ಪುತ್ರಿಯ ಅದ್ದೂರಿ ಮದುವೆ ಬಗ್ಗೆ ಸಚಿವ ಶ್ರೀರಾಮುಲು ಹೇಳಿದ್ದೇನು?
ಬೆಂಗಳೂರು, ಮಾ. 01: ಪುತ್ರಿಯ ಅದ್ದೂರಿ ವಿವಾಹದ ಬಗ್ಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮಾತನಾಡಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿರುವ ಶ್ರೀರಾಮುಲು ಅವರು ಪುತ್ರಿಯ ವಿವಾಹಕ್ಕೆ ನಾಡಿನ ಜನತೆಗೆ ಆತ್ಮೀಯ ಆಮಂತ್ರಣ ಕೊಟ್ಟಿದ್ದೇನೆ. ಅದ್ದೂರಿ ಮದುವೆ ನಡೆಯುತ್ತಿಲ್ಲ, ಬದಲಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ..
ಇದೇ ಮಾರ್ಚ್ 5 ರಂದು ಪುತ್ರಿ ರಕ್ಷಿತಾ ಹಾಗೂ ಲಲಿತ್ ಸಂಜೀವ್ ರೆಡ್ಡಿ ಅವರು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಸಾಧ್ಯವಾದಷ್ಟು ಪ್ರಯತ್ನ ಮಾಡಿ ಇಡೀ ರಾಜ್ಯದಲ್ಲಿ ಎಲ್ಲರಿಗೂ ಆಹ್ವಾನ ಪತ್ರಿಕೆಯನ್ನು ಕೊಟ್ಟಿದ್ದೇನೆ. ಆದರೂ ಕೆಲವೊಂದು ಮಂದಿಗೆ ಯಾರಿಗೆ ಆಹ್ವಾನ ಪತ್ರ ಬಂದಿಲ್ಲವೋ, ಅವರೆಲ್ಲರೂ ಕೂಡ ಶ್ರೀರಾಮುಲು ಅವರು ಕರೆದಿದ್ದಾರೆ ಎಂದು ತಿಳಿದುಕೊಂಡು, ಆಹ್ವಾನ ಪತ್ರಿಕೆಯನ್ನು ಕೊಟ್ಟಿದ್ದಾರೆ ಎಂದುಕೊಂಡು ಎಲ್ಲರೂ ಬರಬೇಕು.
ಬೆಂಗಳೂರು ಅರಮನೆ ಮೈದಾನದಲ್ಲಿ ಮಾರ್ಚ್ 5ರಂದು ನಡೆಯುವ ನನ್ನ ಮಗಳು, ನಿಮ್ಮ ತಂಗಿಯ ಮದುವೆಗೆ ನೀವೆಲ್ಲರೂ ಕೂಡ ಬಂದು ಆಶೀರ್ವಾದ ಮಾಡಬೇಕೆಂದು ನಿಮ್ಮೆಲ್ಲರಲ್ಲಿಯೂ ಬೇಡುತ್ತಿದ್ದೇನೆಂದು ಸಚಿವ ಶ್ರೀರಾಮುಲು ಅವರು ಮನವಿ ಮಾಡಿಕೊಂಡಿದ್ದಾರೆ.

ಅದ್ದೂರಿಯಲ್ಲ, ಸಾಂಪ್ರದಾಯಿಕ ಮದುವೆ
ಬಹಳಷ್ಟು ಸಾಂಪ್ರದಾಯಿಕವಾಗಿ ವಿವಾಹ ನಡೆಯುತ್ತಿದೆ. ಯಾವುದೇ ಅದ್ದೂರಿ ಮದುವೆಯಲ್ಲಿ ಇಲ್ಲ. ಹಿಂದೂ ಸಾಂಪ್ರದಾಯದ ಪ್ರಕಾರ ಮದುವೆ ಮಾಡುತ್ತಿದ್ದೇವೆ. ನಾಳೆ ಬಳ್ಳಾರಿಯಲ್ಲಿ ವಧುವನ್ನು ಮಧುವಣಗಿತ್ತಿಯನ್ನು ಮಾಡಿಕೊಂಡು ಮಧ್ಯಾಹ್ನ 3 ಗಂಟೆಯ ಬಳಿಕ ಬಳ್ಳಾರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದೇವೆ. ಬೆಂಗಳೂರಿನಲ್ಲಿಯೂ ಹಲವು ಆಚರಣೆಗಳಿವೆ. ಅದಾಗ ಬಳಿ ಮಾರ್ಚ್ 4 ಹಾಗೂ 5 ರಂದು ಅರಮನೆ ಮೈದಾನದಲ್ಲಿ ಮದುವೆ ನಡೆಯಲಿದೆ. ರಜ್ಯದ ಜನರು ಮಗಳ ಮದುವೆಗೆ ಜನರು ಬಂದು ಪುತ್ರಿ ರಕ್ಷಿತಾ ಹಾಗೂ ಲಲಿತ್ ಸಂಜೀವ್ ರೆಡ್ಡಿ ಅವರಿಗೆ ಆಶೀರ್ವಾದ ಮಾಡುತ್ತಾರೆ ಎಂದು ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲು ಅವರು ಮಾಹಿತಿ ಕೊಟ್ಟಿದ್ದಾರೆ.

