ಮೈಲಾರ ಕಾರ್ಣಿಕಕ್ಕೆ ಭಕ್ತರಿಗೆ ಪ್ರವೇಶವಿಲ್ಲ; ಕಾರ್ಣಿಕ ಕೇಳಲು ವ್ಯವಸ್ಥೆ
ವಿಜಯನಗರ, ಫೆಬ್ರವರಿ 08; ಹೂವಿನ ಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆ ಮತ್ತ ಕಾರ್ಣಿಕೋತ್ಸವ ಹಾಗೂ ಕುರವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.
ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಭಕ್ತಾದಿಗಳು & ಸಾರ್ವಜನಿಕರು ಜಾತ್ರೆಯಲ್ಲಿ ಪಾಲ್ಗೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಭಕ್ತರು ಜಿಲ್ಲಾಡಳಿತದ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆ ಆರಂಭವಾಗಿದೆ. ಫೆಬ್ರವರಿ 19ರವರೆಗೆ ಜಾತ್ರೆ ನಡೆಯಲಿದೆ. ಫೆಬ್ರವರಿ 18ರಂದು ಕಾರ್ಣಿಕೋತ್ಸವ ನಡೆಯಲಿದೆ. ಈ ಜಾತ್ರಾ ಕಾರ್ಣಿಕೋತ್ಸವವನ್ನು ವೀಕ್ಷಿಸಲು ರಾಜ್ಯದ ನಾನಾ ಕಡೆಯಿಂದ ಸುಮಾರು 9 ರಿಂದ 10 ಲಕ್ಷ ಜನರು ಸೇರಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಕುರುವತ್ತಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಬಸವೇಶ್ವರ ಸ್ವಾಮಿ ರಥೋತ್ಸವ ಫೆಬ್ರವರಿ 25ರಿಂದ ಮಾರ್ಚ್ 2ರವರೆಗೆ ನಡೆಯಲಿದ್ದು, ಮಾ. 2ರಂದು ರಥೋತ್ಸವ ನಿಗದಿಯಾಗಿದೆ. ಇಲ್ಲಿಯೂ ಅಪಾರ ಭಕ್ತಾದಿಗಳು ಸೇರವುದರಿಂದ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ದಂಡ ಪ್ರಕ್ರಿಯೆ ಸಂಹಿತೆ 1973 ಕಲಂ 144 ಸೆಕ್ಷನ್ ಅನ್ವಯ ಜನರ ಪಾಲ್ಗೊಳ್ಳುವಿಕೆ ನಿಷೇಧಿಸಲಾಗಿದೆ.
ಆದರೆ ರೂಢಿ, ಸಂಪ್ರದಾಯದ ಪೂಜಾ ಕೈಂಕರ್ಯಗಳನ್ನು ಕಾರ್ಣಿಕೋತ್ಸವ,ರಥೋತ್ಸವ, ಧಾರ್ಮಿಕ ಆಚರಣೆಗಳನ್ನು ದೇವಸ್ಥಾನದ ವತಿಯಿಂದ ನಿರ್ವಹಿಸಲು ಅವಕಾಶ ನೀಡಲಾಗಿದೆ. ಜನರು ಈ ವರ್ಷ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ಕಾರ್ಯಕ್ರಮದಲ್ಲಿ ಮತ್ತು ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಬಸವೇಶ್ವರಸ್ವಾಮಿ ರಥೋತ್ಸವಕ್ಕೆ ಆಗಮಿಸಬಾರದು ಎಂದು ಮನವಿ ಮಾಡಿದ್ದಾರೆ.
ವಿಶೇಷ ಬಸ್ ವ್ಯವಸ್ಥೆ ಇಲ್ಲ; ಪ್ರತಿ ವರ್ಷ ಮೈಲಾರ ಕಾರ್ಣಿಕ ಮತ್ತು ಕುರುವತ್ತಿ ಕ್ಷೇತ್ರಕ್ಕೆ ಭಕ್ತರು ಸಂಚಾರ ನಡೆಸಲು ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ವಿಶೇಷ ಬಸ್ಗಳು ಇಲ್ಲ ಮತ್ತು ಜಾತ್ರಾ ಪ್ರದೇಶದಲ್ಲಿ ವಾಣಿಜ್ಯ ವಹಿವಾಟುಗಳನ್ನು ನಡೆಸಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.
