಾಡಿ ನಾನು ನಾಗೇಂದ್ರ ಅವರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ ಎಂದು ಹೇಳುವುದರ ಮೂಲಕ ಅಸಮಾಧಾನಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ಆಗಸ್ಟ್ 15ರಂದು ಕುರುಬ ಸಮಾಜದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ನಮ್ಮ ಮಧ್ಯೆ ವೈಯಕ್ತಿಕ ಅಸಮಾಧಾನವಿಲ್ಲ. ಇಬ್ಬರು ಏನೋ ಮಾಡಿಕೊಂಡು ವಿಧಾನಸಭಾ ಪ್ರವೇಶ ಮಾಡುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದ್ದರು. ಹೀಗೆ ಸಿದ್ದರಾಮಯ್ಯ ಮತ್ತು ತಮ್ಮ ಬಾಂಧವ್ಯದ ಬಗ್ಗೆ ಬಹಿರಂಗ ವೇದಿಕೆಯಲ್ಲಿ ಬಿಚ್ಚಿಟ್ಟರು.
"ಬಳ್ಳಾರಿ ಗ್ರಾಮೀಣ ಕ್ಷೇತ್ರವನ್ನು ಬಿಡುವುದಿಲ್ಲ"
ನಂತರ ವೇದಿಕೆಯಲ್ಲಿ ನಾಗೇಂದ್ರ ಮಾತನಾಡಿ, ಸಿದ್ದರಾಮಯ್ಯ ಅವರು ಯಾವತ್ತು ಸಲುಗೆಯ ರಾಜಕೀಯ ಮಾಡಿಲ್ಲ. "ಶ್ರೀರಾಮುಲು ಅಣ್ಣನವರು ಹಿರಿಯರಾದ ಸಿದ್ದರಾಮಯ್ಯ ಅವರನ್ನು ಎದ್ದರಾಮಯ್ಯ, ಬಿದ್ದರಾಮಯ್ಯ ಎಂದು ಬಹಿರಂಗ ಹೇಳಿಕೆ ನೀಡುವುದನ್ನು ಬಿಡಬೇಕು," ಎಂದು ಹೇಳುವ ಮೂಲಕ ಸಚಿವರಿಗೆ ತಿರುಗೇಟು ನೀಡಿದ್ದರು. ಶ್ರೀರಾಮುಲು ಬಳ್ಳಾರಿ ಉಸ್ತುವಾರಿ ಆದ ಬಳಿಕ ಗ್ರಾಮಾಂತರ ಕ್ಷೇತ್ರದಲ್ಲಿ ಒಡಾಟ ಹೆಚ್ಚಾಗಿದೆ. ಇದರ ಬೆನ್ನಲೆ ತಾವು ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲವೆಂದು ನಾಗೇಂದ್ರ ಹೇಳಿರುವುದು ಇಡೀ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.