ಹಿಂದೂ ಸಂಪ್ರದಾಯದಂತೆ ನಡೆಯುತ್ತಿದೆ ಮದುವೆ
ಹಿಂದೂ ಸಂಪ್ರದಾಯದಂತೆ ಮದುವೆ ನಡೆಯುತ್ತಿದೆ. ಹೀಗಾಗಿ ವಿವಾಹದ ಆಚರಣೆಗಳು 9 ದಿನಗಳ ಕಾಲ ನಡೆಯುತ್ತಿವೆ. ಫೆಬ್ರವರಿ 27 ಗುರುವಾರದಿಂದಲೇ ಮದುವೆಯ ಶಾಸ್ತ್ರಗಳು ಆರಂಭವಾಗಿದ್ದು, 9 ದಿನ ಸತತವಾಗಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿವೆ.
ಫೆ. 28ಕ್ಕೆ ಬಳ್ಳಾರಿಯಲ್ಲಿ ಚಪ್ಪರದ ಶಾಸ್ತ್ರ ನಡೆದಿದ್ದು, ಜತೆಗೆ ಗಣಪತಿ ಹೋಮ ನಡೆದಿದೆ. ನಿನ್ನೆ ಮನೆ ದೇವರ ಪೂಜೆ ನಡೆದಿದ್ದು, ಇವತ್ತು ಮಾರ್ಚ್ 1ಕ್ಕೆ ಹಳದಿ ಮೆಹಂದಿ, ಬಳೆ ಶಾಸ್ತ್ರದ ಕಾರ್ಯಗಳು ನಡೆದಿವೆ. 2 ರಂದು ಮಧುಮಗಳಿಂದ ಬಳ್ಳಾರಿಯ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿ, ನಂತರ ಸಂಜೆ ಬೆಂಗಳೂರಿಗೆ ತೆರಳಲಿದ್ದಾರೆ.

ನಾಳೆ ಬೆಂಗಳೂರಿಗೆ ವಧು-ವರರ ಪ್ರಯಾಣ
ನಾಳೆ ಬಳ್ಳಾರಿ ನಗರ ದೇವತೆ ದುರ್ಗಮ್ಮದೇವಿಗೆ ವಿಶೇಷ ಪೂಜೆಯ ಬಳಿಕ ವಧು ರಕ್ಷಿತಾ ಹಾಗೂ ವರ ಲಲಿತ್ ಸಂಜೀವ್ ರೆಡ್ಡಿ ಅವರು ಬಳ್ಳಾರಿಯಿಂದ ಬೆಂಗಳೂರಿಗೆ ತೆರಳಲಿದ್ದಾರೆ. ನಾಡಿದ್ದು ಮಾರ್ಚ್ 3ಕ್ಕೆ ಮದುಮಗಳು ರಕ್ಷಿತಾ ಅವರ ಸ್ನೇಹಿತೆಯರಿಗಾಗಿ ರೇಸ್ಕೋರ್ಸ್ ರಸ್ತೆಯ ಹೋಟೆಲ್ ತಾಜ್ವೆಸ್ಟೆಂಡ್ನಲ್ಲಿ ಮೆಹಂದಿ ಕಾರ್ಯಕ್ರಮ ನಡೆಯಲಿದೆ. ಮಾ. 4ರಂದು ವರನ ಬಂಧುಗಳು ಬೆಂಗಳೂರಿಗೆ ಬರಲಿದ್ದಾರೆ.

ಮಾರ್ಚ್ 5 ರಂದು ಸಂಜೆ ಬಳ್ಳಾರಿಯಲ್ಲಿ ಆರತಕ್ಷತೆ
ವಿವಾಹದ ನಂತರ ಅದೇ ದಿನ ಮಾ. 5ರಂದು ವಧು-ವರರು ಬಳ್ಳಾರಿಗೆ ತೆರಳಲಿದ್ದಾರೆ. ಸಂಜೆ ಬಳ್ಳಾರಿಯಲ್ಲಿ 6 ಗಂಟೆಯಿಂದ ಸ್ಥಳೀಯರಿಗಾಗಿ ಆರತಕ್ಷತೆಯನ್ನು ಏರ್ಪಡಿಸಲಾಗಿದ್ದು, ಅಲ್ಲಿ ಸುಮಾರು 12 ಸಾವಿರ ಮಂದಿ ಸೇರಲಿದ್ದಾರೆ. ತಮ್ಮ ಮಗಳಿಗೆ ತನ್ನೂರಿನ ಜನ ಮತ್ತು ಕರ್ನಾಟಕದ ಜನರ ಆಶೀರ್ವಾದ ಇರಲಿ ಎಂದು ಸಚಿವ ಶ್ರೀರಾಮುಲು ಅವರು ತಯಾರಿಗಳನ್ನು ಮಾಡುತ್ತಿದ್ದಾರೆ.
ಜೊತೆಗೆ ಶ್ರೀರಾಮುಲು ಅವರ ಸ್ನೇಹಿತರಾದ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಅವರ ಮಾರ್ಗದರ್ಶನದಲ್ಲಿ ಎಲ್ಲ ಸಂಪ್ರದಾಯಿಕ ಕಾರ್ಯಕ್ರಮಗಳು ನಡೆಯುತ್ತಿವೆ.












Click it and Unblock the Notifications