ಭಕ್ತರು ಜಾತ್ರೆಗೆ ಆಗಮಿಸದಂತೆ ವಿವಿಧ ಮಾಧ್ಯಮದ ಮೂಲಕ ಫ್ಲೆಕ್ಸ್, ಬ್ಯಾನರ್, ಪೋಸ್ಟರ್ ಹಾಕಿ ಪ್ರಚಾರ ಮಾಡಲಾಗುತ್ತಿದೆ. ಹರಪನಹಳ್ಳಿ, ಹೂವಿನಹಡಗಲಿ ಎಲ್ಲಾ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಪ್ರಚಾರವನ್ನು ನಡೆಸಲಾಗುತ್ತಿದೆ.
ಕಾರ್ಣಿಕ ಕೇಳಲು ವ್ಯವಸ್ಥೆ; ಫೆಬ್ರವರಿ 18ರಂದು ನಡೆಯುವ ಕಾರ್ಣಿಕವನ್ನು ಸ್ಪಷ್ಟವಾಗಿ ಕೇಳುವ ಹಾಗೆ ಧ್ವನಿವರ್ಧಕ ವ್ಯವಸ್ಥೆ ಮತ್ತು ಕಾರ್ಣಿಕ ನುಡಿಯನ್ನು ಸೆರೆಯಿಡಿಯಲು ಅತ್ಯಾಧುನಿಕ ಸಲಕರಣೆಗಳನ್ನು ಬಳಸಿಕೊಂಡು ರೆಕಾರ್ಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ.
ವಾಹನಗಳು ಮೈಲಾರ ಗ್ರಾಮಕ್ಕೆ ಬರಲು ಮತ್ತು ಭಕ್ತಾಧಿಗಳಿಗೆ ಮೈಲಾರ ಗ್ರಾಮದಲ್ಲಿ ಫೆಬ್ರವರಿ 19ರವರೆಗೆ ವಾಸ್ತವ್ಯ ಮಾಡಲು ಅವಕಾಶ ಇರುವುದಿಲ್ಲ. ಮೈಲಾರ, ಕುರವತ್ತಿ, ಹ್ಯಾರಡಾ, ಹಾವೇರಿ, ಹೊಳಲು ಕಡೆಯಿಂದ ಲಾರಿ, ಟ್ರ್ಯಾಕ್ಟರ್, ಎತ್ತಿನ ಬಂಡಿ, ಲಘು ವಾಹನ, ಕಾರು, ಆಟೋ, ಮಿನಿ ಬಸ್, ಇತ್ಯಾದಿ ವಾಹನಗಳು ಮೈಲಾರ ಗ್ರಾಮಕ್ಕೆ ಬಾರದಂತೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುತ್ತಿದೆ.
ಮೈಲಾರ ಮತ್ತು ಕುರುವತ್ತಿ ಗ್ರಾಮದ ಜಮೀನುಗಳಲ್ಲಿ ಜಾತ್ರೆ ಅಂಗವಾಗಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶ ಇರುವುದಿಲ್ಲ. ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆಯಿಂದ ಪ್ರತಿ ವರ್ಷದಂತೆ ವೈದ್ಯರು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ.
ಕುಡಿಯುವ ನೀರಿನ ವ್ಯವಸ್ಥೆಗಾಗಿ ತುಂಗ ಭದ್ರಾ ನದಿಗೆ ನೀರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಕೋವಿಡ್-19 ಮಾರ್ಗಸೂಚಿಯನ್ವಯ ಧಾರ್ಮಿಕ ಕಾರ್ಯ ನಡೆಸಲು ಸೂಚನೆ ನೀಡಲಾಗಿದೆ.












Click it and Unblock the Notifications